ನಮ್ಮ ಭಾರತ ದೇಶದಲ್ಲಿ ಚಿತ್ರ ವಿಚಿತ್ರ ದೇವಸ್ಥಾನಗಳಿದೆ. ಇಲ್ಲಿ ದೇವರುಗಳಿಗಷ್ಟೇ ಅಲ್ಲ, ಮಹಾಭಾರತ, ರಾಮಾಯಣ ಕಾಲದ ವಿಲನ್ಗಳಿಗೂ ದೇವಸ್ಥಾನಗಳಿದೆ. ರಾವಣ, ಹಿಡಿಂಬೆ, ಶಕುನಿ ಇವರಿಗೆಲ್ಲ ದೇವಸ್ಥಾನವನ್ನ ಕಟ್ಟಲಾಗಿದೆ. ಅದೇ ರೀತಿ ಭಾರತದ ಹಲವು ದೇವಸ್ಥಾನಗಳಲ್ಲಿ ಪ್ರಸಾದವಾಗಿ ಅನ್ನ ಸಂತರ್ಪಣೆ, ಸಿಹಿ ಖಾದ್ಯ, ಖಾರಾ ಪದಾರ್ಥಗಳನ್ನು ಕೊಡಲಾಗುತ್ತದೆ. ಆದ್ರೆ ಕೇರಳದ ಒಂದು ದೇವಸ್ಥಾನದಲ್ಲಿ ಪ್ರಸಾದವಾಗಿ ಚಾಕೋಲೇಟನ್ನ ಕೊಡಲಾಗತ್ತೆ. ಹಾಗಾದ್ರೆ ಯಾವುದು ಆ ದೇವಸ್ಥಾನ ಅಂತಾ ತಿಳಿಯೋಣ ಬನ್ನಿ..
ಕೇರಳದ ಅಲಪ್ಪುಜಾ ಎಂಬ ಜಿಲ್ಲೆಯಲ್ಲಿ ಮಂಚ ಮುರುಗನ್ ದೇವಸ್ಥಾನವಿದೆ. ಇಲ್ಲಿ ಬಾಲ ಸುಬ್ರಹ್ಮಣ್ಯನನ್ನ ಪೂಜಿಸಲಾಗುತ್ತದೆ. ಇಲ್ಲಿ ಬಾಲ ಮುರುಗನ್ಗೆ ಮಂಚ್ ಚಾಕೋಲೇಟನ್ನ ನೈವೇದ್ಯಕ್ಕಿಡಲಾಗುತ್ತದೆ. ಆದ್ದರಿಂದಲೇ ಈ ಬಾಲ ಸುಬ್ರಹ್ಮಣ್ಯನಿಗೆ ಮಂಚ್ ಮುರುಗನ್ ಎಂಬ ಹೆಸರು ಬಂದಿದೆ. ನೈವೇದ್ಯದ ಬಳಿಕ ಆ ಚಾಕೋಲೇಟ್ಗಳನ್ನ ದೇವರ ದರ್ಶನಕ್ಕೆ ಬಂದ ಭಕ್ತಾದಿಗಳಿಗೆ ವಿಚರಿಸಲಾಗುತ್ತದೆ.
ಇನ್ನು ಇಲ್ಲಿ ಬರುವ ಕೆಲ ಭಕ್ತರು ಕೆಲ ಕೋರಿಕೆಗಳನ್ನು ಈಡೇರಲು ಮಮಂಚ್ ಹರಕೆ ಹೊರುತ್ತಾರೆ. ತಮ್ಮ ಹರಕೆ ಈಡೇರಿದ ಬಳಿಕ, ರಾಶಿ ರಾಶಿ ಮಂಚ್ ಚಾಕೋಲೇಟ್ ತಂದು ದೇವರಿಗೆ ನೈವೇದ್ಯ ಮಾಡಿ, ಹಂಚುತ್ತಾರೆ. ಇನ್ನು ಇಲ್ಲಿ ಯಾಕೆ ಮಂಚ್ ಚಾಕೋಲೇಟನ್ನ ದೇವರಿಗೆ ಅರ್ಪಿಸುತ್ತಾರೆ ಅನ್ನೋ ಬಗ್ಗೆ ಒಂದು ಚಿಕ್ಕ ಕಥೆ ಇದೆ.
