www.karnatakatv.net : ಹುಬ್ಬಳ್ಳಿ: ಅದು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿರುವ ಸರ್ಕಾರ ಕಚೇರಿ. ಈ ಕಚೇರಿಯಲ್ಲಿ ಏನಾದರೂ ಕೆಲಸ ಆಗಬೇಕು ಅಂತ ಬಂದ್ರೇ ನೀವು ಇಟ್ಟಿರುವ ಭರವಸೆಯನ್ನು ಬಿಟ್ಟು ಬರಬೇಕಿದೆ. ಇಲ್ಲಿರುವ ಸಿಬ್ಬಂದಿಗಳ ವರ್ತನೆಯ ಕುರಿತು ಸ್ಥಳೀಯರೆ ಆಕ್ರೋಶಗೊಂಡಿದ್ದಾರೆ.
ಹುಬ್ಬಳ್ಳಿಯ ಉತ್ತರ ವಲಯದ ಉಪ ನೋಂದಣಾಧಿಕಾರಿಗಳು ಜನಸಾಮಾನ್ಯರ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದು ಭಾರತೀಯ ರಿಯಲ್ ಎಸ್ಟೇಟ್ ನಿರ್ಮಾಣಗಾರರ ಸಂಘ ಹಾಗೂ ಕೆಸಿಸಿಐ ಸದಸ್ಯರು ಆರೋಪಿಸಿದ್ದಾರೆ. ಹೌದು. ಭಾರತೀಯ ರಿಯಲ್ ಎಸ್ಟೇಟ್ ನಿರ್ಮಾಣಗಾರರ ಸಂಘ, ಕೆಸಿಸಿಐ ಹಾಗೂ ವಿವಿಧ ಸಂಘಗಳ ಸದಸ್ಯರು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಹಲವಾರು ಸಮಸ್ಯೆಗಳಿವೆ. ಕೋಟಿಗಟ್ಟಲೇ ಆದಾಯವಿದ್ದರೂ ಕಚೇರಿಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಅಲ್ಲದೇ ಸಣ್ಣ ಪುಟ್ಟ ಕೆಲಸಗಳಿಗೆ ಅಲ್ಲಿನ ಅಧಿಕಾರಿಗಳು ಜನಸಾಮಾನ್ಯರನ್ನು ವಾರಗಟ್ಟಲೇ ಅಲೆದಾಡಿಸುತ್ತಿದ್ದಾರೆ.
ಉಪ ನೋಂದಣಾಧಿಕಾರಿಗಳಾದ ಪ್ರತಿಭಾ ಬೀಡಿಕರ್ ಹಾಗೂ ಸೌಮ್ಯಲತಾ ಅವರು ಜನಸಾಮಾನ್ಯರಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಇನ್ನೂ ಪ್ರತಿಯೊಂದು ಕೆಲಸಗಳಿಗೂ ಅಧಿಕಾರಿಗಳು ಅನಗತ್ಯವಾಗಿ ಕಾಲಹರಣ ಮಾಡುತ್ತಾರೆ. ಅಲ್ಲದೇ ಪ್ರತಿದಿನ ಒಂದೊಂದು ಕಾರಣ ಹೇಳಿ ಕಾಲಹರಣ ಮಾಡುವ ಈ ಅಧಿಕಾರಿಗಳು ಜನಸಾಮಾನ್ಯರ ಬಳಿ ಅಧಿಕೃತ ದಾಖಲಾತಿಗಳಿದ್ದರೂ ಅನಾವಶ್ಯಕವಾಗಿ ಜನರ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಹೀಗಾಗಿ ಈ ಅಧಿಕಾರಿಗಳ ಈ ನಡೆಯಿಂದಾಗಿ ಜನಸಾಮಾನ್ಯರಿಗೆ , ರೈತರಿಗೆ ಹಾಗೂ ಉದ್ಯಮಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದ್ದು ಕೂಡಲೇ ಈ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ವಿದ್ಯಾನಗರದಲ್ಲಿರುವ ಉತ್ತರ ವಲಯದ ಕಚೇರಿಯನ್ನು ಮಿನಿವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನೂ ಉಪನೋಂದಣಾಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ವಿವಿಧ ಸಂಘಗಳ ಸದಸ್ಯರು ಹೇಳಿದ್ದಾರೆ. ಒಟ್ಟಿನಲ್ಲಿ ಸರ್ಕಾರಿ ಸೇವೆ ಮಾಡಬೇಕಿರುವ ಸಿಬ್ಬಂದಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಕೂಡಲೇ ಈ ಬಗ್ಗೆ ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ.
ಕರ್ನಾಟಕ ಟಿವಿ ಹುಬ್ಬಳ್ಳಿ