Political News: ಓಬಳಾಪುರಂ ಮೈನಿಂಗ್ ಕಂಪನಿಯಯಿಂದ ನಡೆದಿದ್ದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಗಂಗಾವತಿ ಶಾಸಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದೆ. ತೆಲಂಗಾಣ ಹೈಕೋರ್ಟ್ ನಲ್ಲಿ ಜನಾರ್ಧನ ರೆಡ್ಡಿಗೆ ಇದೀಗ ರಿಲೀಫ್ ಸಿಕ್ಕಿದೆ. ಸಿಬಿಐ ಕೋರ್ಟ್ ವಿಧಿಸಿದ ಶಿಕ್ಷೆಯನ್ನು ತೆಲಂಗಾಣ ಹೈಕೋರ್ಟ್ ಇದೀಗ ತಡೆ ಹಿಡಿದಿದ್ದು. ಈ ಮೂಲಕ ಹಲವು ಷರತ್ತು ವಿಧಿಸಿ ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು ಮಾಡಿದೆ.
ನಾಲ್ವರು ಆರೋಪಿಗಳಿಗೆ ಇದೀಗ ಬಿಗ್ ರಿಲೀಫ್..!
ಮುಖ್ಯವಾಗಿ ಒಎಂಸಿ ಮೈನಿಂಗ್ ಪ್ರಕರಣದಲ್ಲಿ ಜೈಲು ಸೇರಿದ್ದ ಗಾಲಿ ಜನಾರ್ದನ ರೆಡ್ಡಿ ಮತ್ತು ಇತರರು ಸಲ್ಲಿಸಿರುವ ಅರ್ಜಿಗಳ ಕುರಿತು ತೆಲಂಗಾಣ ಹೈಕೋರ್ಟ್ ಇಂದು ತೀರ್ಪು ಪ್ರಕಟಿಸಿದ್ದು, ಆರೋಪಿಗಳಾದ ಗಾಲಿ ಜನಾರ್ದನ ರೆಡ್ಡಿ, ಬಿ.ವಿ. ಶ್ರೀನಿವಾಸ ರೆಡ್ಡಿ, ವಿ.ಡಿ. ರಾಜಗೋಪಾಲ್ ಮತ್ತು ಅಲಿ ಖಾನ್ ಸಲ್ಲಿಸಿರುವ ಜಾಮೀನು ಅರ್ಜಿಗಳ ಜೊತೆಗೆ ಗಾಲಿ ಜನಾರ್ದನ ರೆಡ್ಡಿ ಪ್ರತ್ಯೇಕವಾಗಿ ಸಲ್ಲಿಸಿರುವ ಜೈಲು ಶಿಕ್ಷೆಯ ಅರ್ಜಿಗಳ ಮೇಲಿನ ಶಿಕ್ಷೆಗೆ ತಡೆ ನೀಡಿ ಹೈಕೋರ್ಟ್ ತೀರ್ಪು ನೀಡಿದೆ.
ಸಿಬಿಐ ಕೋರ್ಟ್ ಶಿಕ್ಷೆ ಅಮಾನತಿಗಾಗಿ ಮನವಿ ಮಾಡಿಕೊಂಡಿದ್ದ ರೆಡ್ಡಿ..
ಅಲ್ಲದೆ ನಿನ್ನೆಯಷ್ಟೇ ಜನಾರ್ದನ ರೆಡ್ಡಿ ಪರವಾಗಿ ಹಿರಿಯ ವಕೀಲರಾದ ನಳಿನ್ ಕುಮಾರ್ ಮತ್ತು ನಾಗಮುತ್ತು ವಾದ ಮಂಡಿಸಿದ್ದರು. ಅರ್ಜಿದಾರರು ಈಗಾಗಲೇ ತಮ್ಮ ಜೈಲು ಶಿಕ್ಷೆಯ ಶೇಕಡಾ 50 ಕ್ಕಿಂತ ಹೆಚ್ಚು ಅಂದರೆ ಮೂರುವರೆ ವರ್ಷಗಳನ್ನು ಅನುಭವಿಸಿದ್ದಾರೆ ಎಂದು ಅವರು ಕೋರ್ಟ್ ಗೆ ತಿಳಿಸಿದ್ದರು. ಕೇವಲ ಮೂರುವರೆ ವರ್ಷ ಜೈಲು ಶಿಕ್ಷೆ ಉಳಿದಿದೆ. ಈ ಹಂತದಲ್ಲಿ ಅವರು ತಮ್ಮ ಶಾಸಕಾಂಗ ಸದಸ್ಯತ್ವವನ್ನು ಕಳೆದುಕೊಳ್ಳದಂತೆ ಸಿಬಿಐ ನ್ಯಾಯಾಲಯದ ತೀರ್ಪನ್ನು ಅಮಾನತುಗೊಳಿಸುವಂತೆ ವಕೀಲರು ಹೈಕೋರ್ಟ್ ಗೆ ವಿನಂತಿಸಿಕೊಂಡಿದ್ದರು.
