ನವದೆಹಲಿ : ಪಹಲ್ಗಾಮ್ ದಾಳಿಯ ಬಳಿಕ ಉಗ್ರರನ್ನು ಸದೆ ಬಡೆಯುವ ಕಾರ್ಯತಂತ್ರದ ಭಾಗವಾಗಿ ಪಾಕಿಸ್ತಾನದ ಮೇಲೆ ಭಾರತ ಪ್ರತೀಕಾರಕ್ಕೆ ಮುಂದಾಗಿದೆ. ಈಗಾಗಲೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಐತಿಹಾಸಿಕ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸುವ ಮೂಲಕ ಪಾಕಿಸ್ತಾನಕ್ಕೆ ಭಾರತದ ದೊಡ್ಡ ಏಟು ನೀಡಿತ್ತು. ಇದರಿಂದ ಕಂಗಾಲಾಗಿರುವ ಪಾಕಿಸ್ತಾನ ದಿನಕ್ಕೊಂದರಂತೆ ಹೇಳಿಕೆ ನೀಡುವ ಮೂಲಕ ಭಾರತದ ವಿರುದ್ಧ ಭಂಡ ಧೈರ್ಯ ತೋರುತ್ತಿದೆ.
ಇನ್ನೂ ಎಲ್ಲವನ್ನೂ ಕಳೆದುಕೊಂಡು ಹತಾಶೆಯಲ್ಲಿರುವ ಪಾಕಿಸ್ತಾನ, ಏಪ್ರಿಲ್ 24 ರಿಂದಲೂ ನಿರಂತರವಾಗಿ ಪಿಒಕೆಯಲ್ಲಿ ಭಾರತದ ವಿರುದ್ಧ ಪ್ರಚೋದಿತ ಗುಂಡಿನ ದಾಳಿಯನ್ನು ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತದ ಸೇನೆಯೂ ತಕ್ಕ ಉತ್ತರ ನೀಡುತ್ತಿದೆ. ಪ್ರಮುಖವಾಗಿ ಮೇ 2 ಹಾಗೂ 3ರ ಮಧ್ಯರಾತ್ರಿ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಕುಪ್ವಾರಾ, ಉರಿ ಮತ್ತು ಅಖ್ನೂರ್ ಪ್ರದೇಶಗಳಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ಸೇನೆಯ ಅಪ್ರಚೋದಿತ ಶಸ್ತ್ರಾಸ್ತ್ರಗಳ ಸಮೇತ ಗುಂಡಿನ ದಾಳಿಗೆ ಭಾರತೀಯ ಸೇನೆಯು ದಿಟ್ಟ ಉತ್ತರ ನೀಡಿದ್ದು, ಇದು 9 ನೇ ದಿನದ ಕದನ ವಿರಾಮ ಉಲ್ಲಂಘನೆಯಾಗಿದೆ.
ಪಾಕ್ಗೆ ಎಚ್ಚರಿಸಿದ ಭಾರತ..
ಪಾಕಿಸ್ತಾನ ಸೇನೆಯು ಅಂತರರಾಷ್ಟ್ರೀಯ ಗಡಿಗಳಲ್ಲಿ ಕದನ ವಿರಾಮ ಉಲ್ಲಂಘಿಸುವ ಮೂಲಕ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿದೆ. ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ಡಿಜಿಎಂಒಗಳ ನಡುವೆ ಇತ್ತೀಚೆಗೆ ನಡೆದ ಹಾಟ್ಲೈನ್ ಚರ್ಚೆಯ ಹೊರತಾಗಿಯೂ, ಭಾರತವು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಕದನ ವಿರಾಮ ಉಲ್ಲಂಘನೆಗಳ ಸ್ವರೂಪ ಬದಲಾಗಿದೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದ ಕೆಲವೇ ಗಂಟೆಗಳ ನಂತರ, ಏಪ್ರಿಲ್ 24 ರ ರಾತ್ರಿಯಿಂದ, ಪಾಕಿಸ್ತಾನಿ ಪಡೆಗಳು ಕಾಶ್ಮೀರ ಕಣಿವೆಯಿಂದ ಪ್ರಾರಂಭಿಸಿ ಜಮ್ಮು ಮತ್ತು ಕಾಶ್ಮೀರದ ಎಲ್ಒಸಿಯ ವಿವಿಧ ಸ್ಥಳಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿವೆ.
