ಪಶುಗಳ ಆರೈಕೆಗೆ ವಿಶೇಷ ಆಂಬ್ಯುಲೆನ್ಸ್ ಸೇವೆ 1962: ವರ್ಷದ ಸಂಭ್ರಮಾಚರಣೆಯಲ್ಲಿ ವಿನೂತನ ಕಾರ್ಯ..!

Hubli News: ಹುಬ್ಬಳ್ಳಿ: ಜೀವ ರಕ್ಷಕ ಆಂಬ್ಯುಲೆನ್ಸ್ ಅಂದರೇ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಆಂಬ್ಯುಲೆನ್ಸ್ ಸೈರನ್ ಕೇಳಿದರೇ ಚಿಕ್ಕಮಕ್ಕಳಿಗೂ ಗೊತ್ತಾಗುತ್ತದೆ ಆಂಬ್ಯುಲೆನ್ಸ್ ಬಂತು ಅಂತ. ಆದರೆ ಮನುಷ್ಯರಂತೆ ಪಶುಗಳ ರಕ್ಷಣೆಗೂ ಆಂಬ್ಯುಲೆನ್ಸ್ ಇರುವ ಬಗ್ಗೆ ಬಹುತೇಕ ಜನರಿಗೆ ಗೊತ್ತೇ ಇಲ್ಲ.

108 ತುರ್ತು ಸೇವೆಗಳ ಆಂಬ್ಯುಲೆನ್ಸ್ ಅಂತೆಯೇ 1962 ಆಂಬ್ಯುಲೆನ್ಸ್ ಸೇವೆಯು ಕರ್ನಾಟಕ ರಾಜ್ಯದ ರೈತರಿಗೆ ಒಂದು ದೊಡ್ಡ ವರವಾಗಿದೆ. ಕರ್ನಾಟಕ 1962 ಪಶುವೈದ್ಯಕೀಯ ಆಂಬ್ಯುಲೆನ್ಸ್ ಸೇವಾ ಸಹಾಯವಾಣಿ ಬೆಂಗಳೂರಿನಲ್ಲಿ ಕೇಂದ್ರೀಕೃತ ಕಾಲ್ ಸೆಂಟರ್ ಮೂಲಕ ಕಾರ್ಯನಿರ್ವಹಿಸುತ್ತಿದೆ ಮತ್ತು ರಾಜ್ಯಾದ್ಯಂತ 275 ಸಂಚಾರಿ ಪಶುವೈದ್ಯಕೀಯ ಘಟಕಗಳ ಮೂಲಕ ಸೇವೆ ಸಲ್ಲಿಸುತ್ತಾ, ಇದೀಗ ಮೊದಲ ವಾರ್ಷಿಕೋತ್ಸವವನ್ನು ಯಶಸ್ವಿಯಾಗಿ ಆಚರಿಸುತ್ತಿದೆ. ಹೌದು.. ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳ ನಡುವಿನ ಸಹಯೋಗ ಮತ್ತು ಮುಂಬೈ ಮೂಲದ ಸಂಸ್ಥೆಯಾದ ಎಡುಸ್‌ಪಾರ್ಕ್ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ನೊಂದಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮೂಲಕ ಕಾರ್ಯಗತಗೊಳಿಸಲಾಗಿದ್ದು, ಆಗಸ್ಟ್ 5, 2023 ರಿಂದ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.

ಇನ್ನೂ 1962 ಪಶುವೈದ್ಯಕೀಯ ಆಂಬ್ಯುಲೆನ್ಸ್ ಸೇವೆಯು ತುರ್ತು ಪಶುವೈದ್ಯಕೀಯ ಚಿಕಿತ್ಸೆ, ರೋಗನಿರ್ಣಯ ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳನ್ನು ಒಳಗೊಂಡಂತೆ ಸಮಗ್ರ ಶ್ರೇಣಿಯ ಪಶುವೈದ್ಯಕೀಯ ಸೇವೆ ಯನ್ನು ಒದಗಿಸುತ್ತಿ ಪಶುಪಾಲಕರ ಮನೆ ಬಾಗಿಲಿಗೆ ತಕ್ಷಣದ, ಉತ್ತಮ ಗುಣಮಟ್ಟದ ಮತ್ತು ಉಚಿತ ಆರೈಕೆಯನ್ನು ನೇರವಾಗಿ ನೀಡುತ್ತಿರುವುದು ರೈತರಿಗೆ ವರದಾನವಾಗಿದೆ. ಪ್ರಸ್ತುತ, ಪ್ರತಿದಿನ ಸುಮಾರು 900ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಆಗಸ್ಟ್ 2023 ರಿಂದ ಜುಲೈ 2024 ರವರೆಗೆ ಒಟ್ಟು 2,76,011 ಪ್ರಾಣಿಗಳಿಗೆ ತುರ್ತು ಪಶುವದಕೀಯ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 1,78,572 ದನಗಳು, 17.282 ಎಮ್ಮೆಗಳು, 48,566 ಕುರಿಗಳು, 28,293 ಆಡು, 359 ಹಂದಿಗಳು ಮತ್ತು 2,939 ನಾಯಿಗಳು ಹಾಗೂ ಇತರೆ ಪ್ರಾಣಿಗಳನ್ನು ಉಪಚರಿಸಲಾಗಿದೆ.

ಒಟ್ಟಿನಲ್ಲಿ ಮಹತ್ವಾಕಾಂಕ್ಷೆ ಯೋಜನೆಯು ಕರ್ನಾಟಕ ಸರ್ಕಾರದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸೇವಾಬದ್ಧ ಅಧಿಕಾರಿಗಳ ಅವಿರತ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಯಶಸ್ವಿಯಾಗಿ ಕಾರ್ಯಗತವಾಗುತ್ತಿದೆ. 1962 ತುರ್ತು ಪಶುವೈದ್ಯಕೀಯ ಆಂಬ್ಯುಲೆನ್ಸ್ ಸೇವಾ ಯೋಜನೆಯು ತುರ್ತು ಚಿಕಿತ್ಸೆ ಅಗತ್ಯವಿರುವ ಪ್ರಾಣಿಗಳಿಗೆ ಸಮಯೋಚಿತ ತಜ್ಞ ಆರೈಕೆಯನ್ನು ನೀಡುವುದರಲ್ಲಿ ಸಫಲವಾಗಿದೆ.

ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

About The Author