ಆಪರೇಷನ್ ಸಿಂಧೂರ್ ವಿಶೇಷ :
ನವೆದಹಲಿ : ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಭಾರತದಲ್ಲಿ ನಡೆದ ಉಗ್ರರ ದಾಳಿಯು ಪಾಕಿಸ್ತಾನ ಪ್ರಾಯೋಜಿತವಾಗಿತ್ತು ಎಂಬುದನ್ನು ಬಹಿರಂಗಪಡಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಹೇಳಿದ್ದಾರೆ.
ನವದೆಹಲಿಯಲ್ಲಿಂದು ಗಡಿ ಭದ್ರತಾ ಪಡೆ ಬಿಎಸ್ಎಫ್ನ 22 ನೇ ಪ್ರತಿಷ್ಠಾಪನಾ ಸಮಾರಂಭದ ಸಂದರ್ಭದಲ್ಲಿ ಆಯೋಜಿಸಿದ್ದ ರುಸ್ತಮ್ಜಿ ಸ್ಮಾರಕ ಉಪನ್ಯಾಸವನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಡಿ ಕಾವಲು ಪಡೆ ಆಪರೇಷನ್ ಸಿಂಧೂರ್ ಸಮಯದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದು, ಗಡಿಯಲ್ಲಿನ ಪಾಕಿಸ್ತಾನದ ದುಷ್ಕೃತ್ಯಗಳನ್ನು ಪರಿಣಾಮಕಾರಿಯಾಗಿ ವಿಫಲಗೊಳಿಸಿದೆ. ಈ ಮೂಲಕ ಆಪರೇಷನ್ ಸಿಂಧೂರ್ ಭಾರತದಲ್ಲಿ ನಡೆದ ಉಗ್ರರ ದಾಳಿ ಸಂಪೂರ್ಣವಾಗಿ ಪಾಕಿಸ್ತಾನ ಪ್ರಾಯೋಜಿತ ಎಂಬುದನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.
ನಮ್ಮ ಸೇನಾಪಡೆಗಳು ಪಾಕಿಸ್ತಾನದ ದಾಳಿ ವಿಫಲಗೊಳಿಸಿವೆ..
ನಾವು ಆಪರೇಷನ್ ಸಿಂಧೂರ್ ಪ್ರಾರಂಭಿಸಿ ಒಂಬತ್ತು ಭಯೋತ್ಪಾದಕರ ಅಡಗುತಾಣಗಳನ್ನು ನಾಶಪಡಿಸಿದ್ದೇವೆ. ಪಾಕಿಸ್ತಾನ ಸೇನಾ ನೆಲೆಗಳು, ನಾಗರಿಕರು ಅಥವಾ ವಾಯುನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡಿದ್ದೇವೆಯೇ ಹೊರತು, ನಾಗರಿಕರು, ಸೇನಾ ನೆಲೆಗಳನ್ನಲ್ಲ. ಆದರೆ, ಪಾಕಿಸ್ತಾನ ನಮ್ಮ ನಾಗರಿಕರ ಮೇಲೆ ದಾಳಿ ನಡೆಸಿತು. ಈ ಮೂಲಕ ಭಾರತದಲ್ಲಿ ನಡೆದ ಉಗ್ರರ ದಾಳಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಎಂಬುದನ್ನು ಸಾಬೀತುಪಡಿಸಿತು. ಆದರೆ ನಮ್ಮ ಸೇನಾಪಡೆಗಳು ಪಾಕಿಸ್ತಾನದ ದಾಳಿ ವಿಫಲಗೊಳ್ಳುವಂತೆ ಮಾಡಿವೆ ಎಂದು ಸೇನಾ ಪಡೆಗಳ ಪರಾಕ್ರಮವನ್ನು ಕೊಂಡಾಡಿದ್ದಾರೆ.
ಆಪರೇಷನ್ ಸಿಂಧೂರ್ನ ಯಶಸ್ಸಿಗೆ ನಾಯಕತ್ವ, ಗುಪ್ತಚರ ಮತ್ತು ಮಿಲಿಟರಿ ಸಾಮರ್ಥ್ಯದ ಒಗ್ಗೂಡಿಕೆಯೇ ಕಾರಣವಾಗಿದೆ. ಆಪರೇಷನ್ ಸಿಂಧೂರ್ ನಮ್ಮ ಪ್ರಧಾನ ಮಂತ್ರಿಯವರ ದೃಢ ರಾಜಕೀಯ ಇಚ್ಛಾಶಕ್ತಿ, ನಮ್ಮ ಗುಪ್ತಚರ ಸಂಸ್ಥೆಗಳ ನಿಖರವಾದ ಮಾಹಿತಿ ಮತ್ತು ಸೇನೆಯ ಗಮನಾರ್ಹ ಸಾಮರ್ಥ್ಯ ಹಾಗೂ ಶಕ್ತಿಯ ಫಲಿತಾಂಶವಾಗಿದೆ. ಈ ಮೂರು ಒಟ್ಟಿಗೆ ಸೇರಿದಾಗ, ನಮಗೆ ಆಪರೇಷನ್ ಸಿಂಧೂರ್ನಂತಹ ಒಂದು ಯಶಸ್ವಿ ಕಾರ್ಯ ಸಫಲವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ದಿಟ್ಟ ಹೆಜ್ಜೆಗೆ ಇಡೀ ವಿಶ್ವದ ಮೆಚ್ಚುಗೆ..!
