Thursday, November 13, 2025

Latest Posts

ವಂದೇ ಮಾತರಂ 150 ವರ್ಷದ ಇತಿಹಾಸ ನಿಮ್ಗೆ ಗೊತ್ತಾ..?

- Advertisement -

ಇಂದಿಗೆ ವಂದೇ ಮಾತರಂ ಗೀತೆ 150 ವರ್ಷಗಳನ್ನು ಪೂರೈಸಿದೆ. ಇದು ಅಸಂಖ್ಯಾತ ತಲೆಮಾರುಗಳ ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಷ್ಟ್ರ ನಿರ್ಮಾಣಕಾರರಿಗೆ ಸ್ಪೂರ್ತಿ ನೀಡಿದ ಸಂಯೋಜನೆ ಎಂದೇ ಹೇಳಬಹುದು. ವಂದೇ ಮಾತರಂ ಅನ್ನು ಬಂಕಿಮ್ ಚಂದ್ರ ಚಟರ್ಜಿ ರಚಿಸಿದ್ದಾರೆ. ಇದು ಮೊದಲು ನವೆಂಬರ್ 7, 1875ರಂದು ಸಾಹಿತ್ಯ ನಿಯತಕಾಲಿಕೆ ಬಂಗದರ್ಶನ್‌ನಲ್ಲಿ ಪ್ರಕಟವಾಯಿತು. ನಂತರ ಬಂಕಿಮ್ ಚಂದ್ರ ಚಟರ್ಜಿ ಇದನ್ನು 1882ರಲ್ಲಿ ಪ್ರಕಟವಾದ ತಮ್ಮ ಅಮರ ಕಾದಂಬರಿ ಆನಂದಮಠದಲ್ಲಿ ಸೇರಿಸಿದರು.

ಹಲವು ವರದಿಗಳ ಪ್ರಕಾರ, ಬ್ರಿಟಿಷ್ ಆಡಳಿತಗಾರರು ಪ್ರತಿ ಸಮಾರಂಭದಲ್ಲಿ ಇಂಗ್ಲೆಂಡ್ ರಾಣಿಗೆ ಗೌರವ ಸಲ್ಲಿಸುವ ‘ಸೇವ್​ ದಿ ಕ್ವೀನ್’ ಎಂಬ ಹಾಡು ಹಾಡುವುದನ್ನು ಕಡ್ಡಾಯಗೊಳಿಸಿದ್ದರು. ಇದು ಬಂಕಿಮ್ ಚಂದ್ರ ಸೇರಿದಂತೆ ಅನೇಕ ದೇಶವಾಸಿಗಳನ್ನು ಕೆರಳಿಸಿತು. ಇದಕ್ಕೆ ಪ್ರತಿಯಾಗಿ, ಅವರು 1874ರಲ್ಲಿ ವಂದೇ ಮಾತರಂ ಎಂಬ ಹಾಡನ್ನು ರಚಿಸಿದರು. ಈ ಹಾಡಿನ ವಿಷಯವೆಂದರೆ ಭಾರತದ ಭೂಮಿಯನ್ನು ತಾಯಿ ಎಂದು ಸಂಬೋಧಿಸುವುದು.

ಐತಿಹಾಸಿಕ ಮತ್ತು ಸಾಮಾಜಿಕ ರಚನೆಗಳಿಂದ ಹೆಣೆಯಲಾದ ಈ ಕಾದಂಬರಿಯು, ದೇಶದಲ್ಲಿ ರಾಷ್ಟ್ರೀಯತೆಯ ಚೈತನ್ಯವನ್ನು ಜಾಗೃತಗೊಳಿಸಲು ಗಮನಾರ್ಹವಾಗಿ ಕೊಡುಗೆ ನೀಡಿತು. 1896ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ, ಮೊದಲ ಬಾರಿಗೆ ಈ ಹಾಡನ್ನು ಹಾಡಲಾಯಿತು. ದೇಶಭಕ್ತಿಯ ಸಂಕೇತವಾದ ಈ ಹಾಡು ಬ್ರಿಟಿಷ್ ಆಳ್ವಿಕೆಯ ವಿರುದ್ಧ, ಭಾರತೀಯ ಕ್ರಾಂತಿಕಾರಿಗಳ ನೆಚ್ಚಿನ ಹಾಡು ಮತ್ತು ಮುಖ್ಯ ಘೋಷಣೆಯಾಯಿತು. ದೇಶಾದ್ಯಂತ, ಕ್ರಾಂತಿಕಾರಿ ಮಕ್ಕಳು, ಯುವಕರು, ವಯಸ್ಕರು ಮಾತ್ರವಲ್ಲದೆ, ಭಾರತೀಯ ಮಹಿಳೆಯರು ಸಹ ಸ್ವಾತಂತ್ರ್ಯ ಹೋರಾಟದ ಅದೇ ಘೋಷಣೆಯನ್ನು ಪ್ರತಿಧ್ವನಿಸಿದರು.

ಜನವರಿ 24, 1950ರಂದು, ಸ್ವತಂತ್ರ ಭಾರತದಲ್ಲಿ, ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್, ವಂದೇ ಮಾತರಂಗೆ ರಾಷ್ಟ್ರಗೀತೆ ಸ್ಥಾನಮಾನವನ್ನು ಕಲ್ಪಿಸಿದರು. ಬ್ರಿಟಿಷ್ ಆಳ್ವಿಕೆಯ ವಿರುದ್ಧ ಭಾರತೀಯ ಏಕತೆಯ ಸಂಕೇತವಾಗಿ ವಂದೇ ಮಾತರಂ ಗೀತೆ ರೂಪುಗೊಂಡಿತು. ಆದರೆ, ಶಾಲೆಗಳಲ್ಲಿ ಹಾಡುವುದನ್ನು ನಿಷೇಧಿಸಲಾಯಿತು ಮತ್ತು ವಿದ್ಯಾರ್ಥಿಗಳನ್ನು ಶಿಕ್ಷೆಗೆ ಒಳಪಡಿಸಲಾಗಿತ್ತು. ಇದು ಸ್ವದೇಶಿ ಚಳವಳಿಯ ಮೂಲಕ ದೇಶಾದ್ಯಂತ ಹರಡಿತು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಈ ಹಾಡು ಕ್ರಾಂತಿಕಾರಿಗಳ ಶಕ್ತಿ ಮತ್ತು ಉತ್ಸಾಹದ ಸಂಕೇತವಾಗಿ ಮಾರ್ಪಟ್ಟಿದ್ದರಿಂದ, ಬ್ರಿಟಿಷರು ನಿದ್ರೆ ಕಳೆದುಕೊಳ್ಳುವಂತೆ ಮಾಡಿತ್ತು.

ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು, ಜನವರಿ 24, 1950ರಂದು ಸಂವಿಧಾನ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ರಾಷ್ಟ್ರಗೀತೆ ಜನ ಗಣ ಮನದಂತೆಯೇ ವಂದೇ ಮಾತರಂ ಹಾಡಿಗೂ, ಸ್ಥಾನಮಾನ ಮತ್ತು ಗೌರವವನ್ನು ನೀಡಬೇಕು ಎಂದು ಹೇಳಿದರು. ಇಂದಿಗೂ, ವಂದೇ ಮಾತರಂ ನಮ್ಮ ದೇಶದ ಬಗ್ಗೆ ಹೆಮ್ಮೆ, ಪ್ರೀತಿ ಮತ್ತು ಭಕ್ತಿಯ ಜ್ಞಾಪಕವಾಗಿಯೇ ಉಳಿದಿದೆ.

- Advertisement -

Latest Posts

Don't Miss