HUBLI : : ಪಾರ್ಟಿ ನನಗೆ ಧಾರವಾಡ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಟಿಕೆಟ್ ಕೊಟ್ಟಿದೆ, ಈ ಬಾರಿಯೂ ಧಾರವಾಡದಿಂದಲೇ ಸ್ಪರ್ಧಿಸುವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತಾಡಿದ ಅವರು, ಬಿಜೆಪಿ ರಾಜ್ಯದಲ್ಲಿ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವ ಹಾಗೂ ಬಿಜೆಪಿಯ ಸಂಘಟನಾ ಶಕ್ತಿಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಹೀಗಾಗಿ ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಕಾವೇರಿ ವಿವಾದದ ವಿಷಯ ಡೈವರ್ಟ್ ಮಾಡಲು ಪಕ್ಷಾಂತರ ವಿಚಾರ ಮುಂದೆ ತಂದಿದ್ದಾರೆ ಎಂದರು.
ಇನ್ನು, ಸಚಿವ ರಾಮಲಿಂಗಾರೆಡ್ಡಿಯವರು ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಹೀಗೆಲ್ಲ ಹೇಳೋಕೆ ಅವರು ನಮ್ಮ ಪಕ್ಷದಲ್ಲಿ ಇದ್ರಾ..? ಎಂದು ಪ್ರಶ್ನಿಸಿದರು.
ಇನ್ನು ಸಚಿವ ಚೆಲುವರಾಯಸ್ವಾಮಿ ಹೇಳಿಕೆಗೆ ನಾನು ಉತ್ತರ ಕೊಡುವ ಅಗತ್ಯವಿಲ್ಲ ಎಂದ ಕೇಂದ್ರ ಸಚಿವರು,
ಚೆಲುವರಾಯಸ್ವಾಮಿಯವರ ಮೇಲೆ ಗಂಭೀರ ಆರೋಪ ಬಂದಿದ್ದು, ಅವರು ರಾಜಿನಾಮೆ ಕೊಡಬೇಕು ಎಂದರು. ಕಾಂಗ್ರೆಸ್ ಸರ್ಕಾರದ ಮೇಲೆ ಗಂಭೀರ ಆರೋಪಗಳು ಕೇಳಿ ಬಂದಿವೆ ಹಾಗೂ ಈ ಆರೋಪಗಳು ಪ್ರಾಥಮಿಕವಾಗಿ ಮೇಲ್ನೋಟಕ್ಕೆ ಸತ್ಯ ಎಂಬಂತಿವೆ ಹೀಗಾಗಿ ಚೆಲುವರಾಯಸ್ವಾಮಿಯವರು ಈ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಇನ್ನು ದೂರು ಕೊಟ್ಟ ಗುತ್ತಿಗೆದಾರರನ್ನು ಮೊದಲು ಪೊಲೀಸ್ ಠಾಣೆಗೆ ಕರೆಸುತ್ತಿದ್ದಾರೆ.
ಗುತ್ತಿಗೆದಾರರನ್ನು ಹೆದರಿಸಿ ಬೆದರಿಸಿ ಉಲ್ಟಾ ಹೊಡೆಯುವ ಹಾಗೆ ಮಾಡಿದ್ದಾರೆ ಎಂದು ಸಚಿವ ಜೋಶಿಯವರು ಆಪಾದಿಸಿದರು.
ಕಾವೇರಿ ವಿಷಯದಲ್ಲೂ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದ ಪ್ರಲ್ಹಾದ ಜೋಶಿಯವರು, ಕಾಂಗ್ರೆಸ್ ನಾಯಕರು ಕಾವೇರಿ ವಿಚಾರದಲ್ಲಿ ಗಟ್ಟಿ ನಿಲುವು ತೆಗೆದುಕೊಂಡು ಹೇಳುವ ಪ್ರಯತ್ನ ಮಾಡುತ್ತಿಲ್ಲ, ದೇಶದಲ್ಲಿ ಮೈತ್ರಿ ಉಳಿಸಿಕೊಳ್ಳುವತ್ತ ಮಾತ್ರ ಕಾಂಗ್ರೆಸ್ ಗಮನ ನೆಟ್ಟಿದೆ ಎಂದರು.
