Thursday, June 19, 2025

Latest Posts

ಈ ಬಾರಿ ಇವರೇ ಐಎಸ್‌ಐ ಪಾತಕಿಗಳ ಟಾರ್ಗೆಟ್ :‌ ಕಣಿವೆ ರಾಜ್ಯದಲ್ಲಿ ಹೈ ಅಲರ್ಟ್..!

- Advertisement -

ನವದೆಹಲಿ : ಪಹಲ್ಗಾಮ್‌ ದಾಳಿಯನ್ನು ಖಂಡಿಸಿ ಭಾರತ ಕೈಗೊಂಡಿರುವ ಹಲವು ಮಹತ್ವದ ರಾಜತಾಂತ್ರಿಕ ನಿರ್ಧಾರಗಳಿಂದ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ಇದರಿಂದ ಹತಾಶವಾಗಿರುವ ಉಗ್ರರ ರಾಷ್ಟ್ರ ಭಾರತದ ವಿರುದ್ಧ ಕಾಲು ಕೆದರಿ ಜಗಳಕ್ಕಿಳಿಯುತ್ತಿದೆ.

ಅಲ್ಲದೆ ತಾನು ಮಾಡಿರುವ ದಾಳಿಗೆ ಭಾರತ ಯಾವುದೇ ಕ್ಷಣದಲ್ಲಿಯೂ ತಕ್ಕ ಉತ್ತರ ನೀಡಲು ಮುಂದಾಗುವ ಸಾಧ್ಯತೆಯನ್ನು ಅರಿತ ಪಾಪಿಗಳ ದೇಶ ಗಡಿಗಳಲ್ಲಿ ಸೇನೆಯನ್ನು ನಿಯೋಜಿಸಿದೆ. ಅಲ್ಲದೆ ಭಾರತದ ವಿರುದ್ಧ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, ಇದಕ್ಕೆ ಮುಟ್ಟಿನೋಡಿಕೊಳ್ಳುವ ಹಾಗೆ ಭಾರತ ಸೇನೆ ಉತ್ತರ ನೀಡುತ್ತಿದೆ.

ಹೊರಗಿನವರೇ ಟಾರ್ಗೆಟ್..!

ಇನ್ನೂ ಇದರ ನಡುವೆಯೇ ಕಾಶ್ಮೀರದಲ್ಲಿ ಬೃಹತ್‌ ಪ್ರಮಾಣದಲ್ಲಿ ದಾಳಿಯನ್ನು ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಸಿದ್ಧತೆ ನಡೆಸಿದೆ. ಪ್ರಮುಖವಾಗಿ ಸ್ಥಳೀಯರನ್ನು ಹೊರತುಪಡಿಸಿ‌, ಭದ್ರತಾ ಪಡೆ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಂಡು ಅಟ್ಯಾಕ್‌ ನಡೆಸಲು ಪ್ಲ್ಯಾನ್‌ ರೂಪಿಸಿದೆ.  ಅಲ್ಲದೆ ರೈಲ್ವೆ ಇಲಾಖೆಗೆ ಸಂಬಂಧಿಸಿದ ಆಸ್ತಿ-ಪಾಸ್ತಿಗಳನ್ನು, ಕಾಶ್ಮೀರಿ ಪಂಡಿತರನ್ನು ಟಾರ್ಗೆಟ್‌ ಮಾಡಲಾಗಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದ್ದು, ಎಲ್ಲೆಡೆ ಹೈ ಅಲರ್ಟ್‌ ಘೋಷಿಸಿದೆ. ಕಣಿವೆ ರಾಜ್ಯ ಕಾಶ್ಮೀರದಲ್ಲಿರುವ ಪ್ರವಾಸಿಗರನ್ನು, ಹೊರ ರಾಜ್ಯದ ನೌಕರರನ್ನು ಗುರಿಯಾಗಿಸಿಕೊಂಡಿರುವ ಐಎಸ್‌ಐ ದಾಳಿಯ ಕುರಿತು ಮಹತ್ವದ ವಿಚಾರ ಹೊರಬಿದ್ದಿದೆ.

ಹೀಗಾಗಿ ಜಮ್ಮು ಮತ್ತು ಕಾಶ್ಮೀರದ ಎಲ್ಲೆಡೆ ಭದ್ರತಾ ಪಡೆಗಳು ತೀವ್ರ ಕಟ್ಟೆಚ್ಚರ ವಹಿಸಿವೆ. ಅಲ್ಲದೆ ಯಾರೂ ಅನವಶ್ಯಕವಾಗಿ ಹೊರಗೆ ಸುತ್ತಾಡದಂತೆ ತಿಳಿಸಿದೆ. ರೈಲ್ವೆ ಇಲಾಖೆಯ ಸಿಬ್ಬಂದಿಗಳು ಯಾವುದೇ ಕಾರಣಕ್ಕೂ ಸ್ಥಳೀಯ ಮಾರುಕಟ್ಟೆಗಳಲ್ಲಿ ತಿರುಗಾಡದಂತೆ ಗುಪ್ತಚರ ಇಲಾಖೆ ಸೂಚನೆ ನೀಡಿದೆ.

