Dharwad News: ಧಾರವಾಡ: ಮಂಡ್ಯದ ಮೊಮ್ಮಗನಿಗೆ ಕಲಘಟಗಿಯಲ್ಲಿ ತೊಟ್ಟಿಲು ಸಿದ್ಧವಾಗಿದೆ. ಕೆಲ ತಿಂಗಳ ಹಿಂದಷ್ಟೇ ದಿವಂಗತ ಅಂಬರೀಷ್ ಅವರ ಪುತ್ರ ಅಭಿಷೇಕ್ಗೆ ಮಗ ಹುಟ್ಟಿದ್ದ.
ಇನ್ನು ಕೆಲ ದಿನಗಳಲ್ಲೇ ಮಗುವಿನ ನಾಮಕರಣ ಕೂಡ ನಡೆಯಲಿದೆ. ಹೀಗಾಗಿ ಧಾರವಾಡದ ಕಲಘಟಗಿಯಲ್ಲಿ ತೊಟ್ಟಿಲನ್ನು ಸಿದ್ಧಗೊಳಿಸಲಾಗಿದೆ. ಕಲಘಟಗಿಯ ಚಿತ್ರಕಾರ ಕುಟುಂಂಬ ಹಲವು ವರ್ಷಗಳಿಂದ ತೊಟ್ಟಿಲು ತಯಾರಿಸಿಕೊಂಡು ಬರುತ್ತಿದೆ. ಅದೇ ರೀತಿ ಅಂಬರೀಷ್ ಮೊಮ್ಮಗನಿಗಾಗಿ ಕಳೆದ ಎರಡು ತಿಂಗಳಿನಿಂದ ತೊಟ್ಟಿಲು ರೆಡಿ ಮಾಡಲಾಗುತ್ತಿದೆ.
ಇದೇ ತಿಂಗಳು 14ನೇ ತಾರೀಖಿನಂದು ನಾಮಕರಣ ಸಮಾರಂಭವಿದ್ದು, ಕಲಾವಿದ ಶ್ರೀಧರ್ ಸೌಕಾರ್ ಎಂಬುವವರು ತೊಟ್ಟಿಲು ಸಿದ್ಧ ಮಾಡಿದ್ದಾರೆ. ಈ ಹಿಂದೆ ಇದೇ ಚಿತ್ರಗಾರ್ ಮನೆಯಿಂದ ರಾಕಿಂಗ್ ಸ್ಟಾರ್ ಯಶ್ ದಂಪತಿಯ ಮೊದಲ ಮಗುವಾದ ಐರಾ ನಾಮಕರಣಕ್ಕೆ, ತೊಟ್ಟಿಲು ಹೋಗಿತ್ತು. ಅಂಬರೀಷ್, ಯಶ್ಗೆ ಮಗು ಹುಟ್ಟಿದಾಗಲೇ, ತೊಟ್ಟಿಲನ್ನು ಆರ್ಡರ್ ಕೊಟ್ಟಿದ್ದರು. ಆದರೆ ದುರಾದೃಷ್ಟವಶಾತ್, ಮಗುವಿನ ನಾಮಕರಣಕ್ಕೂ ಮುನ್ನವೇ ಅವರ ದೇಹಾಂತ್ಯವಾಯಿತು.
ಇದೀಗ ಅಂಬರೀಷ್ ಮೊಮ್ಮಗನಿಗಾಗಿ ಮತ್ತೊಮ್ಮೆ ಚಿತ್ರಗಾರ್ ಕುಟುಂಬದ ಶ್ರೀಧರ್ ತೊಟ್ಟಿಲು ರೆಡಿ ಮಾಡಿದ್ದಾರೆ. ಸುಮಾರು 4 ತಲೆ ಮಾರುಗಳಿಂದ ಈ ಕುಟುಂಬ ತೊಟ್ಟಿಲು ತಯಾರಿಕೆಯಲ್ಲಿ ತೊಡಗಿದೆ. ಡಾ.ರಾಜ್ಕುಮಾರ್ ಮನೆಗೂ ಇಲ್ಲಿಂದ ತೊಟ್ಟಿಲು ಹೋಗಿತ್ತು. ಇದೀಗ ನಾರಾಯಣ ಕಲಾಲ್ ಎನ್ನುವವರ ಮೂಲಕ ಇದೀಗ ಅಂಬರೀಷ್ ಮನೆಗೆ ಕಲಘಟಗಿ ತೊಟ್ಟಿಲು ಹೋಗುತ್ತಿದೆ. ಈ ತೊಟ್ಟಿಲಿನ ವಿಶೇಷತೆ ಅಂದ್ರೆ, ಇದರಲ್ಲಿ ಕೃಷ್ಣನ ಅವತಾರ, ದಶಾವತಾರದ ಚಿತ್ರಕಲೆ ಬಿಡಿಸಲಾಗಿದೆ.