Dharwad News: ಧಾರವಾಡ : ಧಾರವಾಡದ ವಾಹನ ಸವಾರರೇ ಸಂಚಾರಿ ನಿಯಮ ಉಲ್ಲಂಘಿಸಿ ನಿಮ್ಮ ವಾಹನ ಓಡಿಸ್ತೀರಾ.. ಈ ಸುದ್ದಿಯನ್ನು ಗಮನಿಸಿ, ಬೈಕ್ ಸವಾರರೊಬ್ಬರ ಮೇಲೆ ದಾಖಲಾಗಿದ್ದ 45 ಟಿಎಂಸಿ ಕೇಸ್ಗೆ ಸಂಬಂಧಿಸಿದಂತೆ ಸಂಚಾರ ಠಾಣೆ ಪೊಲೀಸರು ಅವರಿಗೆ ಇಷ್ಟುದ್ದದ ದಂಡದ ರಶೀದಿ ನೀಡಿ, 50% ರಿಯಾಯತಿ ಅಡಿಯಲ್ಲಿ ಬರೋಬ್ಬರಿ 12ಸಾವಿರ ರೂಪಾಯಿ ದಂಡ ಪಾವತಿಸಿದ್ದಾರೆ.
ಅಜಯ್ ಕಲಾಲ್ ಎಂಬುವವರ ಮೇಲೆ 45 ಟಿಎಂಸಿ ಕೇಸ್ಗಳು ದಾಖಲಾಗಿದ್ದವು. ಈ ರೀತಿಯ ಕೇಸ್ಗಳು ದಾಖಲಾದಲ್ಲಿ ರಿಯಾಯ್ತಿಯಲ್ಲಿ ದಂಡ ಪಾವತಿಸಿಕೊಳ್ಳುವಂತೆ ಗೃಹ ಇಲಾಖೆ ರಿಯಾಯ್ತಿ ನೀಡಿದ ಹಿನ್ನೆಲೆ ಪೊಲೀಸರು ಆ ಬೈಕ್ ಸವಾರನ ಮನೆಗೇ ಹೋಗಿ ದಂಡದ ರಶೀದಿ ನೀಡಿದ್ದಾರೆ.
ಧಾರವಾಡದ ಅಜಯ್ ಕಲಾಲ್ ಎಂಬುವವರ ಮನೆಗೆ ಹೋದ ಸಂಚಾರ ಠಾಣೆ ಪೊಲೀಸ್ ಸಿಬ್ಬಂದಿ ವಿಠಲ ಮಾಯಣ್ಣವರ ಹಾಗೂ ಮಂಜುನಾಥ್ ಹಟ್ಟಿಮನಿ ಅವರು, ಬೈಕ್ ಸವಾರನಿಗೆ ದಂಡದ ರಶೀದಿ ನೀಡಿ ರಿಯಾಯಿತಿ ಪ್ರಕಾರ 12,250 ರೂಪಾಯಿ ದಂಡ ಪಾವತಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ನಮ್ಮನ್ಯಾರು ಟ್ರಾಫಿಕ್ ಪೊಲೀಸರು ಗಮನಿಸಿಲ್ಲ ಎಂದು ಸಂಚಾರಿ ನಿಯಮ ಗಾಳಿಗೆ ತೂರಿ ವಾಹನ ಚಲಾಯಿಸುವವರಿಗೆ ಈಗ ಧಾರವಾಡ ಸಂಚಾರಿ ಠಾಣೆಯ ಪೊಲೀಸರು 50% ಆಫ್ ನೀಡುವುದರ ಜತೆಗೆ ದಂಡ ಪಾವತಿಸಿಕೊಳ್ಳುವ ಮೂಲಕ ಕಾನೂನು ಉಲ್ಲಂಘಿಸಿ ವಾಹನ ಚಾಲನೆ ಮಾಡುವವರಿಗೆ ಬಿಸಿಮುಟ್ಟಿಸಿದ್ದಾರೆ.




