Wednesday, September 18, 2024

Latest Posts

Siddaramaiah : ತೀರ್ಪು ಬರೋವರೆಗೂ ಸಿದ್ದರಾಮಯ್ಯಗೆ ಟೆನ್ಶನ್ : ಸಿದ್ದು ಪರ ತೀರ್ಪು ಬಂದರೆ ಏನಾಗುತ್ತಾ?

- Advertisement -

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿದ್ದಾರೆ. ಪ್ರಾಸಿಕ್ಯೂಷನ್ ವಿರುದ್ಧ ಸಿದ್ದರಾಮಯ್ಯ ಹೈಕೋರ್ಟ್​​ಗೆ ರಿಟ್ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಪೂರ್ಣಗೊಂಡಿದೆ. ವಾದ-ಪ್ರತಿವಾದಗಳನ್ನು ಆಲಿಸಿರೋ ಹೈಕೋರ್ಟ್ ಏಕಸದಸ್ಯ ಪೀಠ, ತೀರ್ಪುನ್ನು ಕಾಯ್ದಿರಿಸಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ತೀರ್ಪು ಬರೋವರೆಗೂ ತಾತ್ಕಾಲಿಕ ರಿಲೀಫ್ ಸಿಕ್ಕತಾಂಗಿದೆ. ಆದ್ರೆ, ತೀರ್ಪು ಏನು ಬರಬಹುದು ಎಂಬುದು ಸಿದ್ದರಾಮಯ್ಯಗೆ ಟೆನ್ಶನ್ ಶುರುವಾಗಿದೆ. ಒಂದು ವೇಳೆ ಸಿದ್ದರಾಮಯ್ಯ ಪರ ತೀರ್ಪು ಬಂದ್ರೆ ಏನಾಗುತ್ತೆ?

ಪ್ರಾಸಿಕ್ಯೂಷನ್ ಅನುಮತಿ ವಿರುದ್ಧ ಸಲ್ಲಿಸಿರುವ ರಿಟ್ ಅರ್ಜಿಯ ತೀರ್ಪು ಸಿದ್ದರಾಮಯ್ಯ ಪರ ಆದೇಶ ಬಂದರೆ ಮುಂದೇನು? ಹಾಗೆಯೇ, ತೀರ್ಪು ಸಿದ್ದರಾಮಯ್ಯ ವಿರುದ್ಧ ತೀರ್ಪು ಬಂದರೆ ಮುಂದೇನಾಗುತ್ತೆ ಅನ್ನೋ ಕುತೂಹಲ ರಾಜ್ಯದ ಜನರನ್ನು ಕಾಡ್ತಿದೆ. ಮೊದಲಿಗೆ ಸಿಎಂ ಪರ ತೀರ್ಪು ಬಂದರೆ ಏನಾಗುತ್ತೆ ಅನ್ನೋದನ್ನ ನೋಡೋದಾದ್ರೆ.. ಬೀಸುವ ದೊಣ್ಣೆಯಿಂದ ಸಿದ್ದರಾಮಯ್ಯ ಪಾರಾಗಬಹುದು.  ಸಿದ್ದರಾಮಯ್ಯ ಅವರ 40 ವರ್ಷಗಳ ರಾಜಕೀಯ ಜೀವನದಲ್ಲಿ ಮುಡಾ ಹಗರಣ ಆರೋಪ ದೊಡ್ಡ ಕಪ್ಪು ಚುಕ್ಕೆ ಆಗಿದೆ. ಹೀಗಾಗಿ, ಹೈಕೋರ್ಟ್​ನಲ್ಲಿ ಕ್ಲೀನ್ ಚೀಟ್ ಸಿಕ್ಕದರೆ, ಸಿದ್ದರಾಮಯ್ಯ ಅವರು ಬೀಸೋ ದೊಣ್ಣೆ ಪಾರಾಗಾಲಿದ್ದಾರೆ. ಜೊತೆಗೆ ಪ್ರಾಸಿಕ್ಯೂಷನ್​ನಿಂದ ಕುಗ್ಗಿದ್ದ ಸಿದ್ದರಾಮಯ್ಯಗೆ ಆನೆ ಬಲ ಬಂದಂತಾಗಬಹುದು. ಪ್ರಾಸಿಕ್ಯೂಷನ್​​ಗೆ ಅನುಮತಿ ನೀಡಿದ್ದ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ಅವರಿಗೆ ಹಿನ್ನಡೆಯಾಗಬಹುದು. ಸಿದ್ದು ಪರ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತೀರ್ಪು ನೀಡಿದ್ರೆ, ಕುಗ್ಗಿ ಹೋಗಿದ್ದ ಕಾಂಗ್ರೆಸ್ ಸರ್ಕಾರಕ್ಕೂ ನೈತಿಕ ಶಕ್ತಿ ಬರಲಿದೆ. ಸಚಿವರು, ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲೂ ಆತ್ಮವಿಶ್ವಾಸ ಹೆಚ್ಚಲಿದೆ. ರಾಜಕೀಯವಾಗಿ ಸಿಎಂ ಸಿದ್ದರಾಮಯ್ಯ ಮತ್ತಷ್ಟು ಬಲಿಷ್ಠ ಆಗಬಹುದು. ಅಲ್ಲದೇ, ಸಿಎಂ ಹಾಗೂ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದ ಬಿಜೆಪಿಗೆ ತಿರುಗೇಟು ನೀಡಲು ಅವಕಾಶ ದೊರೆಯಲಿದೆ. ಇಡೀ ದೇಶಕ್ಕೆ ಬಿಜೆಪಿ ವಿರುದ್ದ ಕಾಂಗ್ರೆಸ್ ಸಂದೇಶ ಹೊರಡಿಸಿದಂತಾಗುತ್ತದೆ.

