ನಾಡಹಬ್ಬ ದಸರಾ ಉದ್ಘಾಟಕರಾಗಿ ಲೇಖಕಿ ಬಾನು ಮುಷ್ತಾಕ್ ಅವರಿಗೆ ಸರ್ಕಾರ ಆಹ್ವಾನ ನೀಡಲಾಗಿದೆ. ಇದು ಹಿಂದೂ ಸಂಘಟನೆಗಳು ಮತ್ತು ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ಸರ್ಕಾರದ ಕ್ರಮ ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ, ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಬಾನು ಮುಷ್ತಾಕ್ ಅವರಿಗೆ ನೀಡಿರುವ ಆಹ್ವಾನವನ್ನು ಹಿಂಪಡೆಯಲು, ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.
ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆಯ ದಿನಾಂಕ ನಿಗದಿಯಾಗಬೇಕಾಗಿದೆ. ಮೈಸೂರು ಸಂಸ್ಥಾನವನ್ನು ಮಹಿಷಾಸುರ ಎಂಬ ರಾಕ್ಷಸ ಆಳ್ವಿಕೆ ಮಾಡುತ್ತಿದ್ದರು. ಅವರ ದಬ್ಬಾಳಿಕೆಯನ್ನು ಶಿವನ ಪತ್ನಿ ಪಾರ್ವತಿ ದೇವಿ ಚಾಮುಂಡೇಶ್ವರಿಯಾಗಿ ಅವತರಿಸಿ, ಚಾಮುಂಡಿ ಬೆಟ್ಟದಲ್ಲಿ ಸಂಹಾರ ಮಾಡಿದ್ದರು. ಅಂದಿನಿಂದ ಈ ನಗರಕ್ಕೆ ಮಹಿಷಾಸುರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಬಳಿಕ ಆಡಳಿತ ನಡೆಸಿದ್ದ ಬ್ರಿಟಿಷರು ಮೈಸೂರು ಎಂಬುದಾಗಿ ಮರು ನಾಮಕರಣ ಮಾಡಿದ್ರು.
ಮೈಸೂರಿನ ಚಾಮುಂಡೇಶ್ವರಿಯನ್ನು ನಾಡದೇವಿ ಎಂಬುದಾಗಿ ಸಂಬೋಧಿಸುತ್ತಿದ್ದು, ಹಿಂದೂ ಧರ್ಮೀಯಯರ ಪವಿತ್ರಸ್ಥಳ ಎಂಬುದಾಗಿ ಪೂಜಿಸಲಾಗುತ್ತಿದೆ. ಮೈಸೂರು ದಸರಾ ಹಬ್ಬವನ್ನು ನಾಡ ಹಬ್ಬ ಎಂಬುದಾಗಿ ಕರೆಯಲಾಗುತ್ತಿದೆ. ಆದರೆ, 2025ರ ಆಗಸ್ಟ್ 23ರಂದು ರಾಜ್ಯ ಸರ್ಕಾರ ಬಾನು ಮುಷ್ತಾಕ್ ಅವರನ್ನು, ದಸರಾ ಹಬ್ಬದ ಉದ್ಘಾಟನೆಗೆ ಅಧಿಕೃತವಾಗಿ ಆಹ್ವಾನ ನೀಡಿದೆ. ಬಾನು ಮುಷ್ತಾಕ್ ಅವರು ಬೇರೊಂದು ಧರ್ಮಕ್ಕೆ ಸೇರಿದವರು. ಹಿಂದೂ ಮತ್ತು ಕನ್ನಡ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ.
