ಆಪರೇಷನ್ ಸಿಂಧೂರ್ ವಿಶೇಷ :
ನವದೆಹಲಿ : ಜಾಗತಿಕ ಮಟ್ಟದಲ್ಲಿ ಹಲವು ದೇಶಗಳ ಮೇಲೆ ಅಧಿಕ ತೆರಿಗೆ ನೀತಿಯನ್ನು ಜಾರಿಗೆ ತಂದು ತಾತ್ಕಾಲಿಕವಾಗಿ ತಡೆ ಹಿಡಿದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇದೀಗ ಹೊಸ ಕಾಯಿಲೆ ಶುರುವಾದಂತೆ ಕಾಣುತ್ತಿದೆ. ಇಷ್ಟು ದಿನ ರಷ್ಯಾ ಹಾಗೂ ಉಕ್ರೇನ್ ದೇಶಗಳ ನಡುವಿನ ಯುದ್ದವನ್ನು ತಡೆಯುವುದಾಗಿ ಹೇಳಿಕೊಂಡು ತಿರುಗಾಡಿದ್ದ ಟ್ರಂಪ್ ಈಗ ಭಾರತಕ್ಕೆ ಬೆಂಬಿಡದ ಬೇತಾಳದಂತೆ ಒಕ್ಕರಿಸಿಕೊಂಡಿದ್ದಾರೆ. ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಕಾಶ್ಮೀರದ ಕೆಲ ಉಗ್ರ ನೆಲೆಗಳು ಸೇರಿದಂತೆ ಪಾಕಿಸ್ತಾನದ ಭಯೋತ್ಪಾದಕ ಅಡಗುತಾಣಗಳ ಮೇಲೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿದೆ. ಈ ಬೃಹತ್ ದಾಳಿಯಲ್ಲಿ 100ಕ್ಕೂ ಅಧಿಕ ಉಗ್ರರನ್ನು ಬಲಿಪಡೆದುಕೊಂಡಿತ್ತು. ಈ ಮೂಲಕ ಭಯೋತ್ಪಾದನೆಯ ವಿರುದ್ಧದ ಭಾರತ ತೋರುತ್ತಿರುವ ಶೂನ್ಯ ಸಹಿಷ್ಣುತೆಯನ್ನು ಎತ್ತಿ ತೋರಿಸುತ್ತಿರುವ ಕೆಲಸ ಮಾಡಿತ್ತು.
ಭಾರತಕ್ಕೆ ಬೆದರಿಸಿದ ಅಮೆರಿಕದ ಅಧ್ಯಕ್ಷ..
ಆದರೆ ಜಾಗತಿಕವಾಗಿ ಭಯೋತ್ಪಾದನಾ ನಿರ್ಮೂಲನೆಗಾಗಿ ಹೋರಾಡುತ್ತಿರುವ ಭಾರತಕ್ಕೆ ಬೆಂಬಲ ನೀಡುವುದನ್ನು ಬಿಟ್ಟು, ಆ ರಣಹೇಡಿ ದೇಶ ಭಾರತದ ಮೇಲೆಯೇ ದಾಳಿ ಮಾಡಿ ಕೆಣಕಿತ್ತು. ಇದಕ್ಕೆ ಭಾರತವು ತಕ್ಕ ಪ್ರತಿದಾಳಿ ನಡೆಸಿ ಪಾಕಿಸ್ತಾನದ ಪ್ರಮುಖ ನಗರಗಳು ಹಾಗೂ ಅಲ್ಲಿನ ವಾಯು ನೆಲೆಗಳ ಮೇಲೆ ದಾಳಿ ಮಾಡುವ ಮೂಲಕ ಧ್ವಂಸ ಮಾಡಿತ್ತು. ಈ ಪರಿಸ್ಥಿತಿಯು ಉಭಯ ದೇಶಗಳ ನಡುವೆ ತೀವ್ರ ಉದ್ವಿಗ್ನತೆಯ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು. ಭಾರತದ ದಾಳಿಗೆ ಹೆದರಿ ಪುಕ್ಕಲು ಪಾಕಿಸ್ತಾನ ಅಮೆರಿಕದ ಕಾಲು ಹಿಡಿದು ಭಾರತದ ದಾಳಿಯಿಂದ ನಮ್ಮನ್ನು ಬಚಾವ್ ಮಾಡುವಂತೆ ಅಂಗಲಾಚಿಕೊಂಡಿತ್ತು.
