ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿ ಕಂಗಾಲಾಗಿದ್ದ ರೈತರಿಗೆ, ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ, ಜಂಟಿ ಸಭೆ ಮಾಡುವುದಕ್ಕೆ ಸೂಚನೆ ಕೊಡಲಾಗಿದೆ. ಸಭೆ ಬಳಿಕ ಇನ್ನೊಂದು ವಾರದಲ್ಲಿ, ಬೆಳೆ ಹಾನಿ ಪರಿಹಾರ ವಿತರಣೆ ಮಾಡೋದಾಗಿ, ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ.
ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ, ಕಲಬುರಗಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ. ಈ ವೇಳೆ ಮಾತನಾಡಿದ ಸಿದ್ದು, ಈ ಬಾರಿ ರಾಜ್ಯದಲ್ಲಿ ಒಳ್ಳೆಯ ಮಳೆಯಾಗಿದೆ. ವಾಡಿಕೆಗಿಂತ ಶೇಕಡ 4ರಷ್ಟು ಹೆಚ್ಚು ಮಳೆಯಾಗಿದೆ. ಯಾದಗಿರಿ, ಕಲಬುರಗಿ, ಬೀದರ್ ಕಡೆ ಮಳೆ ಜಾಸ್ತಿಯಾಗಿ, ನಷ್ಟವಾಗಿದೆ. ಕೂಡಲೇ ಪರಿಹಾರ ಕೊಡುತ್ತೇವೆ. ಪ್ರಾಥಮಿಕ ವರದಿ ತೆಗೆದುಕೊಂಡಿಲ್ಲ. ಒಂದೇ ಸಾರಿ, ಅಂತಿಮ ವರದಿಯನ್ನು ತೆಗೆದುಕೊಳ್ಳುತ್ತೇವೆ. ಬೆಳೆ ವಿಮೆ ಪರಿಹಾರದ ಬಗ್ಗೆ ಇನ್ನೂ ಚರ್ಚೆ ಮಾಡುತ್ತಿದ್ದೇವೆ. ವಿಮೆ ಮಾಡಿಸಿಕೊಂಡಿರದವರಿಗೂ ಪರಿಹಾರ ಕೊಡೋಣ ಅಂತಾ ಹೇಳಿದ್ರು.
ವಿಜಯಪುರ ಎಸ್ಬಿಐ ಬ್ಯಾಂಕ್ ದರೋಡೆ, ಅನರ್ಹ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಎಸ್ಪಿಗೆ ಫೋನ್ ಮಾಡಿದ್ದೇನೆ. ಅಧಿಕಾರಿಗಳನ್ನು ಅಲರ್ಟ್ ಮಾಡುವಂತೆಯೂ ಹೇಳಿದ್ಧೇನೆ. ಇಂತಹ ಕೃತ್ಯ ತಡೆಗಟ್ಟಲು ಮುಂಜಾಗ್ರತಾ ಕ್ರಮಕ್ಕೆ ಸೂಚನೆ ನೀಡಿದ್ದೇವೆ. ಅರ್ಹ ಬಿಪಿಎಲ್ ಫಲಾನುಭವಿಗಳನ್ನು ತೆಗೆಯಬಾರದು. ಕೇವಲ ಅನರ್ಹರನ್ನು ತೆಗೆದು ಹಾಕಬೇಕಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ

