ಇಡೀ ರಾಜ್ಯ ಜಾತಿಗಣತಿ ಗುಂಗಲ್ಲಿ ಇರುವಾಗಲೇ, ಆಪರೇಷನ್ ಬಿಪಿಎಲ್ ಕಾರ್ಡ್ ಶುರುವಾಗಿದೆ. ರಾಜ್ಯದಲ್ಲಿ 13 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ಗಳಿವೆಯಂತೆ. ಹೀಗಂತ ಉಡುಪಿಯಲ್ಲಿ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ಕೇಂದ್ರ ಸರ್ಕಾರ ನೀಡಿದ ಅಂಕಿ ಅಂಶ ಮತ್ತು ರಾಜ್ಯ ಸರ್ಕಾರವೇ ಕಲೆ ಹಾಕಿರುವ ಅಂಕಿ ಅಂಶಗಳನ್ನ ಇಟ್ಕೊಂಡು, ಪಡಿತರ ಕಾರ್ಡ್ ಪರಿಷ್ಕರಣೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ 7 ಲಕ್ಷದ 70 ಸಾವಿರ ಅನರ್ಹ ಬಿಪಿಎಲ್ ಕಾರ್ಡ್ ಬಗ್ಗೆ, ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ನಾವೂ ಕೂಡ ಮಾಹಿತಿ ಕಲೆ ಹಾಕಿದ್ದು, ಒಟ್ಟು 13 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ಇರುವುದು ಗೊತ್ತಾಗಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಆಪರೇಷನ್ ಬಿಪಿಎಲ್ ಕಾರ್ಡ್ ಸಂಬಂಧ ಸ್ಪಷ್ಟ ಚಿತ್ರಣ ಸಿಗಲಿದೆ ಎಂದಿದ್ದಾರೆ.
ಸ್ವಂತ ಮನೆ ಕಟ್ಟಿದವರಿಗೆ, ಸ್ವಂತ ಕಾರು ಹೊಂದಿದವರಿಗೆ, 7 ಎಕರೆ ಜಮೀನು ಇರೋರಿಗೆ, ಬಿಪಿಎಲ್ ಕಾರ್ಡ್ ಅವಶ್ಯಕತೆ ಇಲ್ಲ. 5 ಲಕ್ಷ ಹೂಡಿಕೆ ಮಾಡೋರು ಆರ್ಥಿಕವಾಗಿ ಚೆನ್ನಾಗಿಯೇ ಇರುತ್ತಾರೆ. ಕೂಲಿ ಕಾರ್ಮಿಕರಿಗೆ, ಭೂರಹಿತರಿಗಾಗಿ, ಯಾರಿಗೆ ಏನು ಅನುಕೂಲ ಇರುವುದಿಲ್ಲವೋ, ಅಂತವರಿಗಾಗಿ ಬಿಪಿಎಲ್ ಕಾರ್ಡ್ ಇದೆ. ಈ ಬಗ್ಗೆ ಮಾರ್ಗಸೂಚಿಗಳನ್ನು ತುಂಬಾ ಕ್ಲಿಯರ್ ಆಗಿ ಮಾಡಿದ್ದೀವಿ.
ಸ್ವಯಂಪ್ರೇರಿತರಾಗಿ ಬಿಪಿಎಲ್ನಿಂದ ಎಪಿಎಲ್ಗೆ ಬನ್ನಿ. ನೀವು ಎಪಿಎಲ್ಗೆ ಶಿಫ್ಟ್ ಆದ್ರೆ ಅರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಬಹುದು. ಅನರ್ಹರ ಕಾರ್ಡ್ ರದ್ದು ಮಾಡಿ ಅರ್ಹರಿಗೆ ಯೋಜನೆಗಳನ್ನು ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ.
ರಾಜ್ಯದಲ್ಲಿ ಶೇಕಡ 75ರಷ್ಟು ಜನ ಬಿಪಿಎಲ್ ಕಾರ್ಡ್ ವ್ಯಾಪ್ತಿಗೆ ಬರುತ್ತಾರೆ. ಅಂದರೆ ರಾಜ್ಯದಲ್ಲಿ 1 ಕೋಟಿ 28 ಲಕ್ಷ ಬಿಪಿಎಲ್ ಕಾರ್ಡ್ ಇದ್ದು, ಒಟ್ಟು 4 ಕೋಟಿ 50 ಲಕ್ಷ ಜನರು ಫಲಾನುಭವಿಗಳಾಗಿದ್ದಾರೆ. ಈಗಾಗಲೇ ಅನರ್ಹರ ಪತ್ತೆಗೆ ಮಾರ್ಗಸೂಚಿಯನ್ನೂ ಮಾಡಿದ್ದೇವೆಂದು, ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.