Chikkodi News: ಚಿಕ್ಕೋಡಿ: ಚಿಕ್ಕೋಡಿಯಲ್ಲಿ ಸಹೋದರರು ಭೂವಿವಾದ ಹಿನ್ನೆಲೆ, ಬಡಿದಾಡಿಕೊಂಡು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶಿರೂರ ಗ್ರಾ.ಪಂ ವ್ಯಾಪ್ತಿಯ ಖೋತವಾಡಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, ಡಬಲ್ ಮರ್ಡರ್ಗೆ ಜನ ಬೆಚ್ಚಿಬಿದ್ದಿದ್ದಾರೆ.
ಬೆಳಗಾವಿ ಗಡಿ ಭಾಗದಲ್ಲಿ ನಾಲ್ಕು ತಿಂಗಳಲ್ಲಿ ನಾಲ್ಕು ಮರ್ಡರ್ ಪ್ರಕರಣ ನಡೆದಿದ್ದು, ಜನ ಆತಂಕಕ್ಕೆ ಈಡಾಗುವಂತೆ ಮಾಡಿದೆ. ಭೂ ವಿವಾದ ಹಿನ್ನೆಲೆ, ಸಹೋದರ ಸಂಬಂಧಿಕರ ಮಕ್ಕಳ ನಡುವೆ ಗಲಾಟೆ ನಡೆದಿದೆ. ಹೀಗಾಗಿ ಖೋತವಾಡಿ ಗ್ರಾಮದ ಖಂಡೋಬಾ ರಾಮಚಂದ್ರ ಖೋತ(27) ಮತ್ತು ಹಣಮಂತ ತಾನಾಜಿ ಖೋತ(35) ಇಬ್ಬರು ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಪರಿಸ್ಥಿತಿ ಹೈಕೋರ್ಟ್ ಮೆಟ್ಟಿಲೇರುವ ಹಂತಕ್ಕೆ ಬಂದಾಗ, ಕೈ ಕೈ ಮಿಲಾಯಿಸಿದ್ದಾರೆ.
ಕೊನೆಗೆ ಇಬ್ಬರು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡು, ಒಬ್ಬರನ್ನೊಬ್ಬರು ಗಾಯಗೊಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಮಹಾರಾಷ್ಟ್ರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಲಭಿಸದೇ, ಇಬ್ಬರೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.