ನಿಲ್ಲದ ಕದನ ವಿರಾಮ ಉಲ್ಲಂಘನೆ..
ಪ್ರಮುಖವಾಗಿ ಪಹಲ್ಗಾಮ್ ದಾಳಿಯ ಬಳಿಕ ಗಡಿಯಲ್ಲಿ ಪಾಕಿಸ್ತಾನ ಉಲ್ಲಂಘಿಸಿರುವ ಕದನ ವಿರಾಮಗಳನ್ನು ಗಮನಿಸಿದಾಗ, ಮೇ 1 ಹಾಗೂ 2, 2025 ರ ರಾತ್ರಿ, ಪಾಕಿಸ್ತಾನಿ ಸೇನಾ ಠಾಣೆಗಳು ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಪೂಂಚ್, ನೌಶೇರಾ ಮತ್ತು ಅಖ್ನೂರ್ ಪ್ರದೇಶಗಳ ಎದುರಿನ ಎಲ್ಒಸಿಯಾದ್ಯಂತದ ಠಾಣೆಗಳಿಂದ ಅಪ್ರಚೋದಿತ ಶಸ್ತ್ರಾಸ್ತ್ರಗಳ ಗುಂಡಿನ ದಾಳಿ ನಡೆಸಿವೆ. ಇನ್ನೂ ಏಪ್ರಿಲ್ 30 ಹಾಗೂ ಮೇ 01, 2025 ರ ರಾತ್ರಿ, ಪಾಕಿಸ್ತಾನದ ಸೇನಾ ಠಾಣೆಯ ಸೈನಿಕರು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಕುಪ್ವಾರಾ, ಉರಿ ಮತ್ತು ಅಖ್ನೂರ್ ಬಳಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತ ಶಸ್ತ್ರಾಸ್ತ್ರಗಳ ಸಮೇತ ಗುಂಡಿನ ದಾಳಿ ನಡೆಸಿದ್ದಾರೆ. ಇವುಗಳಿಗೆ ಭಾರತೀಯ ಸೇನೆಯು ತಕ್ಕ ಪ್ರತ್ತ್ಯತ್ತರ ನೀಡಿದೆ.
ವಾಹನ ತಪಾಸಣಾ ಕೇಂದ್ರಗಳ ಸ್ಥಾಪನೆ..
ಈ ನಡುವೆಯೇ ಭಯೋತ್ಪಾದಕ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ. ಭಯೋತ್ಪಾದಕರನ್ನು ಪತ್ತೆಹಚ್ಚಲು ಅರಣ್ಯಗಳು ಮತ್ತು ಗಡಿ ಪ್ರದೇಶಗಳನ್ನು ಒಳಗೊಂಡಂತೆ ವಿವಿಧ ಅರಣ್ಯ ಪ್ರದೇಶಗಳಲ್ಲಿ ಜಂಟಿ ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ. ಹೆದ್ದಾರಿಗಳು ಮತ್ತು ರಸ್ತೆಗಳಲ್ಲಿ ಶಂಕಿತ ವಾಹನಗಳ ಸಂಪೂರ್ಣ ತಪಾಸಣೆ ನಡೆಸುತ್ತಿರುವ ಭದ್ರತಾ ಪಡೆಗಳಿಗಾಗಿಯೇ ವಾಹನ ತಪಾಸಣಾ ಠಾಣೆಗಳನ್ನು ಸ್ಥಾಪಿಸಲಾಗಿದೆ. ಅಮಾಯಕ ಪ್ರವಾಸಿಗರ ರಕ್ತ ಹರಿಸಿರುವ ರಣಹೇಡಿ ಉಗ್ರರನ್ನು ಹೇಗಾದರೂ ಮಾಡಿ ಪತ್ತೆ ಮಟ್ಟ ಹಾಕಲು ಸೇನೆಯು ಪಣ ತೊಟ್ಟಿದೆ. ಹೀಗಾಗಿ ಕಣಿವೆ ರಾಜ್ಯದಲ್ಲಿ ಶೋಧ ಕಾರ್ಯಗಳು ಚುರುಕಾಗಿವೆ. ಶಂಕಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಭಾರತೀಯ ಸೇನೆಯು ವಿಶೇಷ ಕಾರ್ಯಾಚರಣೆ ಕೈಗೊಂಡಿದೆ.