ಒಮ್ಮೆ ಇದೇ ಊರಿನ ಪುಟ್ಟ ಮಗು ಜ್ವರದಿಂದ ಬಳಲುತ್ತಿತ್ತು. ಮತ್ತು ಅದು ನಿದ್ದೆಗಣ್ಣಿನಲ್ಲಿ ಬಾಲ ಮುರುಗನನ್ನು ಸ್ಮರಿಸುತ್ತಿತ್ತು. ಇದನ್ನು ಕಂಡ ಆ ಮಗುವಿನ ಪೋಷಕರು ಮರುದಿನ ಆ ಮಗುವನ್ನು ಕರೆದುಕೊಂಡು, ಈ ಬಾಲ ಮುರುಗನ್ ದೇವಸ್ಥಾನಕ್ಕೆ ಬಂದರು. ಅಲ್ಲಿ ತಮ್ಮ ಮಗು ಬೇಗ ಗುಣಮುಖವಾಗುವಂತೆ ಮಾಡು ಎಂದು ಬೇಡುತ್ತಾರೆ.
ಆದರೆ ಅದಕ್ಕೂ ಮುನ್ನ ಆ ಮಗುವಿಗೆ ಮಂಚ್ ಚಾಕೋಲೇಟ್ ಕೊಡಿಸಿರುತ್ತಾರೆ. ಆದ್ರೆ ಆ ಮಗು ಆ ಚಾಕೋಲೇಟನ್ನು ತಂದು, ಬಾಲ ಮುರುಗನ್ಗೆ ನೈವೇದ್ಯ ಮಾಡಬೇಕೆಂದು ಹಠ ಹಿಡಿಯುತ್ತದೆ. ಆಗ ಮಗುವಿಗಾಗಿ ಅಲ್ಲಿನ ಅರ್ಚಕರು ಚಾಕೋಲೇಟನ್ನ ನೈವೇದ್ಯ ಮಾಡುತ್ತಾರೆ. ನಂತರ ಮನೆಗೆ ಹೋಗಿ, ನಿದ್ದೆ ಮಾಡಿ ಎದ್ದ ಬಳಿಕ ಆ ಮಗು ಆರೋಗ್ಯವಾಗಿ ಆಟಾಡಲು ಶುರು ಮಾಡುತ್ತದೆ. ಅಂದಿನಿಂದ ಎಲ್ಲರಲ್ಲಿ ಈ ಬಗ್ಗೆ ನಂಬಿಕೆ ಮೂಡಿದೆ. ಆದ್ದರಿಂದ ತಮಗೆ ಯಾವುದೇ ಕಷ್ಟ ಬಂದರೆ, ಅವರು ಮುರುಗನ್ಗೆ ಮಂಚ್ ಚಾಕೋಲೇಟ್ ನೈವೇದ್ಯ ಮಾಡುತ್ತಾರೆ. ಕೆಲವರಂತೂ ಮಕ್ಕಳಿಗೆ ಆರೋಗ್ಯ ಸಮಸ್ಯೆ ಬಂದರೆ, ಅಥವಾ ತಮ್ಮ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಮಂಚ್ ಚಾಕೋಲೇಟ್ ಬಾಕ್ಸ್ನೊಂದಿಗೆ ತುಲಾ ಭಾರ ಮಾಡುತ್ತಾರೆ. ಒಟ್ಟಾರೆಯಾಗಿ ಹೇಳೋದಾದ್ರೆ ಇಲ್ಲಿ ಪುಟ್ಟ ಭಕ್ತರ ಸಂಖ್ಯೆ ಹೆಚ್ಚು ಅಂತಾನೇ ಹೇಳಬಹುದು.