Sunday, September 8, 2024

Latest Posts

ಜಾನಪದ ಕಲೆಗಳಲ್ಲಿ ಒಂದಾದ ಅಲಾಯಿ ಹೆಜ್ಜೆ ಕುಣಿತ

- Advertisement -

www.karnatakatv.net : ರಾಯಚೂರು : ಹಿಂದೂ ಮುಸ್ಲಿಮರ ಭಾವೈಕ್ಯತೆಯ ಹಬ್ಬಗಳಲ್ಲಿ ಪ್ರಮುಖವಾದದ್ದು ಎಂದರೇ ಅದು ಮೊಹರಂ. ರಾಜ್ಯದಲ್ಲಿ ಮುದ್ಗಲ್ ಮೊಹರಮ್ ಹಬ್ಬಕ್ಕೆ ಹೆಸರುವಾಸಿಯಾಗಿದೆ . ಯಾವುದೇ ತಾರತಮ್ಯ ಇಲ್ಲದಂತೆ ಈ ಹಬ್ಬದಲ್ಲಿ ಹಿಂದೂಗಳು ಪಾಲ್ಗೊಳ್ಳುತ್ತಾರೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಮೊಹರಂ ಹಬ್ಬವನ್ನು ಆಚರಿಸುತ್ತಾರೆ .

ಸುಮಾರುಹತ್ತು ದಿನಗಳವರೆಗೆ ನಡೆಯುವ ಈ ಹಬ್ಬದ ಆಚರಣೆಯಲ್ಲಿ ಹಿಂದೂ ಮುಸ್ಲಿಂ ಬೇಧವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ. ಈ ಹಬ್ಬದಲ್ಲಿ ಬರುವ ಹೆಜ್ಜೆ ಕುಣಿತ, ಮುಳ್ತಾ ಹೆಜ್ಜೆ ಕುಣಿತ, ಮಟಕಿ ಹೆಜ್ಜೆ ಕುಣಿತ, ಮರಗಾಲು ಕುಣಿತ ಮುಂತಾದ ಪ್ರಕಾರದಲ್ಲಿ ಕುಣಿಯುತ್ತಾರೆ. ಇದನ್ನು ಜಾನಪದ ಕಲೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಹಳ್ಳಿಗಳಲ್ಲಿ ಈ ಕುಣಿತಕ್ಕೆ ಅಲಾಯಿ ಹೆಜ್ಜೆ ಕುಣಿತ ಎಂದು ಕರೆಯಲಾಗುತ್ತದೆ.

ಇಂತಹ ಕುಣಿತ ಹಾಕುವ ಜನಾಂಗಗಳೇ ಉತ್ತರ ಕರ್ನಾಟಕ ಭಾಗದಲ್ಲಿವೆ. ಅಂತಹವುಗಳಲ್ಲಿ ಸಿದ್ದೋಳಿ ಜನಾಂಗವೂ ಒಂದು. ವಿಶೇಷವಾಗಿ  ಹರಕೆ ಹೊತ್ತ ಹಿಂದೂ- ಮುಸ್ಲಿಮರು ಹುಲಿ ವೇಷ, ಅಳ್ಳಳ್ಳಿ ಬಪ್ಪಾ ವೇಷ ಹಾಕಿ ಕುಣಿದು ಕುಪ್ಪಳಿಸುತ್ತಾರೆ. ಇನ್ನು ಸಿದ್ದೋಳಿ ಜನಾಂಗದವರು ಒಂದು ಹೆಜ್ಜೆ ಮುಂದೆ ಹೋಗಿ ನಾನ ಥರದ ವೇಷ ಧರಿಸಿ ಹಳ್ಳಿ ಹಳ್ಳಿಗೆ ಹೋಗಿ ಕುಣಿತ ಹಾಕಿ ಭಿಕ್ಷಾಟನೆ‌ ಮಾಡ್ತಾರೆ. ಕಂದೂರಿ ಮಾಡಿ ಎಡೆ ನೀಡಿ ಮನಸ್ಸಿಗೆ ನೆಮ್ಮದಿ ತಂದುಕೊಳ್ಳುತ್ತಾರೆ.

ಅಧುನೀಕರಣದ ಭರಾಟೆಯಲ್ಲಿ ಅಳಿವಿನ ಅಂಚಿನಲ್ಲಿರುವ ಈ ಸಿದ್ದೋಳಿ ಜನಾಂಗ ಅನಾದಿ‌ ಕಾಲದಿಂದಲೂ ಇಂತದ್ದೊಂದು‌ ನೃತ್ಯವನ್ನು ಮಾಡಿಕೊಂಡು ಬಂದಿದೆ. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಇಂದಿನ ಈ ಜನಾಂಗದ ಯುವ ಪೀಳಿಗೆ‌ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದೆ..

ಒಟ್ನಲ್ಲಿ ಹತ್ತು ದಿನಗಳ ಕಾಲ ಸಂಭ್ರಮ ಸಡಗರದಿಂದ ನಡೆಯುವ ಈ ಹಬ್ಬದ ಸಮಯದಲ್ಲಿ ಸಿದ್ದೋಳಿಬಜನಾಂಗ ಸೇರಿದಂತೆ ಹಿಂದೂ‌ ಮುಸ್ಲೀಂರ ವಿಧ ವಿಧವಾದ  ಕುಣಿತಗಳನ್ನ ನೋಡುವುದೇ ಒಂದು ಆನಂದ..

ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು

- Advertisement -

Latest Posts

Don't Miss