ಬೆಂಗಳೂರು: ರಾಜ್ಯದ ಕಾಮನ್ಮ್ಯಾನ್ ಸಿಎಂ ಎಂದೇ ಜನಮೆಚ್ಚುಗೆ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೆಟ್ರೋಲಿಯಂ ಉತ್ಪನ್ನಗಳ ವ್ಯಾಟ್ ದರ ಕಡಿಮೆ ಮಾಡುವ ಮೂಲಕ ಜನರ ಹೊರೆಯನ್ನು ಕಡಿಮೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್ಕುಮಾರ್ ಕಟೀಲ್ ಅವರು ಮೆಚ್ಚುಗೆ ಸೂಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಸಲಹೆಗೆ ಕೂಡಲೇ ಸ್ಪಂದಿಸಿದ ಕರ್ನಾಟಕದ ಬಿಜೆಪಿ ಸರಕಾರವು ವ್ಯಾಟ್ ದರವನ್ನು ಕಡಿಮೆ ಮಾಡಿದ್ದರಿಂದ ಖಜಾನೆಗೆ ಬರುವ 5,314 ಕೋಟಿ ರೂಪಾಯಿ ಕಡಿಮೆ ಆಗಿದೆ. ಜನರ ಹೊರೆ ಕಡಿಮೆ ಮಾಡುವ ದೃಷ್ಟಿಯಿಂದ ನಮ್ಮ ಸರಕಾರ ಈ ಕ್ರಮ ಕೈಗೊಂಡಿದ್ದು, ಬಿಜೆಪಿ ಕ್ರಮಕ್ಕೆ ಜನಬೆಂಬಲ ಖಚಿತ ಎಂದು ತಿಳಿಸಿದ್ದಾರೆ.
ಆದರೆ, ಕಾಂಗ್ರೆಸ್ ಬೆಂಬಲಿತ ಸರಕಾರ ಆಡಳಿತದಲ್ಲಿರುವ ಮಹಾರಾಷ್ಟ್ರ ರಾಜ್ಯದಲ್ಲಿ ವ್ಯಾಟ್ ಕಡಿಮೆ ಮಾಡದೆ 3,472 ಕೋಟಿ ರೂಪಾಯಿ ಆದಾಯವನ್ನು ಅಲ್ಲಿನ ಸರಕಾರ ಸಂಗ್ರಹಿಸಿದೆ. ತಮಿಳುನಾಡು ಸರಕಾರ 2,924 ಕೋಟಿ ರೂಪಾಯಿ, ಪಶ್ಚಿಮ ಬಂಗಾಲ ಸರಕಾರವು ವ್ಯಾಟ್ ಮೂಲಕ 1,343 ಕೋಟಿ ರೂಪಾಯಿ ಆದಾಯ ಗಳಿಸಿದೆ. ಆದರೆ, ಬಿಜೆಪಿ ಆಡಳಿತ ಇರುವ ಕರ್ನಾಟಕ, ಗುಜರಾತ್ ಮತ್ತು ಉತ್ತರ ಪ್ರದೇಶ ರಾಜ್ಯ ಸರಕಾರಗಳು ಜನರ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ವ್ಯಾಟ್ ಕಡಿಮೆ ಮಾಡುವ ಮೂಲಕ ಕೂಡಲೇ ಸ್ಪಂದಿಸಿವೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಮುಖಂಡರು ಮತ್ತು ದೇಶದ ಇತರ ಕಾಂಗ್ರೆಸ್ ಮುಖಂಡರು ಬಾಯಿ ಬಡಾಯಿ ಕೊಚ್ಚುತ್ತಿದ್ದಾರೆ. ಆದರೆ, ಜನರ ಸಮಸ್ಯೆಗಳಿಗೆ ಅವರು ಸ್ಪಂದನಶೂನ್ಯವಾಗಿದ್ದಾರೆ ಎಂದು ನಳಿನ್ಕುಮಾರ್ ಕಟೀಲ್ ಅವರು ಟೀಕಿಸಿದ್ದಾರೆ.