ಹತ್ತು ಲಕ್ಷದ 2 ಶ್ಯೂರಿಟಿ, ಪಾಸ್ ಪೋರ್ಟ್ ಒಪ್ಪಿಸಬೇಕು..
ಈ ವೇಳೆ ಜಾಮೀನಿಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿದ್ದ ಸಿಬಿಐ ಹೈಕೋರ್ಟ್, ಜೈಲು ಶಿಕ್ಷೆಯನ್ನು ಅಮಾನತುಗೊಳಿಸುವುದನ್ನು ವಿರೋಧಿಸಿತ್ತು. ಆದರೆ ಇದೀಗ ತೆಲಂಗಾಣ ಹೈಕೋರ್ಟ್ ನ್ಯಾಯಮೂರ್ತಿ ಕೆ. ಲಕ್ಷ್ಮಣ್ ಅವರ ಪೀಠವು ಜನಾರ್ದನ ರೆಡ್ಡಿಗೆ ಹಲವು ಶರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ. ಅಲ್ಲದೆ 10 ಲಕ್ಷ ರೂಪಾಯಿಯ ಎರಡು ಶ್ಯೂರಿಟಿ ಹಾಗೂ ಪಾಸ್ಪೋರ್ಟ್ ವಶಕ್ಕೆ ನೀಡಲು ಸೂಚನೆ ನೀಡಿದೆ. ಅಲ್ಲದೆ ದೇಶ ಬಿಟ್ಟು ಹೋಗದಂತೆ ಜನಾರ್ಧನ ರೆಡ್ಡಿಗೆ ಹೈಕೋರ್ಟ್ ಷರತ್ತು ನೀಡಿದೆ.
ಏಳು ವರ್ಷ ಶಿಕ್ಷೆ ವಿಧಿಸಿದ್ದ ಸಿಬಿಐ ವಿಶೇಷ ಕೋರ್ಟ್..
ಇನ್ನೂ ಪ್ರಮುಖವಾಗಿ 15 ವರ್ಷಗಳ ಸುಧೀರ್ಘ ಓಬಳಾಪುರಂ ಮೈನಿಂಗ್ ಕಂಪನಿ ಕೇಸ್ನಲ್ಲಿ ಕಳೆದ ಮೇ 6ರಂದು ನಾಂಪಲ್ಲಿಯ ಸಿಬಿಐ ನ್ಯಾಯಾಲಯವು ತನ್ನ ತೀರ್ಪನ್ನು ಪ್ರಕಟಿಸಿತ್ತು. ಅದರಲ್ಲಿ ಗಾಲಿ ಜನರ್ದನ ರೆಡ್ಡಿ. ಬಿ.ವಿ. ಶ್ರೀನಿವಾಸ ರೆಡ್ಡಿ, ವಿ.ಡಿ. ರಾಜಗೋಪಾಲ್ ಹಾಗೂ ಮೆಹಫೂಜ್ ಅಲಿಖಾನ್ ಅವರಿಗೆ ತಲಾ 3 ವರ್ಷ ಜೈಲು ಶಿಕ್ಷೆ ಹಾಗೂ ತಲಾ 20 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಲಾಗಿತ್ತು. ಅಲ್ಲದೆ ಸರ್ಕಾರ ಅಧಿಕಾರಿ ವಿ.ಡಿ. ರಾಜಗೋಪಾಲ್ ಅವರಿಗೆ ಹೆಚ್ಚುವರಿಯಾಗಿ 4 ವರ್ಷ ಜೈಲು ಶಿಕ್ಷೆ ಹಾಗೂ 2 ಸಾವಿರ ದಂಡವನ್ನು ವಿಧಿಸಲಾಗಿತ್ತು. ಆದರೆ ಇದೀಗ ತೆಲಂಗಾಣ ಹೈಕೋರ್ಟ್ ನೀಡಿರುವ ತೀರ್ಪು ಈ ಎಲ್ಲರಿಗೂ ಕೊಂಚ ನಿರಾಳತೆ ಮೂಡಿಸಿದಂತೆ ಮಾಡಿದೆ.
ಈ ಪ್ರಕರಣ ದೇಶಾದ್ಯಂತ ಭಾರೀ ಗಮನ ಸೆಳೆದಿತ್ತು. ನೂರಾರು ಕೋಟಿ ರೂಪಾಯಿ ಮೌಲ್ಯದ ಖನಿಜಗಳ ಅಕ್ರಮ ಗಣಿಗಾರಿಕೆ ಆರೋಪಗಳನ್ನು ಒಳಗೊಂಡಿರುವ ಈ ಪ್ರಕರಣವು ಹಲವಾರು ವರ್ಷಗಳಿಂದ ನ್ಯಾಯಾಲಯಗಳಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಹೈಕೋರ್ಟ್ ನೀಡಿದ ಜಾಮೀನು ತೀರ್ಪು ಪ್ರಕರಣದಲ್ಲಿ ಪ್ರಮುಖ ತಿರುವು ಪಡೆದಂತೆ ತೋರುತ್ತದೆ.