ಮಕ್ಕಳು ಇಲ್ಲ ಎಂದು ನೂರಾರು ದೇವರಿಗೆ ಹರಕೆ ಹೊತ್ತು, ಹತ್ತಾರು ಡಾಕ್ಟರ್ ಬಳಿ ಹೋಗಿ ಲಕ್ಷಾಂತರ ಖರ್ಚು ಮಾಡುತ್ತಾರೆ. ಮಕ್ಕಳಿಗಾಗಿ ಜಪಿಸುತ್ತಾರೆ. ಆದರೆ ಮಹಾರಾಷ್ಟ್ರದ ಪರ್ಭಾನಿಯಲ್ಲಿ ಚಲಿಸುತ್ತಿರುವ ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ್ದ ಮಹಿಳೆ ಪತಿಯ ಸಹಾಯದಿಂದ ಕಿಟಕಿಯಿಂದ ಮಗುವನ್ನು ಎಸೆದಿದ್ದಾರೆ. ಇದರಿಂದ ಶಿಶು ಗಂಭೀರ ಗಾಯಗಳಿಂದಾಗಿ ಸಾವನ್ನಪ್ಪಿದೆ.
ಜುಲೈ 15ರ ಬೆಳಗ್ಗೆ 6.30ರ ಸುಮಾರಿಗೆ ಪತ್ರಿ ಸೇಲು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಯುವತಿ ಮತ್ತು ಆಕೆಯ ಸಹಚರರು ಸಂತ ಪ್ರಯಾಗ್ ಟ್ರಾವೆಲ್ಸ್ ಸ್ಲೀಪರ್ ಕೋಚ್ ಬಸ್ನಲ್ಲಿ ಪುಣೆಯಿಂದ ಪರ್ಭಾನಿಗೆ ಪ್ರಯಾಣಿಸುತ್ತಿದ್ದರು. ಈ ಸಮಯದಲ್ಲಿ, ರಿತಿಕಾ ಧೇರೆ ಎಂದು ಗುರುತಿಸಲಾದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಬಸ್ಸಿನೊಳಗೆ ಮಗುವಿಗೆ ಜನ್ಮ ನೀಡಿದರು. ಅವರ ಜೊತೆ ಆಕೆಯ ಪತಿ ಎಂದು ಹೇಳಿಕೊಂಡ ಅಲ್ತಾಫ್ ಶೇಖ್ ಕೂಡ ಇದ್ದ. ಹೆರಿಗೆಯಾದ ಸ್ವಲ್ಪ ಸಮಯದ ನಂತರ, ದಂಪತಿ ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಬಸ್ಸಿನ ಕಿಟಕಿಯಿಂದ ಹೊರಗೆ ಎಸೆದಿದ್ದರು ಎಂದು ಆರೋಪಿಸಲಾಗಿದೆ.
ಆರಂಭದಲ್ಲಿ, ಬಸ್ ಪ್ರಯಾಣದಿಂದ ಮಹಿಳೆ ವಾಂತಿ ಮಾಡಿಕೊಂಡಿದ್ದಾಳೆ ಎಂದು ಅವರು ಇತರ ಪ್ರಯಾಣಿಕರು ಮತ್ತು ಬಸ್ ಚಾಲಕರಿಗೆ ತಿಳಿಸಿದರು. ಬಸ್ಸಿನ ಹಿಂದೆ ಪ್ರಯಾಣಿಸುತ್ತಿದ್ದ ಮೋಟಾರ್ ಸೈಕಲ್ ಸವಾರನೊಬ್ಬ ಕಿಟಕಿಯಿಂದ ಅನುಮಾನಾಸ್ಪದವಾಗಿ ಏನೋ ಎಸೆದಿರುವುದನ್ನು ಗಮನಿಸಿದ್ದಾರೆ. ಬಟ್ಟೆಯಲ್ಲಿ ಸುತ್ತಿಕೊಂಡಿದ್ದ ನವಜಾತ ಶಿಶುವನ್ನು ಕಂಡು ಆಘಾತಕ್ಕೊಳಗಾಗಿ ತಕ್ಷಣ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಂತರ ಸ್ಥಳೀಯ ಪೊಲೀಸ್ ಗಸ್ತು ತಂಡವು ಬಸ್ ಅನ್ನು ತಡೆದು ಪ್ರಾಥಮಿಕ ವಿಚಾರಣೆಯ ನಂತರ ದಂಪತಿಯನ್ನು ಬಂಧಿಸಿದ್ದಾರೆ. ಇನ್ನು ವಿಚಾರಣೆಯ ಸಮಯದಲ್ಲಿ, ಮಗುವನ್ನು ಬೆಳೆಸಲು ತಮಗೆ ಸಾಧ್ಯವಿಲ್ಲ ಎಂದು ಹೇಳಿ ಮಗುವನ್ನು ಎಸೆದಿದ್ದಾಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