ಬೆಳಗಾವಿ: ಕೇಂದ್ರ ಸರ್ಕಾರದ 7 ವರ್ಷದ ಆಡಳಿತದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಯೋಜನೆಗಳನ್ನು ಪ್ರಧಾನಿ ಮೋದಿ ಮಾಡಿಲ್ಲ. ಹೀಗಾಗಿ ನಮ್ಮ ಯೋಜನೆಗಳ ಹೆಸರುಗಳನ್ನ ಬದಲಾವಣೆ ಮಾಡಿ ನಮ್ಮ ಸಾಧನೆ ಎಂದು ದೇಶಕ್ಕೆ ಹೇಳುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು.
ಸೋಮವಾರ ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸತೀಶ ಜಾರಕಿಹೊಳಿ ಮೋದಿ ಸರ್ಕಾರ ದೇಶದಲ್ಲಿ ಆಡಳಿತಕ್ಕೆ ಬಂದು ಏಳು ವರ್ಷ ಆಗಿದೆ. ಆದರೆ ದೇಶದ ಜನರಿಗೆ ಹೇಳಲು ಯಾವುದೇ ಯೋಜನೆಗಳನ್ನು ಇವರು ಮಾಡಿಲ್ಲ. ಹೀಗಾಗಿ ನಮ್ಮ ಆಡಳಿತದ ಯೋಜನೆಗಳನ್ನು ನೇಮ್, ಬೋರ್ಡ ಚೇಂಜ್ ಮಾಡಿ ಇವು ನಮ್ಮ ಯೋಜನೆಗಳು ಎಂದು ದೇಶದ ಜನರನ್ನು ನಂಬಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಮಾಡೋದರಿಂದ ಜನರು ಏನು ಮೋಸ ಹೋಗುವುದಿಲ್ಲ. ಹೆಸರು ಬದಲಾವಣೆ ಮಾಡೋದರಿಂದ ಯಾವುದೇ ಪ್ರಯೋಜಲ ಆಗುವುದಿಲ್ಲ ಮತ್ತು ದೊಡ್ಡ ಬದಲಾವಣೆ ಏನೂ ಆಗುವುದಿಲ್ಲ. ಇಂದಿರಾ ಗಾಂಧಿ ಹೆಸರಿನ ಮೇಲೆ ನಡೆಯಬೇಕು ಎಂಬುದು ನಮ್ಮ ಆಸೆಯಾಗಿದೆ. ಹೆಸರು ಬದಲಾವಣೆ ಮಾಡೋದರಿಂದ ನಮ್ಮ ಸಾಧನೆ ಮುಚ್ಚಿ ಇಡೋದಿಕ್ಕೆ ಆಗುವುದಿಲ್ಲ. ಒಟ್ಟಿನಲ್ಲಿ ಸಿದ್ದರಾಮಯ್ಯನವರು ವಿಶೇಷ ಕಾಳಜಿ ವಹಿಸಿ ಹೆಚ್ಚಿನ ಅನುದಾನ ಕೊಡುತ್ತಿದ್ದರು. ಆದರೆ ನಮ್ಮ ಯೋಜನೆ ಜನಪ್ರಿಯ ಆಗುತ್ತದೆ ಎಂದು ಇವರು ದುಡ್ಡು ಕೊಡುತ್ತಿಲ್ಲ ಎಂದು ಇದೇ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಸತೀಶ ಜಾರಕಿಹೊಳಿ ವಾಗ್ದಾಳಿ ಮಾಡಿದರು.