ರಾಜ್ಯದಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಿಗೂ ಟ್ಯಾಕ್ಸ್ ಭಯ ಶುರುವಾಗಿದೆ. ಈಗಾಗಲೇ ಬಹಳಷ್ಟು ಅಂಗಡಿಗಳಲ್ಲಿ UPI ತೆಗೆದು ಬರಿ ನಗದು ರೂಪದಲ್ಲಿ ಪೇಮೆಂಟ್ ಮಾಡುವಂತೆ ಬೋರ್ಡ್ ಕೂಡ ಹಾಕುತ್ತಿದ್ದಾರೆ. ಸಣ್ಣ ವ್ಯಾಪಾರಿಗಳಿಗೂ ಲಕ್ಷಗಟ್ಟಲೆ ಟ್ಯಾಕ್ಸ್ ಬರುತ್ತಿರುವುದಕ್ಕೆ ಶಾಕ್ ಆಗಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯಿಂದ ಸಣ್ಣ ಉದ್ದಿಮೆದಾರರಿಗೆ ನೋಟಿಸ್ ಪರ್ವ ಮುಂದುವರೆದಿದೆ. ಇದೀಗ ಬೆಂಗಳೂರಿನಲ್ಲಿ ನಂದಿನಿ ಬೂತ್ನವರಿಗೆ ಕೋಟಿ ಕೋಟಿ ಟ್ಯಾಕ್ಸ್ ಕಟ್ಟುವಂತೆ ನೋಟಿಸ್ ಬಂದಿದೆ.
ಬೆಂಗಳೂರಿನ ಉಲ್ಲಾಳದ ನಂದಿನಿ ಬೂತ್ನ ರವಿ ಅನ್ನೋರಿಗೆ 1 ಕೋಟಿ 3 ಲಕ್ಷ ರೂ. ಟ್ಯಾಕ್ಸ್ ಕಟ್ಟುವಂತೆ ನೋಟಿಸ್ ಬಂದಿದೆ. ಹೀಗಾಗಿ ಅಂಗಡಿ ಮಾಲೀಕ ಸಹಜವಾಗಿಯೇ ಗಾಬರಿಯಾಗಿದ್ದಾರೆ. ಈಗಾಗಲೇ ಜುಲೈ ೨೩ ರಿಂದ 3 ದಿನಗಳ ಕಾಲ ಹಾಲು ಮಾರಾಟ ಬಂದ್ ಮಾಡುವ ವರ್ತಕರ ನಿರ್ಧಾರಕ್ಕೆ ಕೆಲ ನಂದಿನಿ ಬೂತ್ಗಳಿಂದ ಬೆಂಬಲ ಸಿಕ್ಕಿದೆ.
ಜಿಎಸ್ಟಿ ನೋಟಿಸ್ಗೆ ಸಣ್ಣಪುಟ್ಟ ವ್ಯಾಪಾರಿಗಳು ಬೆಚ್ಚಿಬಿದ್ದಿದ್ದಾರೆ. ಆತಂಕಕ್ಕೆ ಒಳಗಾದ ವ್ಯಾಪಾರಿಗಳು ಜು.25 ರಂದು ಸಂಪೂರ್ಣ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಈಗಾಗಲೇ ಕಾರ್ಮಿಕ ಪರಿಷತ್ ಕಚೇರಿಯಲ್ಲಿ ನಗರದ ಕಾಂಡಿಮೆಟ್ಸ್, ಬೇಕರಿ ಅಂಗಡಿ ಮಾಲೀಕರು ಸಭೆ ನಡೆಸಿ, ಬಂದ್ ಅನ್ನು ಯಾವ ರೀತಿ ಮಾಡಬೇಕು, ಎಷ್ಟು ತೀವ್ರಗೊಳಿಸಬೇಕು ಮತ್ತು ಎಲ್ಲೆಲ್ಲಿ ಪ್ರತಿಭಟನೆ ಮಾಡಬೇಕು ಎಂದು ಚರ್ಚಿಸಿದ್ದಾರೆ.
ಸಣ್ಣಪುಟ್ಟ ವ್ಯಾಪಾರಿಗಳ ಈ ಬಂದ್ ಎಲ್ಲಿಯವರೆಗೂ ಹೋಗುತ್ತದೆ, ನಂತರ ರಾಜ್ಯ ಸರ್ಕಾರ ಯಾವ ರೀತಿ ಕ್ರಮ ಕೈಕೊಳ್ಳುತ್ತದೆ ಇದನೆಲ್ಲಾ ಕಾದು ನೋಡಬೇಕಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