ರಾಮಾಯಣದಲ್ಲಿ ಬರುವ ಮುಖ್ಯಪಾತ್ರಗಳಲ್ಲಿ ಸೀತೆ ಕೂಡಾ ಒಬ್ಬಳು. ವಿವಾಹದ ಬಳಿಕ ಕಷ್ಟಗಳನ್ನೇ ಅನುಭವಿಸಿದ ಸೀತೆ, ಕೊನೆಗೆ ರಾಮನಿಂದ ದೂರವಾದಳು. ಆದರೂ ಕೂಡ ಸೀತೆಯಲ್ಲಿರುವ ಕೆಲ ಗುಣಗಳು ಇಂದಿನ ಕಾಲದ ಹೆಣ್ಣು ಮಕ್ಕಳು ಕಲಿತರೆ, ಜೀವನ ಅತ್ಯುತ್ತಮವಾಗಿರುತ್ತದೆ. ಹಾಗಾದ್ರೆ ಸೀತೆಯಿಂದ ಕಲಿಯಬೇಕಾದ ಗುಣಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ತ್ಯಾಗ. ಸೀತಾಮಾತೆಯ ತ್ಯಾಗದ ಬಗ್ಗೆ ಹೇಳುವುದಾದರೆ, ಆಕೆಯ ಸಂಪೂರ್ಣ ಜೀವನವೇ ತ್ಯಾಗಮಯವಾಗಿದೆ. ಬಾಲ್ಯದಲ್ಲಿ ಸೀತೆ ಅಪ್ಪ ಅಮ್ಮನ ಮುದ್ದಿನ ಮಗಳಾಗಿದ್ದಳು. ತಂಗಿಯರ ಮುದ್ದಿನ ಅಕ್ಕನಾಗಿದ್ದಳು. ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದಿದ್ದಳು. ಆದ್ರೆ ವಿವಾಹದ ಬಳಿಕ ಆಕೆಗೆ ರಾಮನ ಜೊತೆ ವನವಾಸಕ್ಕೆ ಹೋಗಬೇಕಾಯಿತು. ಆಕೆ ರಾಜ್ಯದ ಆಸೆ, ಚಿನ್ನಾಭರಣಗಳನ್ನೆಲ್ಲ ತ್ಯಾಗ ಮಾಡಿ, ರಾಮನೊಂದಿಗೆ ವನವಾಸಕ್ಕೆ ಹೋದಳು. ಇಂದಿನ ಹೆಣ್ಣು ಮಕ್ಕಳು ಕೂಡ ಗಂಡನಿಗೆ ಕಷ್ಟ ಬಂದ ಸಮಯದಲ್ಲಿ, ಅವನಿಗೆ ಸಾಥ್ ನೀಡಬೇಕು ಎಂಬುದೇ ಇದರ ಅರ್ಥ.
ಎರಡನೆಯ ಗುಣ ಸಾಹಸ. ಲಂಕಾಧಿಪತಿ ರಾವಣ, ಸೀತೆಯನ್ನ ಅಪಹರಿಸಿ ಅಶೋಕವನದಲ್ಲಿಟ್ಟಾಗ, ಆಕೆ ಶ್ರೀರಾಮನನ್ನು ನೆನೆಯುತ್ತ ಧೈರ್ಯದಿಂದ ಇದ್ದಳೇ ವಿನಃ ಹೆದರಿ ಕೂರಲಿಲ್ಲ. ಆಕೆಯನ್ನು ಹೆದರಿಸಲು ರಾವಣ, ಮಾಯಾವಿ ರಾಕ್ಷಸರನ್ನೆಲ್ಲ ಕಳುಹಿಸಿದ್ದ. ಆದರೆ ಆಕೆ ಅವರನ್ನೆಲ್ಲ ಕಡೆಗಣಿಸಿ, ರಾಮನ ಜಪ ಮಾಡುತ್ತಿದ್ದಳು. ಅಲ್ಲದೇ ಆಕೆ ಎಷ್ಟು ಪರಾಕ್ರಮಿ ಇದ್ದಳೆಂದರೆ, ಯಾವ ಧನಸ್ಸನ್ನು ರಾವಣ ಎತ್ತಲಸಾಧ್ಯವೆನ್ನುತ್ತಿದ್ದನೋ, ಆ ಧನಿಸ್ಸಿನಿಂದ ಬಾಲ್ಯದಲ್ಲಿ ಆಕೆ ಆಟ ಆಡುತ್ತಿದ್ದಳು. ಇಂದಿನ ಹೆಣ್ಣು ಮಕ್ಕಳು ಕೂಡ ದುಷ್ಟರಿಗೆ ಹೆದರದೇ, ಧೈರ್ಯವಂತರಾಗಿರಬೇಕು ಎಂಬುದು ಇದರ ಅರ್ಥ.
