ನವದೆಹಲಿ : ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿಯಿಂದ ಪಾಕಿಸ್ತಾನವನ್ನು ಹುಟ್ಟಡಗಿಸಲು ಸಿದ್ಧವಾಗಿರುವ ಭಾರತದ ನಡೆಗೆ ಉಗ್ರರ ರಾಷ್ಟ್ರ ಕಂಗಾಲಾಗಿ ಹೋಗಿದೆ. ಬುಧವಾರವಷ್ಟೇ ಪಾಕಿಸ್ತಾನಕ್ಕೆ ಬಿಗ್ ಶಾಕ್ ನೀಡಿದ್ದ ಕೇಂದ್ರ ಸರ್ಕಾರ ಪಾಕ್ ಜೊತೆಗಿನ ಎಲ್ಲ ಸಂಪರ್ಕಗಳನ್ನೂ ಕಡಿತಗೊಳಿಸುವ ದೊಡ್ಡ ತೀರ್ಮಾನ ಮಾಡಿದೆ.
ಅಲ್ಲದೆ ನಿರ್ದಯವಾಗಿ ಭಾರತೀಯರನ್ನು ಬಲಿಪಡೆದ ಉಗ್ರರ ವಿರುದ್ಧ ಪ್ರತೀಕಾರಕ್ಕಾಗಿ ಯಾವುದೇ ಕ್ಷಣದಲ್ಲಿಯೂ ಭಾರತ ದಾಳಿ ಮಾಡಬಹುದು ಎಂಬ ಭಯ ಆ ರಣ ಹೇಡಿಗಳಲ್ಲಿ ಹುಟ್ಟಿಕೊಂಡಿದೆ. ಹೀಗಾಗಿಯೇ ತನ್ನ ಮೇಲೆ ಭಾರತದ ಸಂಭಾವ್ಯ ದಾಳಿಯನ್ನು ಎದುರಿಸಲು ಅರಬ್ಬೀ ಸಮುದ್ರದಲ್ಲಿ ಕ್ಷಿಪಣಿ ಉಡಾವಣೆಯ ಪರೀಕ್ಷೆ ನಡೆಸಿದೆ.
ಭಾರತದ ದಾಳಿ ಎದುರಿಸೋಕೆ ಸಿದ್ಧತೆ..
ಈಗಾಗಲೇ ಭಾರತ ಪಡೆದಿರುವ ಕಠಿಣ ನಿರ್ಧಾರದಿಂದ ಬೆಚ್ಚಿಬಿದ್ದಿರುವ ಪಾಕಿಸ್ತಾನದ ಮೇಲೆ, ಏರ್ ಸ್ಟ್ರೈಕ್, ಸರ್ಜಿಕಲ್ ಸ್ಟ್ರೈಕ್ ನಂತಹ ದಾಳಿಗಳನ್ನು ನಡೆಸಿ ಯಾವಾಗ ಬೇಕಾದರೂ ಭಾರತ ಮರ್ಮಾಘಾತ ನೀಡಬಹುದು ಎಂಬ ಪುಕ ಪುಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ 480 ಕಿಲೋ ಮೀಟರ್ ಗುರಿ ಹಾಗೂ ಸಾಮರ್ಥ್ಯವನ್ನು ಹೊಂದಿರುವ ಕ್ಷಿಪಣಿಯನ್ನು ಪಾಕಿಗಳು ಪರೀಕ್ಷೆ ಮಾಡಿದ್ದಾರೆ. ಇದರಲ್ಲಿ ಯಶಸ್ವಿಯಾಗಿರುವ ಶತ್ರು ರಾಷ್ಟ್ರ ಬಾರತದ ದಾಳಿಯನ್ನು ಎದುರಿಸಲು ಸಿದ್ಧ ಎಂಬ ಮೊಂಡುತನ ಮುಂದುವರೆಸಿದೆ. ಆದರೆ ಈ ಬಾರಿ ನಿಮ್ಮನ್ನು ಬಿಡಲೇ ಬಾರದು ಹುಡುಕಿ, ಹುಡುಕಿ ಮಣ್ಣು ಮುಕ್ಕಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿರುವುದು ಪಾಕಿಸ್ತಾನಕ್ಕೆ ಇನ್ನಷ್ಟು ಢವ ಢವ ಶುರುವಾಗಿದೆ.
ಭಾರತದ ಮೇಲೆ ತೀವ್ರ ನಿಗಾ..
