ಸ್ಯಾಂಡಲ್ವುಡ್ ನಟ ಶ್ರೀನಗರ ಕಿಟ್ಟಿ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಬಹು ನಿರೀಕ್ಷಿತ ಸಂಜು ವೆಡ್ಸ್ ಗೀತಾ-2 ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ. ನಿರ್ದೇಶಕ ನಾಗಶೇಖರ್ ಆ್ಯಕ್ಷನ್ ಕಟ್ ಹೇಳಿರುವ ಸಂಜು ವೆಡ್ಸ್ ಗೀತಾ 2ನಲ್ಲಿ ಶ್ರೀನಗರ ಕಿಟ್ಟಿ ಜೊತೆ ರಮ್ಯಾ ಬದಲು ರಚಿತಾ ರಾಮ್ ಅಭಿನಯಿಸಿದ್ದಾರೆ.
ಈ ಸಿನಿಮಾದಲ್ಲಿ ಸಂಜು ಹಾಗೂ ಗೀತಾರ ಹೊಸ ಪ್ರೇಮಕಥೆ ಜೊತೆಗೆ ರೇಷ್ಮೆ ಬೆಳೆಗಾರರ ಹೋರಾಟದ ಕಥೆಯನ್ನಿಟ್ಟುಕೊಂಡು ನಿರ್ದೇಶಕ ನಾಗಶೇಖರ್ ಹೇಳಲು ಹೊರಟ್ಟಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಈ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದ್ದು, ಚಿತ್ರದ ಬಗ್ಗೆ ನಾಗಶೇಖರ್ ಸಾಕಷ್ಟು ಮಾಹಿತಿಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಒಂದು ವರ್ಷದ ಹಿಂದೆ ನಮ್ಮ ಸಿನಿಮಾ ಶುರುವಾಗಿತ್ತು. ಶಿಡ್ಲಘಟ್ಟ, ಸ್ವಿಡ್ಜರ್ಲೆಂಡ್ ಹಾಗೂ ಬೆಂಗಳೂರಿನ ಸುತ್ತಮುತ್ತ 72 ದಿನಗಳ ಕಾಲ ಒಟ್ಟು 6 ಹಂತಗಳಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ, ಸಾಧುಕೋಕಿಲಾ, ತಬಲಾನಾಣಿ ಸೇರಿದಂತೆ ಹಲವು ಕಲಾವಿದರ ತಾರಾಬಳಗವಿದೆ. ಸದ್ಯದಲ್ಲೇ ಸಿನಿಮಾದ ಆಡಿಯೋ ರಿಲೀಸ್ ಮಾಡೋ ಪ್ಲಾನ್ ಇದೆ. ಸಂಜು ವಡ್ಸ್ ಗೀತಾ ಪಾರ್ಟ್ 1ನಲ್ಲಿ ಹೇಳಿದಂತೆ ಈ ಸಿನಿಮಾದಲ್ಲೂ ಕೂಡ ಹೀರೋ, ಬ್ಯೂಟಿ, ಐ ಲವ್ ಯು ಗೀತಾ ಎಂದು ಕರೆಯುತ್ತಾರೆ ಅಂತ ತಿಳಿಸಿದ್ದಾರೆ.
ಇನ್ನು, ಚಿತ್ರದ ಬಗ್ಗೆ ಮಾತನಾಡಿದ ಶ್ರೀನಗರ ಕಿಟ್ಟಿ ಇವತ್ತಿಗೆ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಈ ಸಿನಿಮಾದಲ್ಲಿ ನಾನು ರೇಷ್ಮೆ ಬೆಳೆಗಾರನಾಗಿ ಕಾಣಿಸಿಕೊಂಡಿದ್ದೇನೆ. ಸದ್ಯದಲ್ಲೇ ಹಾಡುಗಳ ಮೂಲಕ ನಿಮ್ಮ ಮುಂದೆ ಬರುತ್ತೇವೆ ಅಂತ ಹೇಳಿದ್ದಾರೆ. ಇನ್ನು, ಸಂಜು ವೆಡ್ಸ್ ಗೀತಾ ಜರ್ನಿ ಬಗ್ಗೆ ಪ್ರತಿಕ್ರಿಯಿಸಿದ ಡಿಂಪಲ್ ಕ್ವೀನ್ ರಚಿತಾ ರಾಮ್, ಟೈಟಲ್ ಅದೇ ಇದ್ದರೂ ಈ ಸಿನಿಮಾ ಬೇರೆ ತರಹದ ಕಥೆಯನ್ನು ಹೊಂದಿದೆ. ಸ್ವಿಡ್ಜರ್ಲೆಂಡ್ ಶೂಟಿಂಗ್ ಸಮಯದಲ್ಲಿ ನಮಗಾದ ಅನುಭವ ಮತ್ತು ನೆನಪು ಸದಾ ನಮ್ಮೊಂದಿಗೆ ಉಳಿದಿದೆ. ಈ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅದಕ್ಕೆ ಸತ್ಯ ಹೆಗಡೆ ಅವರೇ ಕಾರಣ. ರೇಷ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ ನಮ್ಮ ಮಣ್ಣಿನ ಪ್ರೇಮಿಗಳ ಪ್ರೇಮಕಾವ್ಯವನ್ನು ನಾಗಶೇಖರ್ ಈ ಚಿತ್ರದಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆ ಎಂದು ರಚಿತಾ ತಿಳಿಸಿದ್ದಾರೆ.
-ಸ್ವಾತಿ.ಎಸ್.