ಇದಾದ ಬಳಿಕವೇ ಶುರುವಾಗಿದ್ದು ದೊಡ್ಡಣ್ಣ ಎನ್ನಿಸಿಕೊಂಡಿರುವ ಅಮೆರಿಕದ ಸಣ್ಣ ಬುದ್ಧಿ, ಮೇ 7ರಿಂದ ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ನಡೆದಿತ್ತು. ಈ ವೇಳೆ ಅಂದರೆ ಮೂರು ದಿನಗಳ ಕಾಲ ಪರಿಸ್ಥಿತಿಯ ಮೇಲೆ ಕಣ್ಣಿಟ್ಟಿದ್ದ ಅಮೆರಿಕ ಅಂತಿಮವಾಗಿ ಮೇ 10 ರಂದು ಭಾರತವನ್ನು ಬೆದರಿಸಿ ಇಬ್ಬರ ನಡುವೆ ಮಾತುಕತೆ ನಡೆಸಿ ನಾನು ಆಗಬಹುದಾದ ದೊಡ್ಡ ಯುದ್ದವನ್ನು ತಪ್ಪಿಸಿದ್ದೇನೆ ಎಂದು ಬಡಾಯಿ ಕೊಚ್ಚಿಕೊಂಡಿದ್ದರು. ಅಲ್ಲದೆ ಇನ್ನೂ ಭಾರತ ಹಾಗೂ ಪಾಕಿಸ್ತಾನ ದೇಶಗಳು ಅಧಿಕೃತವಾಗಿ ಸಂಘರ್ಷದ ಬಗ್ಗೆ ವಿರಾಮವನ್ನು ಘೋಷಿಸುವ ಮೊದಲೇ ತರಾತುರಿಯಲ್ಲಿ ಟ್ರಂಪ್ ಉಭಯ ದೇಶಗಳ ಕದನ ವಿರಾಮಕ್ಕೆ ತಾವೇ ಶರಾ ಬರೆದು ಟ್ವೀಟ್ ಮಾಡೇ ಬಿಟ್ಟಿದ್ದರು.
ಕ್ರೆಡಿಟ್ಗಾಗಿ ಹಪಾಹಪಿಸುತ್ತಿರುವ ಟ್ರಂಪ್..
ಇನ್ನೂ ಅಸಲಿಗೆ ಭಾರತದ ವಿಚಾರದಲ್ಲಿ ಪ್ರಚಾರಪ್ರಿಯ ಡೊನಾಲ್ಡ್ ಟ್ರಂಪ್ ಭಾರತದ ವಿಚಾರದಲ್ಲಿ ಮೂಗು ತೋರಿಸುವ ಕೆಲಸ ಮಾಡಿದ್ದು, ಕದನ ವಿರಾಮದ ಕ್ರೆಡಿಟ್ ಪಡೆಯುವ ಹಪಾಹಪಿಯಂತೂ ಇದ್ದೆ ಇದೆ. ಅಷ್ಟೇ ಅಲ್ಲದೆ ಪ್ರಮುಖವಾಗಿ ಜಾಗತಿಕವಾಗಿ ಹೆಚ್ಚು ಜನರ ಗಮನ ಸೆಳೆಯುತ್ತಿರುವ ಭಾರತದ ಏಳ್ಗೆಯ ಬಗ್ಗೆಯೂ ಈ ಕುತಂತ್ರಿ ಅಧ್ಯಕ್ಷನಿಗೆ ಒಂಥರಾ ಹೊಟ್ಟೆ ಕಿಚ್ಚು ಕೂಡಾ ಇತ್ತು ಎನ್ನುವುದು ಸಹ ಅಷ್ಟೇ ಸತ್ಯವಾಗಿದೆ. ಯಾಕೆಂದರೆ ಈಗಾಗಲೇ ಉಕ್ರೇನ್ ದೇಶವನ್ನು ಹೆದರಿಸಿರುವ ಹಾಗೆಯೇ ಭಾರತವನ್ನು ಬೆದರಿಸಿರುವ ಈ ಸರ್ವಾಧಿಕಾರಿ ಟ್ರಂಪ್, ಕದನ ವಿರಾಮ ಘೋಷಣೆ ಮಾಡದಿದ್ದರೆ ವ್ಯಾಪಾರವನ್ನು ನಿಲ್ಲಿಸುತ್ತೇನೆ, ಇಲ್ಲದಿದ್ದರೆ ನಾವು ಯಾವುದೇ ವ್ಯಾಪಾರ ವಹಿವಾಟನ್ನು ಮಾಡುವುದಿಲ್ಲ ಎಂದು ಬ್ಲ್ಯಾಕ್ಮೇಲ್ ಮಾಡುವ ಮೂಲಕ ಪಾಕಿಸ್ತಾನಕ್ಕೆ ಜೀವದಾನ ನೀಡುವ ಕೆಲಸ ಮಾಡಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
ಟ್ರಂಪ್ಗೆ ನಿಜವಾದ ಸ್ಥಾನ ತೋರಿಸಿದ್ದ ಪಾಕಿಸ್ತಾನ..