ದಸರಾ ಉದ್ಘಾಟನೆಯಲ್ಲಿ ಮುಖ್ಯ ಪಾತ್ರವು ಕೇವಲ ಔಪಚಾರಿಕವಲ್ಲ. ಬದಲಾಗಿ ಲಕ್ಷಾಂತರ ಭಕ್ತರ ಪವಿತ್ರವೆಂದು ಪರಿಗಣಿಸುವ ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳು ಚಾಮುಂಡೇಶ್ವರಿ ದೇವಿಯ ಗರ್ಭ ಗುಡಿಯ ಮುಂದೆ, ಪವಿತ್ರ ದೀಪ ಹಚ್ಚಿ ಪೂಜಾ ಕೈಂಕರ್ಯಗಳಲ್ಲಿ ತೊಡಗಬೇಕಾಗುತ್ತದೆ. ಇದು ನಿಜವಾದ ಭಕ್ತಿ ತೋರ್ಪಡಿಸುವುದಾಗಿದೆ. ಹೀಗಾಗಿ ಸರ್ಕಾರದ ನಿರ್ಧಾರದಿಂದ ಹಿಂದೂ ಸಂಘಟನೆಗಳು, ಧಾರ್ಮಿಕ ಮುಖಂಡರು ಹಾಗೂ ಸಾಮಾನ್ಯ ಭಕ್ತರಿಗೆ ಕಳವಳಕ್ಕೆ ಕಾರಣವಾಗಿದೆ.
ಧರ್ಮದ ಆಚರಣೆ ಎಂಬುದು ಸಂವಿಧಾನ ಬದ್ಧ ಹಕ್ಕಾಗಿದ್ಧು, ಧಾರ್ಮಿಕ ಸಂಪ್ರದಾಯಗಳು ಮುಂದುವರೆಯಬೇಕು. ಹೀಗಾಗಿ ರಾಜ್ಯ ಸರ್ಕಾರ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು, ಸಂವಿಧಾನದ ಪರಿಚ್ಛೇದ 25 ಮತ್ತು 26ರಲ್ಲಿ ಲಭ್ಯವಾಗಿರುವ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಉಲ್ಲಂಘನೆ ಆದಂತಾಗಿದೆ.
ದಸರಾ ಆಚರಣೆ ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯವಾಗಿದ್ದು, ಇದಕ್ಕೆ ರಾಜ ಮನೆತನದವರು ಸೇರಿದಂತೆ ಇತರರೊಂದಿಗೆ ಸಮಾಲೋಚನೆ ಮಾಡದೇ, ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ತಡೆ ನೀಡಬೇಕು. ಸರ್ಕಾರದ ಈ ಕ್ರಮದಿಂದ ಸಾರ್ವಜನಿಕವಾಗಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆಗಳಿಗೆ ಕಾರಣವಾಗಿದೆ. ಅಲ್ಲದೆ, ಶಾಂತಿ ಉಲ್ಲಂಘನೆ ಮತ್ತು ಕೋಮು ಗಲಭೆಗೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದ್ದು, ಇದನ್ನು ತಡೆಯಬೇಕಾಗಿದೆ. ಹೀಗಾಗಿ ಸರ್ಕಾರದ ಕ್ರಮಕ್ಕೆ ಮಧ್ಯಂತರ ತಡೆ ನೀಡಬೇಕು.
ಸರ್ಕಾರದ ಕ್ರಮ ಸಾಹಿತ್ಯದಲ್ಲಿನ ಸಾಧನೆ ಮತ್ತು ಸಾಂಸ್ಕೃತಿಕವಾಗಿ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದ್ದರೂ, ಸಮಾಜದ ವಿವಿಧ ವರ್ಗಗಳಲ್ಲಿನ ಸಾಂಪ್ರದಾಯಿಕ ಪದ್ಧತಿಗಳಿಗೆ ಹೊಂದಿಕೆಯಾಗುವುದಿಲ್ಲ. ಆದ್ದರಿಂದ ಸರ್ಕಾರದ ಕ್ರಮಕ್ಕೆ ತಡೆ ನೀಡಬೇಕು. ಹೀಗಂತ ಮಾಜಿ ಸಂಸದ ಪ್ರತಾಪ್ ಸಿಂಹ, ಹೈಕೋರ್ಟ್ ಮನವಿ ಮಾಡಿದ್ದಾರೆ.