ಇನ್ನು, ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದ ಸಚಿವರು ರಾಜ್ಯದಲ್ಲಿ ಪವರ್ ಕಟ್ ಶುರುವಾಗಿದೆ, ಇದರ ಬಗ್ಗೆ ಕೇಳಿದರೆ
ಮಳೆಯಿಲ್ಲ, ಗಾಳಿಯಿಲ್ಲ ಅಂತಾರೆ. ಇವರ ಗಾಳಿಯೇ ಉಲ್ಟಾ ಆಗಿದೆ, ಹೀಗಾಗಿ ಕ್ಷುಲ್ಲಕ ರಾಜಕಾರಣ ಮಾಡಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಈ ಹಿಂದೆ ಪತ್ರ ಬರೆದು ಕಾಂಗ್ರೆಸ್ ಪಾಳೆಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಬಿ.ಆರ್. ಪಾಟೀಲರು ಈಗ ಮತ್ತೆ ಪತ್ರ ಬರಿತೀನಿ ಎಂದಿದ್ದಾರೆ. ಬಸವರಾಜ ರಾಯರೆಡ್ಡಿ ಅವರು ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದಿದ್ದಾರೆ. ಕಾಂಗ್ರೆಸ್ ಗೆ ನೇತೃತ್ವವೂ ಇಲ್ಲ, ನಿಯತ್ತೂ ಇಲ್ಲ ಎಂದ ಪ್ರಲ್ಹಾದ ಜೋಶಿಯವರು, ಬಿಜೆಪಿ ಬಂಡೆಗಲ್ಲಿನಂತೆ ಗಟ್ಟಿಯಾಗಿದೆ ಎಂದರು.
ಗಣೇಶ ಹಬ್ಬವನ್ನು ನಮ್ಮಭಾಗದಲ್ಲಿ ವಿಜೃಂಭಣೆಯಿಂದ ಮಾಡುತ್ತೇವೆ, ಈ ಸಂಧರ್ಭದಲ್ಲಿ ಡಿಜೆ ಸೇರಿದಂತೆ ಯಾವುದೇ ನಿರ್ಬಂಧ ಹೇರಬಾರದು.
ಈದ್ಗಾ ಮೈದಾನ ಸಾರ್ವಜನಿಕರ ಆಸ್ತಿ, ಅಲ್ಲಿ ಕಳೆದ ಬಾರಿಯೂ ಗಣೇಶ ಕೂರಿಸಿ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಿದ್ದೇವೆ. ಈ ಬಾರಿಯೂ ಅಲ್ಲಿ ಅದೇ ಸಂಪ್ರದಾಯ ಮುಂದುವರಿಯಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯಾವುದೆ ಗೊಂದಲ ಮಾಡಲ್ಲ ಅಂದುಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಸೂಕ್ತ ತೀರ್ಮಾನ ಮಾಡಬೇಕು. ಅದು ಮುಸ್ಲಿಮರ ಜಾಗವಲ್ಲ, ಹೀಗಾಗಿ ಅವರು ಈ ಬಗ್ಗೆ ವಿವಾದ ಮಾಡಬಾರದು, ಅವರಿಗೂ ನಮಾಜ್ಗೆ ಅವಕಾಶವಿದೆ. ಹೀಗಿರುವಾಗ ಸರ್ಕಾರ ಅನಗತ್ಯ ವಿವಾದ ಮೈಮೇಲೆ ಎಳೆದುಕೊಳ್ಳಬಾರದು ಎಂದು ಪ್ರಲ್ಹಾದ ಜೋಶಿಯವರು ಹೇಳಿದರು.
ಇನ್ನು ಮಣಿಪುರದ ಬಗ್ಗೆ ಮಾತಾಡಿದ ಕೇಂದ್ರ ಸಚಿವರು, ಕಾಂಗ್ರೆಸ್ ಪಾರ್ಟಿ ಇತಿಹಾಸ ತಿಳಿದುಕೊಳ್ಳಲಿ. ಮಣಿಪುರ ಸೇರಿದಂತೆ ನಾರ್ಥ್ ಈಸ್ಟ್ ನಲ್ಲಿ ಸಾಕಷ್ಟು ಗಲಭೆಗಳಾಗಿವೆ. ಒಬ್ಬರು ಸತ್ತರೂ ನಾವು ಸಂವೇದನಾಶೀಲವಾಗಿ ನೋಡುತ್ತೇವೆ. ಕೇಂದ್ರದ ಗೃಹ ಮಂತ್ರಿಗಳು ಮೂರು ದಿನ ಮಣಿಪುರದಲ್ಲೇ ಇದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಯತ್ನಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಯತ್ನಿಸಲಾಗುತ್ತಿದೆ. ಮಹತ್ವದ ಬಿಲ್ಗಳು ಇದ್ದಾಗ ಕಾಂಗ್ರೆಸ್ ಪಕ್ಷ ಚರ್ಚೆಯಲ್ಲಿ ಭಾಗವಹಿಸಿಲ್ಲ. ಈ ಬಾರಿಯ ಕಾಂಗ್ರೆಸ್ ನ ಮೈತ್ರಿಕೂಟವೆಂದರೆ ಅದು ಘಮಂಡಿಯಾ ಘಟಬಂಧನ ಎಂದು ಪ್ರಲ್ಹಾದ ಜೋಶಿಯವರು ವಿಪಕ್ಷದ ಮೈತ್ರಿಕೂಟದ ಬಗ್ಗೆ ವ್ಯಂಗ್ಯವಾಡಿದರು.