ಮೂರನೇಯ ಗುಣ, ಪಾತಿವೃತ್ಯ. ಸೀತೆ ಮನಸ್ಸು ಮಾಡಿದ್ದರೆ, ಆಕೆ ಅಯೋಧ್ಯೆಯಲ್ಲಿ ಆರಾಮವಾಗಿ ಇರಬಹುದಿತ್ತು. ಇಲ್ಲವೇ, ತಂದೆ ಜನಕ ರಾಜನ ಬಳಿ ಹೋಗಿ ಐಶಾರಾಮಿ ಜೀವನ ನಡೆಸಬಹುದಿತ್ತು. ಆದರೆ ಆಕೆ ಹಾಗೆ ಮಾಡಲಿಲ್ಲ. ಪತಿಯ ಜೊತೆ ವನವಾಸಕ್ಕೆ ಹೋದಳು. ಪತಿಯ ಕಷ್ಟಕ್ಕೆ ಜೊತೆ ನೀಡಿದಳು. ಇಂದಿನ ಕೆಲ ಹೆಣ್ಣು ಮಕ್ಕಳು ಪತಿಗೆ ಸ್ವಲ್ಪ ಹಣದ ಕಷ್ಟ ಬಂದರೂ, ಎದ್ದು ತವರು ಮನೆಗೆ ಹೊರಡುತ್ತಾರೆ. ಅದರ ಬದಲು, ಪತಿಯ ಕಷ್ಟಕ್ಕೆ ಜೊತೆ ನೀಡಿ, ಆತ ಗೆಲ್ಲುವುದಕ್ಕೆ ಸಹಾಯ ಮಾಡುವ ಮನಸ್ಸಿರಬೇಕು.
ನಾಲ್ಕನೇಯ ಗುಣ ಸ್ವಾವಲಂಬಿ. ಗರ್ಭಿಣಿ ಎಂಬುದರ ಬಗ್ಗೆಯೂ ಚಿಂತಿಸದ ರಾಮ ಸೀತೆಯನ್ನ ಕಾಡಿಗೆ ಕಳುಹಿಸಿದ. ಮೊದಲೇ ಹೇಳಿದ ಹಾಗೆ ಆಕೆ ಅಪ್ಪನ ಮನೆಗೆ ಹೋಗಬಹುದಿತ್ತು. ಆದರೆ ಆಕೆ ವಾಲ್ಮೀಕಿಯ ಕುಟೀರದಲ್ಲಿ ಸಾಧಾರಣ ಜೀವನ ನಡೆಸಿದಳು. ಲವ-ಕುಶರನ್ನು ಒಬ್ಬಳೇ ಸಾಕಿದಳು. ಅವರನ್ನು ಉತ್ತಮರನ್ನಾಗಿ ಬೆಳೆಸಿದಳು. ಪತಿಯಿಂದ ದೂರವಾದ ಎಷ್ಟೋ ಹೆಣ್ಣು ಮಕ್ಕಳಿದ್ದಾರೆ. ಅಂಥವರು ಧೈರ್ಯವಂತರಾಗಿ ಇದೇ ರೀತಿ ಸ್ವಾವಲಂಬಿ ಜೀವನ ನಡೆಸಬೇಕು ಅನ್ನೋದೇ ಇದರ ಅರ್ಥ.
ಐದನೇಯ ಗುಣ ಸರಳತೆ. ಸೀತಾ ದೇವಿ ಶ್ರೀಮಂತೆಯಾಗಿಯೇ ಬೆಳೆದವಳು. ಮದುವೆಯಾದ ಮೇಲೆ ಸ್ವಲ್ಪ ವರ್ಷ ಅಯೋಧ್ಯೆಯ ರಾಣಿ ಆಗಿ ಮೆರೆದಳು. ಒಡವೆ ವಸ್ತ್ರ, ಊಟೋಪಚಾರಕ್ಕೇನು ಕಡಿಮೆ ಇರಲಿಲ್ಲ. ಆದರೂ ಸೀತೆ ತುಂಬಿದ ಕೊಡದಂತಿದ್ದಳು. ಸರಳತೆಯ ಸಾಕಾರ ಮೂರ್ತಿಯಾಗಿದ್ದಳು. ಇಂದಿನ ಜಾಯಮಾನದ ಕೆಲ ಹೆಣ್ಣು ಮಕ್ಕಳಿಗೆ ಕೊಂಚ ಶ್ರೀಮಂತಿಕೆ ಬಂದರೂ, ಅಹಂ ಹೆಚ್ಚುತ್ತದೆ. ಇಂಥವರೆಲ್ಲ ಸೀತೆಯನ್ನು ನೋಡಿ ಸರಳತೆಯ ಗುಣ ಕಲಿಯಬೇಕು.