ಬೆಂಗಳೂರು : ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿನ ಮಹತ್ವದ ಜವಾಬ್ದಾರಿಯಾಗಿರುವ ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಯಾರು ಆಯ್ಕೆಯಾಗಲಿದ್ದಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. ಹಾಲಿ ಡಿಜಿಪಿಯಾಗಿರುವ ಅಲೋಕ್ ಮೋಹನ್ ಅವರ ಅಧಿಕಾರಾವಧಿಯು ಇದೇ ಮೇ ತಿಂಗಳ 21ಕ್ಕೆ ಅಂತ್ಯವಾಗಲಿದ್ದು, ಅವರ ಸ್ಥಾನಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಯಾರನ್ನು ಪ್ರತಿಷ್ಠಾಪಿಸಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ.
ಹಿರಿತನದ ಆಧಾರದಲ್ಲಿಯೇ ನೇಮಕಾತಿ ಪ್ರಕ್ರಿಯೆ..
ಇನ್ನೂ ಪ್ರಮುಖವಾಗಿ ಈ ಮೊದಲಿನಿಂದಲೂ ರಾಜ್ಯ ಸರ್ಕಾರದಿಂದ ಸೇವಾ ಜೇಷ್ಠತೆಯ ಆಧಾರಲ್ಲಿಯೇ ಪೊಲೀಸ್ ಮಹಾನಿರ್ದೇಶಕರನ್ನು ನೇಮಕ ಮಾಡಿಕೊಂಡು ಬರಲಾಗುತ್ತಿದೆ. ಅಲ್ಲದೆ ಪ್ರತಿಷ್ಠಿತ ಹುದ್ದೆಯ ರೇಸ್ನಲ್ಲಿ ಒಟ್ಟು ಎಂಟು ಜನ ಅಧಿಕಾರಿಗಳು ಇದ್ದಾರೆ. ಆದರೆ ಅವರಲ್ಲಿ ಹಿರಿತನದ ಆಧಾರದಲ್ಲಿ ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಸಿಐಡಿ ಡಿಜಿಪಿ ಸಲೀಂ ಇವರ ಹೆಸರುಗಳು ಮುನ್ನೆಲೆಗೆ ಬಂದಿವೆ.
ಸೇವಾವಧಿ ವಿಸ್ತರಣೆಗೆ ಕೋರಿ ಪತ್ರ ಬರೆದಿರುವ ಅಧಿಕಾರಿ..!
ಅಲ್ಲದೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಅಲೋಕ್ ಮೋಹನ್ ಅವರು 2023ರಲ್ಲಿ ಇಲಾಖೆಯ ಸಾರಥಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆರಂಭದ ಮೂರು ತಿಂಗಳ ಕಾಲ ಪ್ರಭಾರಿ ಡಿಜಿಪಿಯಾಗಿದ್ದು, ಬಳಿಕ ಅವರನ್ನ ಪೂರ್ಣಪ್ರಮಾಣದ ಡಿಜಿಪಿಯಾಗಿ ಸರ್ಕಾರ ನೇಮಿಸಿತ್ತು. ರಾಜ್ಯದಲ್ಲಿ ಡಿಜಿ-ಐಜಿಪಿಯಾಗಿ ಕನಿಷ್ಠ ಕಾಲಾವಧಿ ಎರಡು ವರ್ಷ ಇರಬೇಕು ಎಂದು ಸುಪ್ರೀಂಕೋರ್ಟ್ ಆದೇಶವಿದೆ. ಈ ಆದೇಶದಂತೆ ಮೂರು ತಿಂಗಳ ಕಾಲ ಡಿಜಿಪಿಯಾಗಿ ವಿಸ್ತರಿಸಬೇಕೆಂದು ಕೋರಿ ಕೇಂದ್ರ ಗೃಹ ಇಲಾಖೆಗೆ ಅಲೋಕ್ ಮೋಹನ್ ಅವರು ಸಲ್ಲಿಸಿರುವ ಪ್ರಸ್ತಾವಕ್ಕೆ ಇನ್ನೂ ಉತ್ತರ ಬಂದಿಲ್ಲ, ಸಕಾರಾತ್ಮಕವಾಗಿಯೂ ಸ್ಫಂದಿಸಿಲ್ಲ. ಹೀಗಾಗಿ ಮೇ 21ಕ್ಕೆ ಸೇವಾವಧಿ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಹೊಸ ಡಿಜಿಪಿಯನ್ನ ನೇಮಿಸುವ ಅನಿವಾರ್ಯತೆ ಎದುರಾಗಿದೆ.
