Dharwad News: ಕಳೆದ ಶನಿವಾರ 11ನೇ ದಿನದ ಗಣಪತಿ ಮೂರ್ತಿಗಳ ವಿಸರ್ಜನೆ ವೇಳೆ ಎರಡು ಡಿಜೆಗಳ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಹಿನ್ನೆಲೆಯಲ್ಲಿ ಧಾರವಾಡದ ನರೇಂದ್ರ ಗ್ರಾಮದಲ್ಲಿ ಪೊಲೀಸರ ಲಾಠಿ ಚಾರ್ಜ್ ಮಾಡಿದ್ದಾರೆ.
ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಎರಡು ಓಣಿಯ ಗಣಪತಿ ಮೂರ್ತಿಗಳನ್ನು ಶನಿವಾರ ವಿಸರ್ಜನೆ ಮಾಡಲಾಗುತ್ತಿತ್ತು. ಈ ವೇಳೆ ಎರಡು ಡಿಜೆಗಳನ್ನು ಹಚ್ಚಲಾಗಿತ್ತು. ಈ ಡಿಜೆ ಅಬ್ಬರ ಕೇಳಲು ನೂರಾರು ಜನ ಸ್ಥಳದಲ್ಲಿ ಜಮಾಯಿಸಿದ್ದರು.
ಒಂದು ತಾಸಿಗೂ ಹೆಚ್ಚು ಕಾಲ ಎರಡು ಡಿಜೆಗಳು ಮುಖಾಮುಖಿಯಾಗಿ ನಿಂತು ಅಬ್ಬರ ತೋರಿದ್ದರಿಂದ ಕಂಗಾಲಾದ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಅಲ್ಲಿನ ಜನರ ಮೇಲೆ ಲಘು ಲಾಠಿ ಪ್ರಹಾರ ನಡೆಸಿ ಅವರನ್ನು ಚದುರಿಸಿದ್ದಾರೆ. ಇದರಿಂದ ಜನ ದಿಕ್ಕಾಪಾಲಾಗಿ ಓಡಿ ಹೋಗಿದ್ದು, ಬಳಿಕ ಪೊಲೀಸರು ಡಿಜೆಗಳನ್ನೂ ಬಂದ್ ಮಾಡಿಸಿದ್ದಾರೆ. ನಂತರ ಶಾಂತಿಯುತವಾಗಿ ಗಣೇಶನ ಮೂರ್ತಿಗಳು ವಿಸರ್ಜನೆಗೊಳ್ಳುವಂತೆ ಪೊಲೀಸರು ನೋಡಿಕೊಂಡರು.




