Ramanagara (Uttara Kannada): ದೂದ್ಸಾಗರ್ ಜಲಪಾತ ವೀಕ್ಷಿಸಲು ರೈಲು ಹಳಿಗಳ ಮೂಲಕ ಅಕ್ರಮವಾಗಿ ಚಾರಣ ನಡೆಸುತ್ತಿದ್ದ ಪ್ರವಾಸಿಗರ ವಿರುದ್ಧ ರೈಲ್ವೆ ರಕ್ಷಣಾ ಪಡೆ ಕಠಿಣ ಕ್ರಮ ಕೈಗೊಂಡಿದೆ. ಅಕ್ರಮವಾಗಿ ರೈಲು ಹಳಿಗೆ ಪ್ರವೇಶಿಸಿದ್ದ 32 ಮಂದಿಯಿಂದ ಒಟ್ಟು 16 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ದೂದ್ಸಾಗರ್ ಜಲಪಾತ ವೀಕ್ಷಿಸಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ, ರೈಲು ಹಳಿಗಳ ಮೂಲಕ ಅಕ್ರಮವಾಗಿ ಚಾರಣ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯ ಕ್ಯಾಸಲ್ರಾಕ್ ರೈಲ್ವೆ ರಕ್ಷಣಾ ಪಡೆ ವಿಶೇಷ ಕಾರ್ಯಾಚರಣೆ ನಡೆಸಿತು.
ದೂದ್ಸಾಗರ್ ಹಾಗೂ ಸೋನಾಲಿಯಂ ರೈಲು ನಿಲ್ದಾಣಗಳ ನಡುವೆ ಅರಣ್ಯ ಮಾರ್ಗದಿಂದ ರೈಲು ಹಳಿಗೆ ಪ್ರವೇಶಿಸಿ ಜಲಪಾತದತ್ತ ತೆರಳುತ್ತಿದ್ದ 32 ಪ್ರವಾಸಿಗರನ್ನು ಅಧಿಕಾರಿಗಳು ಪತ್ತೆಹಚ್ಚಿದರು. ಅವರ ವಿರುದ್ಧ ರೈಲ್ವೆ ಕಾಯ್ದೆಯ ಸೆಕ್ಷನ್ 147ರಡಿ ಪ್ರಕರಣ ದಾಖಲಿಸಿ, ತಲಾ 500 ರೂಪಾಯಿಯಂತೆ ಒಟ್ಟು 16 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಳೆಗಾಲದಲ್ಲಿ ದೂದ್ಸಾಗರ್ ಜಲಪಾತಕ್ಕೆ ರೈಲು ಹಳಿಗಳ ಮೂಲಕ ಪ್ರವೇಶಿಸುವುದನ್ನು ನೈಋತ್ಯ ರೈಲ್ವೆ ಸಂಪೂರ್ಣವಾಗಿ ನಿಷೇಧಿಸಿದೆ. ಆದರೂ ಕೆಲವರು ಅರಣ್ಯ ಮಾರ್ಗದಿಂದ ಗುಪ್ತವಾಗಿ ರೈಲು ಹಳಿಗೆ ಪ್ರವೇಶಿಸಿ ಅಪಾಯಕಾರಿ ಚಾರಣ ನಡೆಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ರೈಲು ಹಳಿಗಳ ಮೇಲೆ ಅಕ್ರಮ ಸಂಚಾರದಿಂದ ರೈಲುಗಳ ಸುರಕ್ಷತೆಗೆ ಧಕ್ಕೆಯಾಗುವ ಜೊತೆಗೆ, ಪ್ರವಾಸಿಗರ ಜೀವಕ್ಕೂ ಅಪಾಯ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ನಿಷೇಧಿತ ಪ್ರದೇಶಗಳಿಗೆ ಪ್ರವೇಶಿಸದಂತೆ ಸಾರ್ವಜನಿಕರಿಗೆ ರೈಲ್ವೆ ಇಲಾಖೆ ಎಚ್ಚರಿಕೆ ನೀಡಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಮುಂದೆಯೂ ಕಠಿಣ ಕ್ರಮ ಮುಂದುವರಿಯಲಿದೆ.