ಪಾಕಿಸ್ತಾನದ ದಾಳಿಗೆ ಪ್ರತಿಯಾಗಿ ನಮ್ಮ ಸೇನಾಪಡೆ ಅವರ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ನಮ್ಮ ದಾಳಿಯ ಸಾಮರ್ಥ್ಯವನ್ನು ತೋರಿಸಿಕೊಟ್ಟಿದೆ. 2014 ರಲ್ಲಿ, ಬಿಜೆಪಿ ಸರ್ಕಾರ ರಚನೆಯಾದಾಗ ಉರಿಯಲ್ಲಿ ಸೈನಿಕರ ಮೇಲೆ ದಾಳಿ ಮಾಡಲಾಯಿತು. ಆಗ ನಾವು ಸರ್ಜಿಕಲ್ ಸ್ಟ್ರೈಕ್ ಮೂಲಕ ದಿಟ್ಟ ಉತ್ತರ ಕೊಟ್ಟಿದ್ದೇವೆ. ಬಳಿಕ ನಡೆದ ಪುಲ್ವಾಮಾ ದಾಳಿಗೆ ಉತ್ತರವಾಗಿ ವಾಯುದಾಳಿ ಮಾಡಿದ್ದೇವು. ಈಗ, ಪಹಲ್ಗಾಮ್ನಲ್ಲಿ ದಾಳಿ ನಡೆಸಿದ್ದು, ಧರ್ಮ ಕೇಳಿ ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಿದ್ದಾರೆ. ಇದಕ್ಕೆ ನಾವು ಆಪರೇಷನ್ ಸಿಂಧೂರ್ ಮೂಲಕ ಉತ್ತರ ನೀಡಿದ್ದೇವೆ. ನಮ್ಮ ಈ ದಿಟ್ಟ ಹೆಜ್ಜೆಗೆ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಇದಕ್ಕಾಗಿ ನಾನು ಸೇನೆಗೆ ವಂದಿಸುತ್ತೇನೆಂದು ಎಂದು ಶಾ ಅಭಿನಂದಿಸಿದ್ದಾರೆ.
ಪಾಕಿಸ್ತಾನ ಈಗ ಸಂಪೂರ್ಣವಾಗಿ ಬೆತ್ತಲಾಗಿದೆ..
ಆಪರೇಷನ್ ಸಿಂಧೂರ್ ಮತ್ತು ಆ ನಂತರದ ಘಟನೆಗಳಿಂದಾಗಿ, ಪಾಕಿಸ್ತಾನ ಈಗ ಸಂಪೂರ್ಣವಾಗಿ ಬೆತ್ತಲಾಗಿದೆ. ಭಾರತದಲ್ಲಿ ನಡೆದ ಭಯೋತ್ಪಾದನೆ ಪಾಕಿಸ್ತಾನ ಪ್ರಾಯೋಜಿತವಾಗಿದೆ. ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ಅದಕ್ಕೆ ಪ್ರತಿಕ್ರಿಯಿಸಿದ್ದೇವೆ. ನಾವು ಹೊಡೆದುರುಳಿಸಿದ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನಿ ಸೇನೆಯ ಹಿರಿಯ ಅಧಿಕಾರಿಗಳು ಹಾಜರಿದ್ದದ್ದು ಮಾತ್ರವಲ್ಲದೆ, ಅವರ ಶವಪೆಟ್ಟಿಗೆಯನ್ನು ಹೊತ್ತುಕೊಂಡು ಪ್ರಾರ್ಥನೆಯಲ್ಲಿ ಭಾಗವಹಿಸುವುದನ್ನು ಜಗತ್ತು ನೋಡಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಕೊಟ್ಟ ಜವಾಬ್ದಾರಿ ಸರಿಯಾಗಿ ನಿಭಾಯಿಸಿದ್ದೀರಿ..
ಪ್ರಪಂಚದಾದ್ಯಂತ, ಅನೇಕ ಸ್ಥಳಗಳಲ್ಲಿ ಭಯೋತ್ಪಾದಕ ದಾಳಿಗಳಿಗೆ ಪ್ರತಿಕ್ರಿಯೆ ನೀಡಿವೆ. ಆದರೆ ಭಾರತ ನೀಡಿರುವ ಉತ್ತರ ಅತ್ಯಂತ ಕೆಟ್ಟವಾಗಿದೆ. ಒಂದು ಗಡಿಯಲ್ಲಿ ಒಂದೇ ಪಡೆ ಭದ್ರತೆಯನ್ನು ಒದಗಿಸುತ್ತದೆ ಎಂದು ನಿರ್ಧರಿಸಿದಾಗ, ಬಿಎಸ್ಎಫ್ಗೆ ಎರಡು ಅತ್ಯಂತ ಕಷ್ಟಕರವಾದ ಗಡಿಗಳಾದ ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ಕಾಪಾಡುವ ಜವಾಬ್ದಾರಿಯನ್ನು ನೀಡಲಾಗಿತ್ತು. ಅದನ್ನು ನೀವು ಸರಿಯಾಗಿ ನಿಭಾಯಿಸಿದ್ದೀರಿ ಎಂದು ಬಿಎಸ್ಎಫ್ ಯೋಧರ ಕಾರ್ಯವನ್ನು ಅಮಿತ್ ಶಾ ಶ್ಲಾಘಿಸಿದ್ದಾರೆ.