ತುಮಕೂರು ಜಿಲ್ಲೆಯಲ್ಲಿ ಶೇಕಡ 96ರಷ್ಟು ಜಾತಿ ಗಣತಿ ಮುಗಿದಿದೆ. ಶಾಲೆಗಳು ಶುರು ಆಗಿದ್ರಿಂದ ಸಮೀಕ್ಷೆಯಿಂದ ಶಿಕ್ಷಕರು ಹೊರಗೆ ಉಳಿದಿದ್ದಾರೆ. ಆದ್ರೀಗ ಬಾಕಿ ಉಳಿದ ಮನೆಗಳ ಸಮೀಕ್ಷೆ ಪೂರ್ಣಗೊಳಿಸುವ ಜವಾಬ್ದಾರಿ ಗ್ರಾಮ ಪಂಚಾಯತಿ ಹೆಗಲಿಗೆ ಬಿದ್ದಿದೆ. ಹೀಗಾಗಿ ವಾಟರ್ ಮ್ಯಾನ್ಗಳಿಗೂ ಸರ್ವೇ ಮಾಡುವ ಸ್ಥಿತಿ ಎದುರಾಗಿದೆ. ಈಗಾಗಲೇ ಸರ್ವೆ ತರಬೇತಿಯನ್ನೂ ನೀಡಲಾಗಿದೆ.
ಜಿಲ್ಲೆಯಲ್ಲಿ ಶೇಕಡ 4ರಷ್ಟು ಸರ್ವೆ ಕಾರ್ಯ ಬಾಕಿ ಉಳಿದಿದೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ, ಬಾಕಿ ಉಳಿದ ಮನೆಗಳನ್ನು ಪತ್ತೆ ಹಚ್ಚುವ ಕೆಲಸವನ್ನು, ಗ್ರಾಮ ಪಂಚಾಯತಿಗೆ ವಹಿಸಲಾಗಿದೆ. ಜೊತೆಗೆ ಆ ಮನೆಗಳ ಸಮೀಕ್ಷೆಯನ್ನು ಪಂಚಾಯತಿಯವರೇ ಮಾಡಬೇಕಿದೆ. ಪಿಡಿಒ, ಸೆಕ್ರೆಟರಿ, ಕಂಪ್ಯೂಟರ್ ಆಪರೇಟರ್, ವ್ಯಾಟರ್ ಮ್ಯಾನ್ಗಳಿಗೂ ಸರ್ವೆ ಮಾಡುವ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ ಎಲ್ಲಾ ಗ್ರಾಮ ಪಂಚಾಯತಿಗಳ ಪಿಡಿಒಗಳು ವಾಟರ್ ಮ್ಯಾನ್ ಸಿಬ್ಬಂದಿಗೆ, ಆ್ಯಪ್ನಲ್ಲಿ ಡೇಟಾ ಎಂಟ್ರಿ ತರಬೇತಿ ನೀಡಲಾಗಿದೆ.
ವಿದ್ಯಾವಂತರಾದ ಶಿಕ್ಷಕರಿಗೂ ಈ ಸರ್ವೆ ಆ್ಯಪ್ ಸರಿಯಾಗಿ ಅರ್ಥ ಆಗಿಲ್ಲ. ಸಮೀಕ್ಷೆ ವೇಳೆ ಹಲವು ಸಮಸ್ಯೆಗಳು ಎದುರಿಸಿದ್ರು. ಈ ನಡುವೆ ಕನಿಷ್ಠ ಎಸ್ಎಸ್ಎಲ್ಸಿಯನ್ನೂ ಪಾಸ್ ಆಗದ ವಾಟರ್ ಮ್ಯಾನ್ಗಳಿಗೆ ಸಮೀಕ್ಷೆ ಮಾಡಲು ಹೇಳಿರೋದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ತುಮಕೂರು ಜಿಲ್ಲೆಯಲ್ಲಿ ಸುಮಾರು 332 ಗ್ರಾಮ ಪಂಚಾಯತಿಗಳಿವೆ. 1 ಸಾವಿರಕ್ಕೂ ಹೆಚ್ಚು ವಾಟರ್ ಮ್ಯಾನ್ಗಳಿದ್ದಾರೆ. ಅವರೆಲ್ಲರಿಗೂ ಸರ್ವೆ ಜವಾಬ್ದಾರಿ ಕೊಡಲಾಗಿದ್ದು, ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

