www.karnatakatv.net :ರಾಯಚೂರು : ರಾಜ್ಯದಲ್ಲಿ ಹಲವು ತಿಂಗಳ ಬಳಿಕ ಶಾಲೆ ಆರಂಭಗೊಂಡಿದ್ದರಿಂದ ವಿದ್ಯಾದೇಗುಲ ನೋಡುತ್ತಿದ್ದಂತೆ ಮಕ್ಕಳು ಫುಲ್ ಖುಷ್ ಆಗಿದ್ದಾರೆ.
ಹದಿನೆಂಟು ತಿಂಗಳ ಬಳಿಕ ವಿದ್ಯಾದೇಗುಲ ಆರಂಭಗೊಂಡಿದ್ದು, ಶಾಲೆಗೆ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳುವ ಮೂಲಕ ಶಿಕ್ಷಕರು ಕೂಡ ಸಂಭ್ರಮದಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಶಾಲೆಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡು ಮಕ್ಕಳನ್ನು ಸ್ವಾಗತ ಕೋರುವ ಬ್ಯಾನರ್ ಕಟ್ಟಿ ಶಾಲೆಗೆ ಬರಮಾಡಿಕೊಂಡರು. ಹಲವು ತಿಂಗಳ ಬಳಿಕ ಶಾಲೆಗೆ ಬಂದ ಮಕ್ಕಳ ಕಣ್ಣಲ್ಲಿ ಸಂತೋಷ ಎದ್ದು ಕಾಣುತ್ತಿತ್ತು. ಸ್ನೇಹಿತರನ್ನು, ಶಿಕ್ಷಕರನ್ನು ಹಲವು ತಿಂಗಳ ಬಳಿಕ ಭೇಟಿ ಮಾಡಿದ ಖುಷಿ ವಿದ್ಯಾರ್ಥಿಗಳ ಮುಖದಲ್ಲಿ ಇತ್ತು.
ಹೊರವಲಯದ ಯರಮರಸ್ ಸರಕಾರಿ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಮಾವಿನ ತೋರಣ ಕಟ್ಟಿ ಶಾಲೆಯನ್ನು ಸಿಂಗಾರ ಗೊಳಿಸಿದ್ದರು. ಮಕ್ಕಳು ಒಬ್ಬೊಬ್ಬರಾಗಿ ಶಾಲೆಗೆ ಆಗಮಿಸುತ್ತಿದ್ದು, ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆರು ಅಡಿ ಅಂತರ ಕಾಯ್ದಿರಿಸಲಾಗಿತ್ತು . ಮಕ್ಕಳಿಗೆ ಸ್ಯಾನಿಟೈಸ್ ಮಾಡಿ ಕ್ಲಾಸ್ ರೂಮ್ವೊಳಗೆ ಬಿಡಲಾಗುತ್ತಿದ್ದು ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು