ವಿದ್ಯುತ್ ಖಾಸಗೀಕರಣ ನೀತಿ ವಿರೋಧಿಸಿ ಕೇಂದ್ರದ ವಿರುದ್ಧ ಬೆಳಗಾವಿಯಲ್ಲಿ ಸಿಡಿದೆದ್ದ ರೈತರು

www.karnatakatv.net : ಬೆಳಗಾವಿ: ಬೆಳಗಾವಿಯಲ್ಲಿ ರೈತ ಮುಖಂಡರು  ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ರೈತ ವಿರೋಧಿ ಕಾನೂನುಗಳ ವಿರುದ್ಧ ದೇಶಾಧ್ಯಂತ ಅನ್ನದಾತರು ಸಿಡಿದೆದ್ದಿದ್ದಾರೆ. ಇದೀಗ ವಿದ್ಯುತ್ ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸಿ ಬೆಳಗಾವಿಯಲ್ಲಿ ಮತ್ತೆ ರೈತರು ಹೋರಾಟ ಆರಂಭಿಸಿದ್ದು. ರೈತ-ಜನವಿರೋಧಿ ನೀತಿ ಕೈ ಬಿಡುವಂತೆ ಆಗ್ರಹಿಸಿ ರೈತ ಮುಖಂಡರು ಪ್ರತಿಭಟನೆ ಮಾಡಿದರು.ಹೌದು ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ ಕಾಯ್ದೆ, ವಿದ್ಯುತ್ ಖಾಸಗೀಕರಣ ನೀತಿ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆ ನೇತೃತ್ವದಲ್ಲಿ ರೈತ ಮುಖಂಡರು ಬೆಳಗಾವಿಯ ವೀರರಾಣಿ ಚನ್ನಮ್ಮಾಜಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಚೂನಪ್ಪ ಪೂಜಾರಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿ ಕಾನೂನುಗಳಿಂದ ರೈತ ಕುಟುಂಬಗಳು ಬೀದಿಗೆ ಬರುತ್ತಿವೆ. ದಿಲ್ಲಿಯಲ್ಲಿ ಹೋರಾಟ ಆರಂಭವಾಗಿ 9 ತಿಂಗಳು ಆಗಿವೆ. ಇಂತಹ ಸಮಯದಲ್ಲಿ ಇದೀಗ ವಿದ್ಯುತ್ ಖಾಸಗಿ ಮಾಡಲು ಹೊರಟಿರುವ ಪ್ರಧಾನಿ ಮೋದಿ ರೈತರ ಗೋರಿ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಇದು ರೈತ ವಿರೋಧಿ, ನಾಲಾಯಕ ಸರ್ಕಾರ. ಕ್ವಿಟ್ ಇಂಡಿಯಾ ಚಳುವಳಿಯಂತೆ ದೇಶ ಬಿಟ್ಟು ತೊಲಗಿ ಕಾರ್ಪೋರೇಟ್ ಕಂಪನಿಗಳೇ ಎಂಬ ಹೋರಾಟ ಆರಂಭಿಸುತ್ತೇವೆ ಎಂದು ಎಚ್ಚರಿಸಿದರು.

ಬಳಿಕ ಮಹಿಳಾ ರೈತ ಮುಖಂಡೆ ಜಯಶ್ರೀ ಗುರನ್ನವರ ಮಾತನಾಡಿ ಜನವಿರೋಧಿ ನೀತಿಗಳ ಮೂಲಕ ರೈತರು, ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡುತ್ತಿರುವ ಪ್ರಧಾನಿ ಮೋದಿ ಅವರಿಗೆ ಉಳಿಗಾಲ ಇಲ್ಲ. ನಮ್ಮ ಹತ್ತಿರ ನೀವು ಬಂದಾಗ ನಿಮ್ಮನ್ನು ಹೇಗೆ ಆಟ ಆಡಿಸಬೇಕೋ ಹಾಗೆ ಆಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಒಟ್ಟಿನಲ್ಲಿ ದಿಲ್ಲಿಯಲ್ಲಿ ಕಳೆದ 9 ತಿಂಗಳಿನಿಂದ ರೈತರು ಮುಖಂಡರು ಪ್ರತಿಭಟನೆ ಮಾಡುತ್ತಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿಯೂ ಅನ್ನದಾತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಇಷ್ಟಿದ್ದರೂ ಕೇಂದ್ರ ಸರ್ಕಾರ ರೈತ ಸಂಘಟನೆಗಳ ಹೋರಾಟಕ್ಕೆ ಸೊಪ್ಪು ಹಾಕುತ್ತಿಲ್ಲ. ಹೀಗಾಗಿ ಮಣ್ಣಿನ ಮಕ್ಕಳ ಹೋರಾಟ ಇನ್ನು ಯಾವ ಹಂತಕ್ಕೆ ಹೋಗಿ ಮುಟ್ಟುತ್ತದೆ ಎಂದು ಕಾದು ನೋಡಬೇಕಿದೆ.

About The Author