ಹೊರಗೆ ಬರಬೇಡಿ..

ಎಲ್ಲ ಜನರು ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಾಗಿ ಹೊರಗೆ ಕಾಣಿಸಿಕೊಳ್ಳಬೇಡಿ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಶ್ರೀನಗರ ಮತ್ತು ಗಂಡೇರ್‌ಬಾಲ್ ಜಿಲ್ಲೆಗಳಲ್ಲಿ ಕಾಶ್ಮೀರಿ ಪಂಡಿತರು ಮತ್ತು ಪೊಲೀಸರ ಮೇಲೆ ಗುರಿಯಾಗಿಟ್ಟುಕೊಂಡು ದಾಳಿ ನಡೆಸಲು ಯೋಜಿಸುತ್ತಿದೆ ಎಂದು ಸ್ಥಳೀಯರಿಗೆ ಎಚ್ಚರಿಕೆ ನೀಡಲಾಗಿದೆ. ಐಎಸ್‌ಐ ದಾಳಿಯ ಕುರಿತು ಸರ್ಕಾರ ಅಲರ್ಟ್ ಆಗಿದ್ದು, ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ರಜೆ ರದ್ದು ಮಾಡಲಾಗಿದೆ. ಜಮ್ಮುವಿನ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಿಬ್ಬಂದಿಗಳಿಗೆ ಈಗಾಗಲೇ ಈ ಸೂಚನೆ ನೀಡಲಾಗಿದೆ. ಎಲ್ಲಾ ವೈದ್ಯಕೀಯ ಸಿಬ್ಬಂದಿ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ. ತುರ್ತು ಔಷಧಿಗಳು ಮತ್ತು ಉಪಕರಣಗಳು ಸಿದ್ಧವಾಗಿರಬೇಕು. ತುರ್ತು ಸೇವೆಗಾಗಿ ಕಂಟ್ರೋಲ್ ರೂಮ್ ಸ್ಥಾಪನೆ ಮಾಡಬೇಕು ಎಂದು ತಿಳಿಸಲಾಗಿದೆ.

ಘಟನೆ ಖಂಡಿಸಿದ ವಿಶ್ವಸಂಸ್ಥೆ..!

ಇನ್ನೂ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ತೀವ್ರವಾಗಿ ಖಂಡಿಸಿದೆ. ಈ ಖಂಡನೀಯ ಭಯೋತ್ಪಾದಕತನ ಕೃತ್ಯದ ಅಪರಾಧಿಗಳು, ಸಂಘಟಕರು ಹಾಗೂ ರೂವಾರಿಗಳನ್ನು ಸದೆಬಡಿದು, ಅವರನ್ನು ನ್ಯಾಯದ ಕಟಕಟೆಗೆ ಕರೆತರುವ ಅಗತ್ಯವಿದೆ ಎಂದು ಒತ್ತಿ ಹೇಳಿದೆ. ಇದರ ಎಲ್ಲ 15 ಸದಸ್ಯ ರಾಷ್ಟ್ರಗಳ ಪರವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪತ್ರಿಕಾ ಹೇಳಿಕೆ ಮೂಲಕ ಘಟನೆಗೆ ಅಕ್ರೋಶ ವ್ಯಕ್ತಪಡಿಸಿದೆ. ದಾಳಿಯಲ್ಲಿ ಪ್ರಾಣ ಕಳೆದುಕೊಂಡಿರುವವರ ಕುಟುಂಬಗಳು, ಭಾರತ ಹಾಗೂ ನೇಪಾಳ ಸರ್ಕಾರಗಳಿಗೆ ತಮ್ಮ ತೀವ್ರ ಸಂತಾಪವನ್ನು ವ್ಯಕ್ತಪಡಿಸಿರುವ ವಿಶ್ವಸಂಸ್ಥೆ, ಗಾಯಗೊಂಡವರು ತ್ವರಿತವಾಗಿ, ಸಂಪೂರ್ಣವಾಗಿ ಚೇತರಿಸಿಕೊಳ್ಳುವಂತೆ ಹಾರೈಸಿದೆ.

ಕಳೆದ ಏಪ್ರಿಲ್‌ 22ರಂದು ಮಂಗಳವಾರ ಜಮ್ಮು ಹಾಗೂ ಕಾಶ್ಮೀರದ ಪಹಲ್ಗಾಮ್​ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ಮಾಡಿದ್ದರು. 26 ಜನ ಪ್ರಾಣ ಕಳೆದುಕೊಂಡಿದ್ದರು. ಅದರಲ್ಲಿ ಹೆಚ್ಚಿನವರು ಪ್ರವಾಸಿಗರಾಗಿದ್ದರು. 2019ರ ಪುಲ್ವಾಮಾ ದಾಳಿಯ ಬಳಿಕ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್​-ಎ-ತೈಬಾದ, ಪ್ರತಿನಿಧಿಯಾಗಿರುವ ರೆಸಿಸ್ಟೆನ್ಸ್​ ಫ್ರಂಟ್​ ಈ ದಾಳಿ ಹೊಣೆಯನ್ನು ಹೊತ್ತುಕೊಂಡಿದೆ.

 

 

- Advertisement -

Latest Posts

Don't Miss