Political News: ಸಚಿವ ಪ್ರಿಯಾಂಕ್ ಖರ್ಗೆ ಅವರು ಕರಾವಳಿಯಲ್ಲಿ ಕೋಮುಗಲಭೆ ನಡೆಯುತ್ತಿರುವ ಕಾರಣಕ್ಕೆ ಬೃಹತ್ ಕಂಪನಿಗಳು ಅಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದೆ ಎಂದು ನಿನ್ನೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ಸಿ.ಟಿ.ರವಿ ಅವರು, ಕರಾವಳಿಯ ಬಗ್ಗೆ ಮಾತನಾಡುವ ಮುನ್ನ ಕಲಬುರಗಿ ಪರಿಸ್ಥಿತಿ ನೋಡಿಕ“ಳ್ಳಿ ಎಂದಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ಕರಾವಳಿಯ ಕುರಿತು ಮಾತನಾಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ವಿಚಾರ. ಕರ್ನಾಟಕದ ಅತ್ಯಂತ ಅಭಿವೃದ್ಧಿ ಹೊಂದಿದ ಪ್ರದೇಶವಾದ ಕರಾವಳಿಯ ಕುರಿತು ಟೀಕೆ ಮಾಡುವ ಮುನ್ನ, ಪ್ರಿಯಾಂಕ್ ಖರ್ಗೆಯವರು ಆರು ದಶಕಗಳಿಂದ ತಮ್ಮ ಕುಟುಂಬ ಪ್ರತಿನಿಧಿಸುತ್ತಿರುವ ಕಲಬುರಗಿಯ ಪರಿಸ್ಥಿತಿ ಹೇಗಿದೆ ಎಂದು ಒಂದು ಬಾರಿ ಪರಿಶೀಲನೆ ನಡೆಸುವುದು ಒಳ್ಳೆಯದು! ಎಂದು ರವಿ ಪ್ರಿಯಾಂಕ್ ಅವರಿಗೆ ತಿರುಗೇಟು ನೀಡಿದ್ದಾರೆ.
ಕರಾವಳಿ ಬೆಂಗಳೂರಿನ ನಂತರ ಕರ್ನಾಟಕದ ಜಿಡಿಪಿಗೆ ಅತ್ಯಧಿಕ ಕೊಡುಗೆ ನೀಡುತ್ತಿರುವ ಪ್ರದೇಶ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ನೆಲೆ ಇಲ್ಲ ಎನ್ನುವ ಏಕೈಕ ಕಾರಣಕ್ಕೆ ಕರಾವಳಿಗೆ ಕೋಮುವಾದದ ಆರೋಪ ಹೊರಿಸುವ ಪ್ರಯತ್ನ ಪ್ರಿಯಾಂಕ್ ಖರ್ಗೆಯವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಷ್ಟೇ.
ಇಂದು ದೇಶದಲ್ಲಿ ಹೆಸರು ಮಾಡಿರುವ ಬಹುತೇಕ ಬ್ಯಾಂಕ್ಗಳ ಸ್ಥಾಪನೆ ಆಗಿರುವುದೇ ನಮ್ಮ ಕರಾವಳಿಯಲ್ಲಿ. ಈಗಾಗಲೇ ಕರಾವಳಿಯಲ್ಲಿ ಐಟಿ-ಬಿಟಿ, ಸಹಕಾರಿ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಉದ್ಯಮಗಳು ಅತ್ಯಂತ ಯಶಸ್ವಿಯಾಗಿ ಕಾರ್ಯಾಚರಿಸುತ್ತಿವೆ. ಆದರೆ ಕರಾವಳಿಗೆ ಇನ್ನಷ್ಟು ಬಂಡವಾಳ ಸೆಳೆಯಬೇಕಾದ ಸರ್ಕಾರ ಮತ್ತು ಸಚಿವರೇ ಮನಬಂದಂತೆ ಮಾತನಾಡಿ, ಕರಾವಳಿಯ ಕುರಿತು ಇಲ್ಲದ ಆರೋಪ ಹೊರಿಸುತ್ತಿರುವುದು ಎಷ್ಟು ಸರಿ? ಕರಾವಳಿಗರು ಸ್ವಾಭಿಮಾನಿಗಳು. ಇಂತಹ ಅವಮಾನವನ್ನು ಅವರಾದರೂ ಏಕೆ ಸಹಿಸಬೇಕು? ಎಂದು ಸಿ.ಟಿ.ರವಿ ಪ್ರಿಯಾಂಕ್ ಖರ್ಗೆ ಅವರಿಗೆ ಪ್ರಶ್ನಿಸಿದ್ದಾರೆ.
