Tumakuru News: ತಿಪಟೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಸಂದರ್ಭ ಒದಗಿ ಬಂದರೆ, ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ದಲಿತರ ಋಣ ತೀರಿಸಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ದಲಿತರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಂಚಾಘಟ್ಟ ಸುರೇಶ್ ಛಲವಾದಿ ಮುಖಂಡರು ಎಚ್ಚರಿಸಿದರು.
ತಿಪಟೂರು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ದಲಿತರು, ವಿಶೇಷವಾಗಿ ಬಲಗೈ ಸಂಬಂಧಿತ ಛಲವಾದಿ ಸಮುದಾಯಗಳು ಸಾಂಪ್ರದಾಯಿಕ ಮತಗಳಾಗಿವೆ. ಆರಂಭದಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಆಸ್ತಿಯಾಗಿ, ಪಕ್ಷದ ಬೆನ್ನೆಲುಬಾಗಿ ನಿಂತಿವೆ. ಅದರಲ್ಲಿಯೂ ಬಲಗೈ ಸಂಬಂಧಿತ ಛಲವಾದಿ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರ ಮತ್ತು ರಾಜ್ಯಕ್ಕೆ ನಾಯಕರನ್ನು ಕೊಡುಗೆಯಾಗಿ ನೀಡಿದೆ.
ಕಳೆದ 50 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಹಗಲಿರುಳು ದುಡಿಯುತ್ತಿರುವ ರಾಜಕೀಯ ಭೀಷ್ಮ ಮಲ್ಲಿಕಾರ್ಜುನ ಖರ್ಗೆ, ಗೃಹಮಂತ್ರಿ ಡಾ. ಜಿ ಪರಮೇಶ್ವರ, ಡಾ. ಎಚ್. ಸಿ ಮಹದೇವಪ್ಪ, ಕೆ. ಎಚ್. ಮುನಿಯಪ್ಪ ಹಾಗೂ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಸೇರಿದಂತೆ ಇವರೆಲ್ಲರೂ ಮುಖ್ಯಮಂತ್ರಿ ಸ್ಥಾನವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಇವರಲ್ಲಿ ಒಬ್ಬರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಿ ದಲಿತರ ಋಣ ತೀರಿಸಬೇಕು ಎಂದು ಒತ್ತಾಯಿಸಿದರು.
ದಲಿತರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಮೀನಮೇಷ ಎಣಿಸಿದರೆ, ಮುಂದಿನ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದರು.
ಶಿವಲಿಂಗಮೂರ್ತಿ ನಗರ ಅಧ್ಯಕ್ಷರು ಜೈ ಬೀಮ್, ಶಿವಕುಮಾರ್ ತಾಲ್ಲೂಕು ಅಧ್ಯಕ್ಷರು, ಪ್ರಭುಸ್ವಾಮಿ ಗೌರವ ತಾಲ್ಲೂಕ ಅದ್ಯಕ್ಷರು, ಮಧು ಕಂಚಾಘಟ್ಟ, ನರಸಿಂಹಮೂರ್ತಿ.ಎನ್.ಎಮ್ ದಲಿತ ಮುಖಂಡರು, ಸಿದ್ದೇಶ್ ಕರಡಾಳು,ರಘು.ಕೆ, ಅಂಜನಮೂರ್ತಿ, ಟಿ.ಎಮ್.ಸುರೇಶ್ ಮುಖಂಡರು,ನರಸಿಂಹಮೂರ್ತಿ ಈಚನೂರು, ಅರುಣ್ಕುಮಾರ್ ಕಂಚಾಘ್ಟಟ್ಟ, ಚನ್ನರಾಜು ಮಾರನಗೆರೆ ಇನ್ನೂ ಮುಂತಾದರೂ ಪತ್ರಿಕಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

