ಚುನಾವಣಾ ಆಯೋಗ, ಬಿಜೆಪಿ ವಿರುದ್ಧ ವೋಟ್ ಚೋರಿ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿ ಅವರು ಬಿಗ್ ಸ್ಟೇಟ್ಮೆಂಟ್ ಮಾಡಿದ್ದಾರೆ. ಮತಗಳ್ಳತನ ಆರೋಪಕ್ಕೆ ದೆಹಲಿಯಲ್ಲಿ ಹೈಡ್ರೋಜನ್ ಬಾಂಬ್ ಸುದ್ದಿಗೋಷ್ಠಿ ನಡೆಸಿ, ಇಡೀ ದೇಶದ ಗಮನ ಸೆಳೆದರು.
ಕರ್ನಾಟಕದ ಆಳಂದದಲ್ಲಿ ಒಟ್ಟು 6,018 ಮತಗಳನ್ನು ಕಳ್ಳತನ ಮಾಡಲಾಗಿದೆ. ಮುಖ್ಯ ಚುನಾವಣಾ ಆಯುಕ್ತರು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಿರುವ ಶಕ್ತಿಗಳ ಪರವಾಗಿ ಕೆಲಸ ಮಾಡುತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.
ಇದೇ ವೇಳೆ ಮತಪಟ್ಟಿಯಿಂದ ಕೈಬಿಟ್ಟ ಮತದಾರರನ್ನು ವೇದಿಕೆಗೆ ಕರೆಸಿ ರಾಹುಲ್ ಗಾಂಧಿ ಮಾತನಾಡಿಸಿದ್ದಾರೆ. ಇದಕ್ಕಿಂತಲೂ ಮುಖ್ಯವಾಗಿ ತಮ್ಮ ಅಭಿಯಾನಕ್ಕೆ ಚುನಾವಣಾ ಆಯೋಗದ ಕೆಲವರಿಂದ ನೆರವು ದೊರೆಯುತ್ತಿದೆ. ಚುನಾವಣಾ ಆಯೋಗದ ಒಳಗಿನ ಕೆಲವರು ತಮಗೆ ಸಹಾಯ ಮಾಡುತ್ತಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ರಾಹುಲ್ ಗಾಂಧಿ, ಈ ವೇಳೆ “ನಮ್ಮ ಅಭಿಯಾನಕ್ಕೆ ಚುನಾವಣಾ ಆಯೋಗದ ಕೆಲವರು ಕೈಜೋಡಿಸಿದ್ದಾರೆ” ಎಂದು ಘೋಷಿಸಿದರು. ಲೋಕಸಭೆ ಪ್ರತಿಪಕ್ಷ ರಾಹುಲ್ ಅವರ ಈ ಹೇಳಿಕೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಮತಗಳ್ಳತನ ಆರೋಪಗಳ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ನನ್ನ ಕೆಲಸ ನಮ್ಮ ವ್ಯವಸ್ಥೆಯನ್ನು ಸರಿಪಡಿಸುವುದಲ್ಲ. ನನ್ನ ಕೆಲಸ ಏನಿದ್ದರೂ ವ್ಯವಸ್ಥೆಯನ್ನು ಬಳಸಿಕೊಂಡು ನಿಷ್ಠೆಯಿಂದ ಕಾರ್ಯನಿರ್ವಹಿಸುವುದು. ವ್ಯವಸ್ಥೆಯನ್ನು ಸರಿಪಡಿಸುವುದು ಸಾಂವಿಧಾನಿಕ ಸಂಸ್ಥೆಗಳ ಕೆಲಸವಾಗಿದ್ದು, ಅವು ಈ ಕಾರ್ಯವನ್ನು ಮಾಡುತ್ತಿಲ್ಲವಾದ್ದರಿಂದ ನಾನು ಅನಿವಾರ್ಯವಾಗಿ ಈ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗಿದೆ. ಆದರೆ ನಾನು ಈ ಕರ್ತವ್ಯವನ್ನೂ ನಿಷ್ಠೆಯಿಂದ ಮಾಡಿ ಮುಗಿಸುತ್ತೇನೆ ಎಂದು ರಾಹುಲ್ ಗಾಂಧಿ ಘೋಷಿಸಿದ್ದಾರೆ.