ಸಲೀಂ ಆಯ್ಕೆಯಾಗುವ ಸಾಧ್ಯತೆ..
ಅಲೋಕ್ ಮೋಹನ್ ಅವರಿಂದ ತೆರವಾಗುವ ಡಿಜಿಪಿಗೆ ಸ್ಥಾನಕ್ಕೆ ಪ್ರಮುಖವಾಗಿ 1993ನೇ ಬ್ಯಾಚ್ನ್ ಐಪಿಎಸ್ ಅಧಿಕಾರಿ ಡಾ. ಎಂ.ಎ. ಸಲೀಂ ಹಾಗೂ 1992ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಪ್ರಶಾಂತ್ ಕುಮಾರ್ ಠಾಕೂರ್ ಹೆಸರುಗಳು ಮುಂಚೂಣಿಯಲ್ಲಿವೆ. ಬೆಂಗಳೂರಿನ ಚಿಕ್ಕಬಾಣಾವರದ ಕರ್ನಾಟಕ ಕೇಡರ್ ಆಗಿರುವ ಸಲೀಂ ಅವರು ಉಡುಪಿ, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರು ನಗರ ಪೂರ್ವ ವಿಭಾಗದ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ, ಟ್ರಾಫಿಕ್ ಡಿಸಿಪಿ ಹಾಗೂ ನಗರ ಸಂಚಾರ ವಿಭಾಗದ ವಿಶೇಷ ಆಯುಕ್ತರಾಗಿದ್ದರು. ಸದ್ಯ ಸಿಐಡಿ ಡಿಜಿಯಾಗಿರುವ ಸಲೀಂ ಅವರು ಅಲ್ಪಸಂಖ್ಯಾತ ಸಮುದಾಯದ ಅಧಿಕಾರಿಯಾಗಿದ್ಧಾರೆ. ಸಂಚಾರ ಕ್ಷೇತ್ರದಲ್ಲಿಯೂ ಡಾಕ್ಟರೇಟ್ ಪದವಿ ಹೊಂದಿದ್ದು, ಇವರನ್ನ ಡಿಜಿಪಿ ಹುದ್ದೆಗೆ ಸರ್ಕಾರ ಪರಿಗಣಿಸುವ ಸಾಧ್ಯತೆಯಿದೆ.
ಹಿನ್ನಡೆ ಅನುಭವಿಸಿದವರು ಕೋರ್ಟ್ಗೆ ಹೋಗುವ ಆತಂಕ..
ಇನ್ನೂ ಅಗ್ನಿಶಾಮಕ ಇಲಾಖೆಯ ಡಿಜಿಪಿಯಾಗಿರುವ ಬಿಹಾರ ಮೂಲದ ಕರ್ನಾಟಕ ಕೇಡರ್ನ ಅಧಿಕಾರಿಯಾಗಿರುವ ಪ್ರಶಾಂತ್ ಕುಮಾರ್ ಠಾಕೂರ್ ಸೇವಾ ಜೇಷ್ಠತೆ ಹೊಂದಿದ್ದಾರೆ. ಸಲೀಂ ಅವರಿಗಿಂತ ಒಂದು ವರ್ಷ ಸೇವಾ ಹಿರಿತನ ಪಡೆದಿದ್ದಾರೆ. ಸೀನಿಯಾರಿಟಿ ಮೇರೆಗೆ ಮುಂಬಡ್ತಿ ನೀಡುವ ಪದ್ಧತಿಯನ್ನು ಸರ್ಕಾರ ನಡೆಸಿಕೊಂಡು ಬರುತ್ತಿದೆ. ಒಂದು ವೇಳೆ ಇವರನ್ನು ಬದಿಗೊತ್ತಿ ಡಾ. ಸಲೀಂ ಅವರಿಗೆ ನೀಡಿದರೆ ಮುಂಬಡ್ತಿ ನೀಡದಿರುವುದನ್ನು ಪ್ರಶ್ನಿಸಿ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಸಿಎಟಿಗೆ ಹೋಗುವ ಆತಂಕ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಡಿಜಿಪಿ ಹುದ್ದೆಯ ಆಯ್ಕೆಯಲ್ಲಿ ಎಚ್ಚರಿಕೆಯ ನಡೆಯನ್ನು ಅನುಸರಿಸಲು ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮುಂದಾಗಿದ್ದಾರೆ.