ಸಿದ್ದರಾಮಯ್ಯ ಪರ ತೀರ್ಪು ಬಂದ್ರೆ ಯಾವುದೇ ಸಮಸ್ಯೆ ಇಲ್ಲ ಅನ್ನೋ ಗೊತ್ತಿರೋ ವಿಚಾರ. ಆದ್ರೆ, ಒಂದು ವೇಳೆ ಸಿದ್ದರಾಮಯ್ಯ ವಿರುದ್ಧ ತೀರ್ಪು ಬಂದ್ರೆ, ದೊಡ್ಡ ರಾಜಕೀಯ ಬೆಳವಣಿಗೆ ಆಗಲಿದೆ. ರಾಜ್ಯಪಾಲರ ಆದೇಶವನ್ನು ಹೈಕೋರ್ಟ್​ ಎತ್ತಿ ಹಿಡಿದರೆ, ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ದೊರೆಯಲಿದೆ. ತನಿಖೆಗೆ ಆದೇಶ ನೀಡಿದರೆ ತಕ್ಷಣವೇ ಸಿಎಂ‌ ವಿರುದ್ಧ ಎಫ್​ಐಆರ್ ಆಗುವ ಸಾಧ್ಯತೆ ಇದೆ. ರಾಜ್ಯಪಾಲರ ಪರ ಆದೇಶ ಹೊರಬಿದ್ದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ ಇದೆ. ರಾಜೀನಾಮೆ ಕೊಡದೇ ಮತ್ತೆ ಕಾನೂನು ಹೋರಾಟ ಮುಂದುವರಿಸುವ ಆಯ್ಕೆಯೂ ಸಿದ್ದರಾಮಯ್ಯ ಅವರ ಮುಂದಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಬಹುದು. ರಾಜ್ಯಪಾಲರ ವಿರುದ್ಧ ಮತ್ತೆ ಕಾನೂನು ಜೊತೆ ರಾಜಕೀಯ ಸಮರ ಏರ್ಪಡಬಹುದು. ಪಕ್ಷದ ವತಿಯಿಂದ ರಾಜ್ಯಾದ್ಯಂತ ಮತ್ತೊಂದು ಸುತ್ತಿನ ಹೋರಾಟಕ್ಕೆ ಕರೆ ನೀಡಬಹುದು. ಕಾಂಗ್ರೆಸ್ ಈ ವಿಷಯವನ್ನು ರಾಷ್ಟ್ರ ಮಟ್ಟದಲ್ಲಿ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಹೋರಾಟ ಮಾಡಬಹುದು.

ಹೈಕೋರ್ಟ್​ನಲ್ಲಿ ಅರ್ಜಿಯ ವಿಚಾರಣೆ ಆರಂಭವಾದಗಿನಿಂದಲೂ ಕಾಂಗ್ರೆಸ್​ನಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆ ಆಗ್ತಿವೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬಹುದು ಅನ್ನೋ ಚರ್ಚೆಗಳು ನಡೀತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಈಗಾಗಲೇ ಹಲವು ನಾಯಕರು ಸಿಎಂ ಸ್ಥಾನದ ಕುರಿತು ಹೇಳಿಕೆಗಳನ್ನು ಕೋಡ್ತಿದ್ದಾರೆ. ಹಿರಿಯ ಸಚಿವರಾದ ಆರ್.ವಿ.ದೇಶಪಾಂಡೆ, ಶಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಈಗಾಗಲೇ ಸಿಎಂ ಸ್ಥಾನಕ್ಕೆ ಕಸರತ್ತು ನಡೆಸ್ತಿದ್ದಾರೆ. ಇದೆಲ್ಲದರ ನಡುವೆ ಡಿಸಿಎಂ ಡಿಕೆಶಿ ಅಮೆರಿಕದಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿರೋದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಒಟ್ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀರ್ಪು ಬಂದ್ರೆ, ದೊಡ್ಡ ಸಂಕಷ್ಟವೇ ಎದುರಾಗಲಿದೆ. ರಾಜ್ಯ ರಾಜಕೀಯದಲ್ಲಿ ದೊಡ್ಡ ಬೆಳವಣಿಗೆಗಳು ನಡೆಯಲಿದೆ. ಹೀಗಾಗಿ, ಹೈಕೋರ್ಟ್ ತೀರ್ಪು ಇಡೀ ರಾಜ್ಯದ ಗಮನ ಸೆಳೆದಿದ್ದು, ಏನಾಗುತ್ತೆ ಅನ್ನೋದು ಕುತೂಕಲ ಮೂಡಿಸಿದೆ.

- Advertisement -

Latest Posts

Don't Miss