ಆದರೆ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಒಂದು ಇಮೇಜ್ ಇಟ್ಟುಕೊಂಡಿದ್ದ ಅಮೆರಿಕಕ್ಕೆ ಪಾಕಿಸ್ತಾನ ತೀವ್ರ ಮುಖಭಂಗವನ್ನೇ ಮಾಡಿದೆ. ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದ ಪಾಕಿಸ್ತಾನ ಒಪ್ಪಂದದ ಬಳಿಕವೂ ಭಾರತದ ದಾಳಿ ಮಾಡುವ ಮೂಲಕ ಟ್ರಂಪ್ಗೆ ಭಯೋತ್ಪಾದಕ ರಾಷ್ಟ್ರ ನೀಡುವ ಗೌರವವನ್ನು ಜಗಜ್ಜಾಹೀರು ಮಾಡಿದೆ. ಅಲ್ಲದೆ ಭಾರತ ಜಾಗತಿಕವಾಗಿ ಭಾರತ ತನ್ನ ಬೆಳವಣಿಗೆಯನ್ನು ಕಾಣುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳು ಭಾರತದತ್ತ ಮುಖಮಾಡುತ್ತಿವೆ. ಇದರಿಂದ ಭಾರತವು ಮತ್ತಷ್ಟು ವೇಗವಾಗಿ ಮುನ್ನುಗ್ಗುವ ಆತಂಕ ಟ್ರಂಪ್ಗೆ ಆವರಿಸಿದೆ. ಹೀಗಾಗಿ ಇದೇ ಪರಿಸ್ಥಿತಿಯನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವ ಅಮೆರಿಕದ ಅಧ್ಯಕ್ಷ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ 8, 500 ಕೋಟಿ ರೂಪಾಯಿಗಳ ಸಾಲವನ್ನು ಕೊಡಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಭಾರತದ ವಿರೋಧದ ನಡುವೆಯೇ ಸಾಲ ನೀಡಿರುವ ಟ್ರಂಪ್ಗೆ ಪಾಕಿಸ್ತಾನದ ಮೇಲಿರುವ ಹುಚ್ಚು ಪ್ರೀತಿ ಎಷ್ಟಿದೆ ಎನ್ನುವುದು ತಿಳಿಯುತ್ತದೆ.
ಈ ಮೂಲಕ ಅಮೆರಿಕದ ಅಧ್ಯಕ್ಷ ಮಾಡುತ್ತಿರುವ ಟ್ವೀಟ್ಗಳು ಭಾರತದ ವಿಚಾರದಲ್ಲಿ ಹೇಳುತ್ತಿರುವ ನಕಲಿ ಮಾತುಗಳು ಯಾವುತ್ತೂ ಕೆಲಸಕ್ಕೆ ಬರುವುದಿಲ್ಲ. ಬೆನ್ನ ಹಿಂದೆಯೇ ಚೂರಿ ಹಾಕಲು ಕಾಯುತ್ತಿರುವ ಟ್ರಂಪ್ ನಿಜವಾಗಿಯೂ ಪಾಕಿಸ್ತಾನದ ಜೊತೆ ಒಳ ಒಪ್ಪಂದ ಮಾಡಿಕೊಂಡು ಭಾರತದ ವಿಚಾರದಲ್ಲಿ ನವರಂಗಿ ಆಟ ನಡೆಸುತ್ತಿರುವುದು ಗೊತ್ತಾಗುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಗೆಳೆಯ ಗೆಳೆಯ ಎನ್ನುತ್ತಲೇ ದಿಕ್ಕು ತಪ್ಪಿಸುವ ಕೆಲಸವನ್ನು ಈ ವಂಚಕ ಟ್ರಂಪ್ ಮಾಡುತ್ತಿರುವುದು ಸುಳ್ಳಲ್ಲ.
