Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿದ್ದು, ಅಧಿಕಾರ ಹಂಚಿಕೆ ವಿಚಾರ ಹೈಕಮಾಂಡ್ ತೀರ್ಮಾನಿಸುತ್ತೆ. ಯಾರು ಸಿಎಂ ಆಗಬೇಕು ಯಾರು ಸಿಎಂ ಆಗಬಾರದು ಅನ್ನೋ ವಿಚಾರ ಹೈಕಮಾಂಡ್ ಗೆ ಬಿಟ್ಟದ್ದು. ದಲಿತ ಸಿಎಂ ಆಗಬೇಕೋ, ದಲಿತ ಸಿಎಂ ಆಗಬಾರದು ಅನ್ನೋದಕ್ಕೆ ನಾನು ಉತ್ತರ ಕೊಡಲ್ಲ. ಸಿಎಲ್ಪಿ ಸಭೆಯಲ್ಲಿ ಯಾರ ಪರವಾಗಿ ಕೈ ಎತ್ತುತ್ತೇನೆ ಅಂತ ಅಲ್ಲಿ ಗೊತ್ತಾಗುತ್ತೆ. ನಂತರ ನಾನು ನಿಮಗೆ ಹೇಳ್ತೇನೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ಗೆ ಬಿಟ್ಟದ್ದು. ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ. ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ಪಕ್ಷದ ವಿಚಾರದಲ್ಲಿ ಜಾರಕಿಹೊಳಿಯವರು ಮಾತನಾಡಿದ್ದಾರೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಅಲ್ಲದೇ, ಅದು ಅವರ ವೈಯಕ್ತಿಕ ವಿಚಾರ. ಅವರ ಅಭಿಪ್ರಾಯದ ಬಗ್ಗೆ ಅವರನ್ನೇ ಪ್ರಶ್ನಿಸಿ. ಯಾವುದೋ ಒಂದು ಘಟನೆ ಇಟ್ಟುಕೊಂಡು ಕಾನೂನು ವ್ಯವಸ್ಥೆ ಹದಗೆಟ್ಟಿದೆ ಅನ್ನೋಕೆ ಆಗಲ್ಲ. ಬೀದರ್ ನಲ್ಲಿ ದರೋಡೆ ಪ್ರಕರಣ ನಡೆಯಬಾರದಿತ್ತು. ಅಪರಾಧ ಪ್ರಕರಣ ನಡೆದ ಕೂಡಲೇ ಕಾನೂನು ವ್ಯವಸ್ಥೆ ಹದಗೆಟ್ಟಿದೆ ಅನ್ನೋದು ಸರಿಯಲ್ಲ. ಎಲ್ಲ ಸರ್ಕಾರಗಳಲ್ಲಿಯೂ ಅಪರಾಧ ಕೃತ್ಯಗಳು ನಡೆಯುತ್ತೆ. ಅಮೆರಿಕ, ಲಂಡನ್ ಗಳಲ್ಲಿಯೂ ಅಪರಾಧ ಕೃತ್ಯಗಳು ನಡೆಯುತ್ತೆ.
ನಾಳೆ ರಣದೀಪ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷರು ಹುಬ್ಬಳ್ಳಿಗೆ ಬರ್ತಾರೆ. ಜನವರಿ 21ರಂದು ಬೆಳಗಾವಿಯಲ್ಲಿ ನಡೆಯಲಿರುವ ಗಾಂಧಿ ಭಾರತ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ಮಾಡುತ್ತಾರೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮಕ್ಕೆ ಬರ್ತಾ ಇದಾರೆ. ಆ ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈ ಭಾಗದ ಮುಖಂಡರ ಸಭೆ ಮಾಡುತ್ತಾರೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.