ಪಾಕಿಸ್ತಾನದ ಕರಾಚಿಯ ಸಮೀಪದಲ್ಲಿರುವ ಕರಾವಳಿಯ ತೀರ ಪ್ರದೇಶದ ವ್ಯಾಪ್ತಿಯಲ್ಲಿ ನಿರಂತರವಾಗಿ ಕ್ಷಿಪಣಿ ಉಡಾವಣೆಯ ಪರೀಕ್ಷೆ ನಡೆಸಿ ಎಂದು ಅಲ್ಲಿನ ಸೇನಾ ಮುಖ್ಯಸ್ಥ ತಿಳಿಸಿದ್ದಾರೆ. ಅಲ್ಲದೆ ಗುರುವಾರ ಹಾಗೂ ಶುಕ್ರವಾರದೊಳಗೆ ಈ ಪರೀಕ್ಷೆಯನ್ನು ನಡೆಸಿ ಸಿದ್ಧವಾಗಿರುವಂತೆ ತಿಳಿಸಲಾಗಿದೆ. ಭಾರತದ ಪ್ರತಿಯೊಂದು ಹೆಜ್ಜೆ, ನಿರ್ಧಾರಗಳ ಮೇಲೆ ತೀವ್ರ ನಿಗಾವಹಿಸಿರುವ ಪಾಕಿಸ್ತಾನದ ಭೂಸೇನೆ, ನೌಕಾ ಹಾಗೂ ವಾಯುಸೇನೆ ಎಲ್ಲವನ್ನೂ ಗಮನಿಸುತ್ತಿದೆ. ಒಂದು ವೇಳೆ ಭಾರತ ದಾಳಿ ನಡೆಸಿದರೆ ನಾವೇನು ಮಾಡಬೇಕು ಎನ್ನುವುದರ ಕುರಿತು ಅಲ್ಲಿನ ಉನ್ನತ ನಾಗರಿಕ ಸಂಸ್ಥೆ ಪ್ರಧಾನಿ ಶಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಭದ್ರತಾ ಸಭೆ ನಡೆಸಿದೆ ಎಂಬ ಮಾಹಿತಿಯನ್ನು ಪಾಕ್ನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ತಿಳಿಸಿದ್ದಾರೆ.
ಸಂತಾಪದ ನಾಟಕವಾಡಿದ ಪಾಪಿಗಳು..!
ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ನೀಡಿರುವ ಪ್ರತಿಕ್ರಿಯೆಯಲ್ಲಿ, ಅನಂತನಾಗ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಪ್ರವಾಸಿಗರು ಸಾವನ್ನಪ್ಪಿದ ಬಗ್ಗೆ ನಮಗೆ ಬೇಸರವಿದೆ, ಮೃತರ ಕುಟುಂಬಗಳಿಗೆ ನಮ ಸಂತಾಪ ಸೂಚಿಸುತ್ತೇವೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ ಎಂದು ಬರೆದಿದ್ದಾರೆ. ಆದರೆ ಇದು ಮೊಸಳೆ ಕಣ್ಣೀರು ಎನ್ನುವುದು ಸ್ಪಷ್ಟವಾಗಿ ಪ್ರತಿಯೊಬ್ಬರಿಗೂ ತಿಳಿದುಬರುವ ಸಂಗತಿಯಾಗಿದೆ. ರಕ್ತದಲ್ಲಿಯೇ ಭಯೋತ್ಪಾದಕತೆಯನ್ನು ಹೊಂದಿರುವ ಪಾಕಿಗಳಿಂದಲೇ ಭಾರತದಲ್ಲಿ ಅಶಾಂತಿ ನಿರ್ಮಾಣವಾಗುತ್ತಿದೆ. ಅದರಲ್ಲೂ ಉಗ್ರರ ದಾಳಿಯಂತಹ ಹಲವು ಹೇಯ ಕೃತ್ಯಗಳು ನಡೆಯುತ್ತಿವೆ. ಮಾಡುವುದೆಲ್ಲವನ್ನೂ ಮಾಡಿ ಈಗ ವಿಷಾದ ವ್ಯಕ್ತಪಡಿಸುತ್ತಿರುವ ಇವರಿಗೆ ಸರಿಯಾಗಿ ಬುದ್ಧಿ ಕಲಿಸುವ ಕೆಲಸವನ್ನು ಭಾರತೀಯ ಸೇನೆ ಮಾಡಲಿದೆ ಎನ್ನುವುದು ಕೋಟ್ಯಂತರ ಜನರ ಆಕ್ರೋಶವಾಗಿದೆ.