ಕಳೆದ ಆರು ದಶಕಗಳಿಂದ ಖರ್ಗೆ ಅವರು, ನೀವು ಕಲಬುರಗಿಯನ್ನು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುತ್ತಲೇ ಬಂದಿದ್ದೀರಲ್ಲ? ನೀವು ಕಲಬುರಗಿಗೆ ಎಷ್ಟು ಐಟಿ ಕಂಪನಿಗಳನ್ನು ತಂದಿದ್ದೀರಿ? ಎಷ್ಟು ಅಭಿವೃದ್ಧಿ ಮಾಡಿದ್ದೀರಿ? ಎಷ್ಟು ವೈದ್ಯಕೀಯ ಕಾಲೇಜುಗಳು, ಸಹಕಾರಿ ರಂಗದ ಸಂಸ್ಥೆಗಳನ್ನು ತಂದಿದ್ದೀರಿ? ಕಲಬುರಗಿಯ ಅಭಿವೃದ್ಧಿ ಎಂದರೆ ಖರ್ಗೆ ಕುಟುಂಬದ ಅಭಿವೃದ್ಧಿ ಎಂದೇ ಭಾವಿಸಿ ಕಾರ್ಯಾಚರಿಸಿಲ್ಲವೇ ನೀವು? ಶಾಸಕರು, ಸಂಸದರು, ಕೇಂದ್ರ ಸಚಿವರು, ರಾಜ್ಯ ಸರ್ಕಾರದಲ್ಲಿ ಸಚಿವರು, ಹೀಗೆ ಲಭ್ಯವಿರುವ ಎಲ್ಲ ಹುದ್ದೆಗಳನ್ನೂ ಖರ್ಗೆ ಕುಟುಂಬಸ್ಥರು ಹೊಂದಿದರೂ, ಕಲಬುರಗಿ ಮಾತ್ರ ಅಭಿವೃದ್ಧಿ ವಂಚಿತವಾಗಿರುವುದು ಏಕೆ? ಎಂದು ಸಿ.ಟಿ.ರವಿ ಪ್ರಿಯಾಂಕ್ ಖರ್ಗೆ ಅವರಿಗೆ ಪ್ರಶ್ನಿಸಿದ್ದಾರೆ.
ಇಂದು ಕರಾವಳಿಯ ಸಾಹಸಿ ಉದ್ಯಮಿಗಳು ದೇಶಾದ್ಯಂತ ವ್ಯಾಪಿಸಿದ್ದಾರೆ. ಇಂದು ದೇಶದ ಪ್ರಮುಖ ಹೋಟೆಲ್ಗಳೆಲ್ಲವೂ ಕರಾವಳಿ ಮೂಲದವರದ್ದಾಗಿವೆ. ಹೊರ ಪ್ರದೇಶಗಳಲ್ಲಿ ದುಡಿದು, ಕರಾವಳಿಯಲ್ಲಿ ಹೂಡಿಕೆ ಮಾಡಿ, ಕರಾವಳಿಯನ್ನು ಭಾರತದ ಔದ್ಯಮಿಕ ಹಬ್ ಆಗಿಸಿರುವುದು ಕರಾವಳಿಯ ಜನರ ಹಿರಿಮೆ. ಆದರೆ ಕಲಬುರಗಿಯ ಯುವ ಜನರಿಗೆ ಉದ್ಯೋಗವೆಲ್ಲಿದೆ ಪ್ರಿಯಾಂಕ್ ಖರ್ಗೆಯವರೇ? ಎಂದು ರವಿ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.
ಕರ್ನಾಟಕದ ಕರಾವಳಿಯ ಸಾಮರ್ಥ್ಯ ಇಡೀ ದೇಶಕ್ಕೇ ಮಾದರಿ. ಅಲ್ಲಿನ ಮಣ್ಣಿನಲ್ಲೇ ಆ ಅಂತಃಸತ್ವ, ಸಾಮರ್ಥ್ಯವಿದೆ. ಅವರ ಧಾರ್ಮಿಕತೆ ನಿಮಗೆ ಕೋಮುವಾದವಾಗಿ ಕಾಣಬಹುದು. ಏಕೆಂದರೆ ಕಾಮಾಲೆ ಕಣ್ಣಿಗೆ ಕಾಣುವುದೆಲ್ಲವೂ ಹಳದಿಯೇ. ನಿಮ್ಮ ಹಳದಿ ಕನ್ನಡಕವನ್ನು ತೆಗೆದು ನೋಡಿದರೆ ಕರಾವಳಿಯ ಅಭಿವೃದ್ಧಿ ನಿಮ್ಮನ್ನು ದಂಗುಬಡಿಸಬಹುದು. ಮೊದಲು ಕಾಂಗ್ರೆಸ್ ಸರ್ಕಾರದ ವೈಫಲ್ಯದಿಂದ ರಾಜ್ಯದಿಂದ ಹೊರಹೋಗುತ್ತಿರುವ ಕಂಪನಿಗಳನ್ನು ಇಲ್ಲೇ ಉಳಿಸಿಕೊಳ್ಳಿ. ಸಾಧ್ಯವಾದರೆ, ಇನ್ನುಳಿದ ಅವಧಿಯಲ್ಲಾದರೂ ಕಲಬುರಗಿಗೆ ಸ್ವಲ್ಪ ಅಭಿವೃದ್ಧಿಯನ್ನು ಪರಿಚಯಿಸಿ! ಎಂದು ರವಿ ವ್ಯಂಗ್ಯವಾಡಿದ್ದಾರೆ.