ಟ್ರಂಪ್ ಡಬಲ್ ಗೇಮ್..
ಡಬಲ್ ಗೇಮ್ ಆಡುತ್ತಿರುವ ಟ್ರಂಪ್, ಆಕಡೆ ಪಾಕಿಸ್ತಾನಕ್ಕೂ ಒಳ್ಳೆಯವನಾಗಿರಬೇಕು, ಈಕಡೆ ಭಾರತಕ್ಕೂ ಚೆನ್ನಾಗಿರಬೇಕು ಎಂಬ ಲೆಕ್ಕಾಚಾರದಲ್ಲಿ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆಗೆ ಸಿದ್ಧ ಎಂದು ಹೊಸ ವರಸೆ ಶುರು ಮಾಡಿದ್ದಾರೆ. ಈ ಪ್ರಚಾರ ಪ್ರಿಯ ಹುಚ್ಚ ಭಾರತದ ಪಾಲಿಗೆ ಕಂಟಕಪ್ರಾಯವಾಗಿ ಪರಿಣಮಿಸಿದ್ದಾರೆ. ಆದರೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಶಾಶ್ವತ ಕದನ ವಿರಾಮ ಘೊಷಣೆಯಾಗಿದೆ ಎಂದಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಪ್ರಧಾನಿ ಮೋದಿ ಸೈಲೆಂಟ್ ಆಗಿ ಟಾಂಗ್ ನೀಡಿದ್ದಾರೆ. ಇದು ಶಾಶ್ವತ ಕದನ ವಿರಾಮ ಅಲ್ಲ. ಬದಲಾಗಿ ಇದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿರುವ ಕಾರ್ಯಾಚರಣೆಯಾಗಿದೆ. ಯಾವಾಗ ಬೇಕಾದ್ರೂ ಪಾಕಿಸ್ತಾನದ ವಿರುದ್ಧ ನಾವು ದಾಳಿ ನಡೆಸಲು ಸಿದ್ಧವಾಗಿದ್ದೇವೆ ಎನ್ನುವ ಮೂಲಕ ಅಮೆರಿಕದ ಅಧ್ಯಕ್ಷನಿಗೆ ಮುಖಕ್ಕೆ ಹೊಡೆದಂತೆ ಮೋದಿ ಹೇಳಿದ್ದಾರೆ.
ಇನ್ನೂ ಪಾಕ್ ಆಕ್ರಮಿತ ಕಾಶ್ಮೀರ ಭಾರತದ್ದೆ ಆಗಿದೆ, ಇದು ನಮ್ಮ ದೇಶದ ಆಂತರಿಕ ವಿಚಾರ ಇದರಲ್ಲಿ ಮೂಗು ತೋರಿಸಲು ಈ ಟ್ರಂಪ್ ಯಾರು..? ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಯಾಕೆ …? ಅಷ್ಟಕ್ಕೂ ಆ ಟ್ರಂಪ್ ಮಾತುಕೇಳಿ ಕೇಂದ್ರ ಸರ್ಕಾರ ಭಾರತೀಯರ ಹಿತವನ್ನು ಬಲಿಕೊಟ್ಟಿದೆ ಎಂದು ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಅಲ್ಲದೆ ಯಾರ ಮಧ್ಯಸ್ಥಿಕೆಗೆ ಕೇಂದ್ರ ಅವಕಾಶ ಮಾಡಿಕೊಡ ಬಾರದು ಎಂದು ವಿರೋಧ ಪಕ್ಷಗಳ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಇನ್ನೂ ಇಷ್ಟೆಲ್ಲಾ ಆದ ಮೇಲಾದರೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಟ್ರಂಪ್ ಮಾತಿಗೆ ಹೆಚ್ಚಿನ ಮನ್ನಣೆ ನೀಡುವ ಅಗತ್ಯವಿಲ್ಲ, ಅವರ ಮಾತು ಕೇಳುತ್ತಾ ಹೋದರೆ ಹಂತ ಹಂತವಾಗಿ ಭಾರತದ ಹಿಡಿತವನ್ನು ಕಳೆದುಕೊಳ್ಳುವ ಎಚ್ಚರಿಕೆಯನ್ನು ವಿಪಕ್ಷಗಳು ಕೇಂದ್ರಕ್ಕೆ ನೀಡಿದ್ದಾರೆ.