Navaratri Special: ನವದುರ್ಗೆಯರಲ್ಲಿ ಒಬ್ಬಳಾದ ಸ್ಕಂದಮಾತೆಯನ್ನು ಇಂದು ಪೂಜಿಸಲಾಗುತ್ತದೆ. ಸಂತಾನ ಸಮಸ್ಯೆ ಇದ್ದವರು, ಸ್ಕಂದಮಾತೆಯನ್ನು ಆರಾಧಿಸಿದರೆ, ಅಂಥವರಿಗೆ ಸಂತಾನ ಸಮಸ್ಯೆ ದೂರವಾಗಿ, ಮಕ್ಕಳಾಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಯಾರು ಈ ಸ್ಕಂದಮಾತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಸ್ಕಂದ ಎಂದರೆ, ಕಾರ್ತಿಕೇಯ. ಈ ಸ್ಕಂದನ ತಾಯಿ ಪಾರ್ವತಿಯಾಗಿದ್ದು, ಈಕೆಯನ್ನೇ ಸ್ಕಂದ ಮಾತಾ ಎಂದು ಕರೆಯಲಾಗುತ್ತದೆ. ತಾರಕಾಸುರನೆಂಬ ರಾಕ್ಷಸ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ, ತಾನು ಚಿರಂಜೀವಿಯಾಾಗಿರಬೇಕು ಎಂದು ಬಯಸಿದ. ಆದರೆ ಬ್ರಹ್ಮ, ಚಿರಂಜೀವಿಯಾಗಿರಲು ಸಾಧ್ಯವಿಲ್ಲ. ಹುಟ್ಟಿದವನು ಸಾಯಲೇಬೇಕು ಎಂದು ಹೇಳುತ್ತಾನೆ. ಅದಕ್ಕೆ ತಾರಕಾಸುರ, ನನಗೆ ಶಿವನ ಮಗನಿಂದ ಸಾವಾಗಬೇಕು, ಬಿಟ್ಟರೆ ಬೇರೆ ಯಾರೂ ನನ್ನನ್ನು ಸಂಹರಿಸಬಾರದು ಎಂದು ಬೇಡುತ್ತಾನೆ.
ಏಕೆಂದರೆ, ಶಿವ ಬ್ರಹ್ಮಚಾರಿಯಾಗಿರುತ್ತಾನೆ. ಇನ್ನು ಅವನಿಗೆ ಮದುವೆಯಾಗುವುದಿಲ್ಲ. ಮತ್ತು ಮಕ್ಕಳೂ ಆಗುವುದಿಲ್ಲ ಎನ್ನುವುದು ತಾರಕಾಸುರನ ಯೋಚನೆಯಾಗಿರತ್ತದೆ. ಆದರೆ ಶಿವ ಪಾರ್ವತಿಯನ್ನು ವಿವಾಹವಾಗಿ ಕಾರ್ತಿಕೇಯನೆಂಬ ಮಗನನ್ನು ಪಡೆಯುತ್ತಾನೆ. ಆತನೇ ಸ್ಕಂದ. ಸ್ಕಂದನಿಂದ ತಾರಕಾಸುರನ ವಧೆಯಾಗುತ್ತದೆ. ಸ್ಕಂದನ ತಾಯಿಯಾದ ಕಾರಣ, ಪಾರ್ವತಿ ದೇವಿಗೆ ಸ್ಕಂದಮಾತಾ ಎಂಬ ಹೆಸರು ಬಂತು.