ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್, ಭವಿಷ್ಯದಲ್ಲಿ ಬಿಜೆಪಿ ಪಕ್ಷದೊಳಗೆ ವಿಲೀನಗೊಳ್ಳುತ್ತಾ? ಇಂತಹ ಎಲ್ಲಾ ಲಕ್ಷಣ ಕಾಣುತ್ತಿವೆ ಎಂದು ಸಚಿವ ಹೆಚ್.ಸಿ ಮಹದೇವಪ್ಪ ಹೇಳಿರುವ ಮಾತು ಹೊಸ ಚರ್ಚೆಗೆ ಕಾರಣವಾಗಿದೆ.
ಸುಳ್ಳಿನ ಪಕ್ಷವೆಂದೇ ಬಿಜೆಪಿಗರು ಹೆಸರುವಾಸಿ. ಇಂಥಾ ಪಕ್ಷದೊಳಗೆ ಜೆಡಿಎಸ್ ವಿಲೀನಗೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಇತಿಹಾಸದ ವಿವರಣೆಯಲ್ಲಿ, ಅತ್ಯಂತ ಅವಸರದಿಂದ ಪ್ರತಿಕ್ರಿಯೆ ನೀಡ್ತಿದ್ದಾರೆ. ಇದನ್ನ ನೋಡಿದರೆ, ನಿಜಕ್ಕೂ ಇವರ ಪ್ರಜ್ಞೆಗೆ ಏನಾಗಿದೆ ಎಂಬ ಗೊಂದಲ ಶುರುವಾಗಿದೆ ಅಂತಾ, ಮಹದೇವಪ್ಪ ವ್ಯಂಗ್ಯವಾಡಿದ್ದಾರೆ.
ಕಾವೇರಿ ನದಿಗೆ ಅಣೆಕಟ್ಟು ನಿರ್ಮಾಣ ಸಂಬಂಧ, ಟಿಪ್ಪು ಸುಲ್ತಾನ್ ಆಲೋಚನೆಯನ್ನ ಕೆಆರ್ಎಸ್ನಲ್ಲಿ ಹಾಕಲಾಗಿದೆ. ಆ ಫಲಕವನ್ನು ಹಾಕಿದ್ದು, ಅರಸರ ಕಾಲದಲ್ಲಿ. ಈ ಸಣ್ಣ ಜ್ಞಾನವೂ ಇಲ್ಲದವರಂತೆ, ಬಿಜೆಪಿಗರು ವರ್ತಿಸುತ್ತಿದ್ದಾರೆ.
ಜನಪರ ಕೆಲಸ ಮಾಡಿದ ಹಲವರು ರಾಜರಲ್ಲಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅಗ್ರಗಣ್ಯರು. ಜನಪರವಾಗಿದ್ದ ಟಿಪ್ಪು ಸುಲ್ತಾನ್ ವಿಚಾರದಲ್ಲಿ, ಒಡೆಯರ್ ಅವರು, ಗೌರವ ಭಾವನೆ ಹೊಂದಿದ್ದರು. ರಾಜಕೀಯ ಮಾಡಲು ವಿಷಯವನ್ನು ತಿರುಚಿ ಮಾತಾಡ್ತಿರುವ, ಬಿಜೆಪಿಗರಿಗೂ ಬಹಳ ವ್ಯತ್ಯಾಸ ಇದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಲೋಚನೆಗೂ, ಅಂಬೇಡ್ಕರ್ ಆಶಯಗಳನ್ನು ಗಾಳಿಗೆ ತೂರಿರುವ ಬಿಜೆಪಿಗರಿಗೂ, ಯಾವ ಕಾಲಕ್ಕೂ ಹೋಲಿಕೆ ಇಲ್ಲ. ಇಂಥಾ ಬಿಜೆಪಿ ಪಕ್ಷದ ಭಾಗವಾಗಿ ಇದ್ದು, ಒಡೆಯರ್ ಬಗ್ಗೆ ಮಾತನಾಡ್ತಾರೆ. ಮೊದಲು ಇತಿಹಾಸ ಓದುವುದನ್ನು ಕಲಿಯಲಿ ಅಂತಾ, ಪ್ರತಾಪ್ ಸಿಂಹರನ್ನೂ ಮಹದೇವಪ್ಪ ಕುಟುಕಿದ್ದಾರೆ.