ನವದೆಹಲಿ : ಮುಂಬರುವ ಬಿಹಾರ ಚುನಾವಣೆಗೆ ರಾಜಕೀಯ ಪಕ್ಷಗಳು ಈಗಿನಿಂದಲೇ ಸಿದ್ದತೆ ನಡೆಸಿವೆ. ಆಡಳಿತಾರೂಢ ಎನ್ಡಿಎ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರ ಪಡೆಯುವ ಲೆಕ್ಕಾಚಾರದಲ್ಲಿದೆ. ಇದಕ್ಕೆ ಪ್ರತಿಯಾಗಿ ಮಹಾ ಮೈತ್ರಿಕೂಟವೂ ತನ್ನದೇ ಆದ ರೀತಿಯಲ್ಲಿ ಚುನಾವಣೆಗೆ ತಯಾರಿ ನಡೆಸುತ್ತಿದೆ. ಈ ನಡುವೆ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿ ಭಾರೀ ವಿವಾದ ಸೃಷ್ಟಿಸಿದೆ.
ದೇಶದ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವ ಬಿಹಾರದಲ್ಲಿ ಸದ್ಯಕ್ಕೆ ವೋಟರ್ ಲಿಸ್ಟ್ ಪರಿಷ್ಕರಣೆಯೇ ದೊಡ್ಡ ಸಮಸ್ಯೆಯಾಗಿದೆ. ಕಳೆದ ಜೂನ್ 28 ರಿಂದಲೇ ಕೇಂದ್ರ ಚುನಾವನಾ ಆಯೋಗ ಈ ಕಾರ್ಯಕ್ಕೆ ಚಾಲನೆ ನೀಡಿದೆ. ಆದರೆ ಇದೀಗ ಇದರ ವಿರುದ್ಧ ವಿಪಕ್ಷಗಳು ಸಿಡಿದೆದ್ದಿವೆ. ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆಯನ್ನೂ ನೀಡುತ್ತಿವೆ.
ನಮಗೆ ಕೇಂದ್ರ ಚುನಾವಣೆ ಆಯೋಗದ ಮೇಲೆ ನಂಬಿಕೆಯಿಲ್ಲ. ಎಸ್ಐಆರ್ ಅಂದರೆ ಮತದಾರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ರದ್ದುಗೊಳಿಸದಿದ್ದರೆ ಮುಂಬರುವ ಬಿಹಾರ ಚುನಾವಣೆಗಳನ್ನು ಆರ್ಜೆಡಿ ಬಹಿಷ್ಕರಿಸಬಹುದು ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : Bagalakote: ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿದ ಪ್ರಕರಣದ ಬಗ್ಗೆ ಕಾಶಪ್ಪನವರ್ ಪ್ರತಿಕ್ರಿಯೆ
ಆದರೆ ತೇಜಸ್ವಿ ಯಾದವ್ ಅವರ ಈ ಹೇಳಿಕೆಗೆ ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ವ್ಯಂಗ್ಯವಾಡಿದ್ದಾರೆ. ಬಹಿಷ್ಕಾರದ ಬೆದರಿಕೆಯು ಚುನಾವಣೆಗೂ ಮುನ್ನವೇ ಸೋಲನ್ನು ಸ್ವೀಕರಿಸಿದಂತಿದೆ ಎಂದು ಛೇಡಿಸಿದ್ದಾರೆ.
ಬಿಹಾರದ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲ ತಿಂಗಳುಗಳು ಬಾಕಿ ಇವೆ. ವಾಸ್ತಾವವಾಗಿ ಆರ್ಜೆಡಿ ನಾಯಕನ ಈ ಮಾತು ಕೇಂದ್ರ ಸರ್ಕಾರವನ್ನು ಹೆದರಿಸುವ ತಂತ್ರದ ಭಾಗವಾಗಿದೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ಒಂದು ಆಡಳಿತ ವ್ಯವಸ್ಥೆಯು ರಚನೆಯಾಗಲು ಚುನಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ.
ಆದರೆ ಈ ರೀತಿಯಾಗಿ ಬಹಿಷ್ಕಾರದಂತಹ ಮಾತುಗಳಿಂದ ಸಹಜವಾಗಿಯೇ ಪ್ರಜಾತಂತ್ರ ಆತಂಕದಲ್ಲಿದೆ ಎಂಬ ಅಭಿಪ್ರಾಯಗಳು ಬರುವುದು ಸಹಜವಾಗಿರುತ್ತದೆ. ಆದರೆ ಬಿಹಾರದ ವಿಚಾರದಲ್ಲಿ ಇದಕ್ಕೆ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆಯೇ ಪ್ರಮುಖ ಕಾರಣವಾಗಿದೆ. ಸದ್ಯಕ್ಕೆ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೂ ಬೆದರಿಕೆ ಹಾಕಿರುವ ತೇಜಸ್ವಿ ಯಾದವ್ ನಡೆ ತೀವ್ರ ಕುತೂಹಲ ಕೆರಳಿಸಿದೆ.