ಬೆಂಗಳೂರು : ಸಮಾಜದ ಎಲ್ಲ ವರ್ಗಗಳ ನಡುವೆ ಏಕತೆ ಹಾಗೂ ಸಾಮರಸ್ಯ ಮೂಡಬೇಕಾದರೆ ಎಲ್ಲರೂ ಒಂದು ದೇವಸ್ಥಾನ, ಒಂದು ಬಾವಿ ಹಾಗೂ ಒಂದೇ ಸ್ಮಶಾನ ತತ್ವ ಪಾಲನೆ ಮಾಡಬೇಕೆಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ.
ಉತ್ತರ ಪ್ರದೇಶದ ಅಲಿಗಢದಲ್ಲಿ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿರುವ ಅವರು, ಶಾಂತಿಗಾಗಿ ತನ್ನ ಜಾಗತಿಕ ಜವಾಬ್ದಾರಿಯನ್ನು ಪೂರೈಸಲು ಭಾರತಕ್ಕೆ ನಿಜವಾದ ಸಾಮಾಜಿಕ ಏಕತೆಯನ್ನು ಸಾಧಿಸುವುದು ಅತ್ಯಂತ ಮುಖ್ಯವಾಗಿದೆ. ಅಲ್ಲದೆ ಪ್ರಮುಖವಾಗಿ ಕುಟುಂಬ ನಿರ್ವಹಣೆ, ಸಾಮಾಜಿಕ ಸೌಹಾರ್ದತೆ, ಸ್ವಯಂ ಅರಿವು ಹಾಗೂ ಪರಿಸರ ಸಂರಕ್ಷಣೆಯ ಮತ್ತು ನಾಗರಿಕ ಕರ್ತವ್ಯ ಪಾಲನೆ ಎನ್ನುವ ಐದು ಬದಲಾವಣೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಆರ್ಎಸ್ಎಸ್ ಆಂದೋಲನ ನಡೆಸಲಿದೆ..!
ಇನ್ನೂ ಈ ರೀತಿಯ ಒಳ್ಳೆಯ ಮೌಲ್ಯಗಳೇ ನಮ್ಮ ಭಾರತೀಯ ಸಮಾಜದ ಬಹುದೊಡ್ಡ ಆಸ್ತಿಗಳಾಗಿವೆ. ಅಲ್ಲದೆ ಸಂಸ್ಕಾರವೇ ನಮ್ಮ ಹಿಂದೂ ಸಮುದಾಯದ ಅಡಿಪಾಯವಾಗಿದೆ. ಈ ಹಿನ್ನೆಲೆಯಲ್ಲಿ ಪಾರಂಪರಿಕ , ಸಾಂಸ್ಕೃತಿಕ ಮೌಲ್ಯಗಳು ಮತ್ತು ನೈತಿಕ ತತ್ವಗಳೇ ಆಧಾರವಾಗಿರುವಂತಹ ಸಮಾಜದ ನಿರ್ಮಾಣಕ್ಕೆ ಹಿಂದೂಗಳು ದುಡಿಯಬೇಕು ಎಂದು ಅವರು ತಿಳಿಸಿದ್ದಾರೆ. ಇನ್ನೂ ಪ್ರಮುಖವಾಗಿ ಈ ರೀತಿಯ ಬದಲಾವಣೆಗೆ ಪೂರಕವಾಗಿರುವ ವಿಚಾರಗಳ ಸಾಮಾಜಿಕ ಆಂದೋಲನವನ್ನು ಆರ್ಎಸ್ಎಸ್ ಸಂಘಟನೆಯು ತನ್ನ ಶತಮಾನೋತ್ಸವದ ನಿಮಿತ್ತ ದೇಶದ ಎಲ್ಲೆಡೆ ಆರಂಭಿಸಲಿದೆ. ಅಲ್ಲದೆ ಇವುಗಳು ನಾಗರಿಕ ಸಮಾಜದಲ್ಲಿನ ಪ್ರತಿಯೊಬ್ಬರಿಗೂ ತಲುಪಬೇಕಿರುವುದು. ಹೀಗಾಗಿ ಯೋಜನೆ ಹಾಗೂ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ ಎಂದು ಭಾಗವತ್ ಹೇಳಿದ್ದಾರೆ.
ಸಮಾಜದ ಎಲ್ಲ ವರ್ಗಗಳನ್ನು ತಲುಪಿ..
ಅಲ್ಲದೆ ಸ್ವಯಂಸೇವಕರು ಸಮಾಜದ ಎಲ್ಲ ವರ್ಗಗಳನ್ನು ತಲುಪಬೇಕೆಂದು, ತಳಮಟ್ಟದಲ್ಲಿ ಸಾಮರಸ್ಯ ಮತ್ತು ಏಕತೆಯ ಸಂದೇಶವನ್ನು ಹರಡಲು ಅವರನ್ನು ತಮ್ಮ ಮನೆಗಳಿಗೆ ಆಹ್ವಾನಿಸಬೇಕೆಂದು. ಸಂಸ್ಕಾರದಿಂದ ಪಡೆದ ಬಲವಾದ ಕುಟುಂಬ ಮೌಲ್ಯಗಳ ಮೇಲೆ ನಿರ್ಮಿಸಲಾದ ಪರಿವಾರವು ಸಮಾಜದ ಮೂಲಭೂತ ಘಟಕವಾಗಿ ಉಳಿದಿದೆ. ರಾಷ್ಟ್ರೀಯತೆ ಮತ್ತು ಸಾಮಾಜಿಕ ಒಗ್ಗಟ್ಟಿನ ಅಡಿಪಾಯವನ್ನು ಬಲಪಡಿಸಲು ಹಬ್ಬಗಳ ಸಾಮೂಹಿಕ ಆಚರಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸಾಮಾಜಿಕ ಏಕೀಕರಣಕ್ಕೆ ಒತ್ತು ನೀಡಿದ ಭಾಗವತ್, ತೀಜ್ನಂತಹ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವಂತೆ ಮತ್ತು ತಮ್ಮ ಮನೆಗಳಿಗೆ ಎಲ್ಲ ಸಮುದಾಯಗಳ ಜನರನ್ನು ಆಹ್ವಾನಿಸುವ ಮೂಲಕ ಒಳಗೊಳ್ಳುವಿಕೆಯ ಹಬ್ಬವನ್ನು ಆಚರಿಸುವ ಮೂಲಕ ಸಾಮರಸ್ಯ ಬೆಳೆಸಿ ಎಂದಿದ್ದಾರೆ.