Political News: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಇಷ್ಟು ದಿನಗಳ ಕಾಲ ಕೊಂಚ ತಣ್ಣಗಾಗಿದ್ದ ಸಚಿವ ಸಂಪು ವಿಸ್ತರಣೆ, ಪುನಾರಚನೆಯ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಂತಾಗಿದ್ದು, ಇದಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತ ದುರಂತವೇ ಕಾರಣ ಎನ್ನಲಾಗುತ್ತಿದೆ. ಈ ದುರ್ಘಟನೆಯಲ್ಲಿ 11 ಆರ್ಸಿಬಿಯ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ 47ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಇನ್ನೂ ಈ ಘಟನೆಯಿಂದ ರಾಜ್ಯ ಸರ್ಕಾರದ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.
ಇನ್ನೂ ಪ್ರಮುಖವಾಗಿ ರಾಜ್ಯದಲ್ಲಿ ಈ ಕಾಲ್ತುಳಿತ ಪ್ರಕರಣ ತೀವ್ರ ಕೋಲಾಹಲ ಎಬ್ಬಿಸಿದ್ದು, ವಿಪಕ್ಷಗಳು ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿವೆ. ಈ ಹೊತ್ತಿನಲ್ಲೇ ಕಾಂಗ್ರೆಸ್ ಹೈಕಮಾಂಡ್ ಸಚಿವ ಸಂಪುಟ ಪುನಾರಚನೆಗೆ ಸೂಚನೆ ನೀಡುವ ಲೆಕ್ಕಾಚಾರದಲ್ಲಿದೆ. ಈ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ರಾಜ್ಯ ನಾಯಕರೊಂದಿಗೆ ಖುದ್ದು ವರಿಷ್ಠ ರಾಹುಲ್ ಗಾಂಧಿ ಹಾಗೂ ಎಐಸಿಸಿ ನಾಯಕರು ಚರ್ಚೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ಕೈ ನಾಯಕರ ಭೇಟಿಯಾದ ಸಿದ್ದರಾಮಯ್ಯ, ಡಿಕೆಶಿ..
ಅಲ್ಲದೆ ಕೈ ಹೈಕಮಾಂಡ್ ಬುಲಾವ್ ಮೇರೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಈಗಾಗಲೇ ದೆಹಲಿಯ ಕಾಂಗ್ರೆಸ್ ಕಚೇರಿಗೆ ತೆರಳಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವರಿಷ್ಠರು ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಇಂದು ಬೆಳಗ್ಗೆ ದೆಹಲಿಯ ಕರ್ನಾಟಕ ಭವನಕ್ಕೆ ತೆರಳಿದ್ದ ಸಿಎಂ, ಡಿಸಿಎಂ ರಾಹುಲ್ ಗಾಂಧಿ ಭೇಟಿಗೂ ಮುನ್ನ ಪ್ರತ್ಯೇಕ ಚರ್ಚೆ ನಡೆಸಿದ್ದಾರೆ. ಇದಕ್ಕೆ ಸಚಿವರಾದ ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್, ಶಾಸಕ ಅಶೋಕ್ ಪಟ್ಟಣ್ ಕೂಡ ಸಾಥ್ ನೀಡಿದ್ದಾರೆ. ಬಳಿಕ ಒಂದೇ ಕಾರಿನಲ್ಲಿ ಸಿಎಂ, ಡಿಸಿಎಂ ರಾಹುಲ್ ಗಾಂಧಿ ಭೇಟಿಗಾಗಿ ಕಾಂಗ್ರೆಸ್ ಕಚೇರಿಗೆ ತೆರಳಿದ್ದರು.
ಹೈಕಮಾಂಡ್ ನಾಯಕರಿಗೆ ವಿವರ ನೀಡಿದ ಸಿಎಂ, ಡಿಸಿಎಂ..
ಇನ್ನೂ ಪ್ರಮಖವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತದ ಬಗ್ಗೆ ಪಕ್ಷದ ವರಿಷ್ಠ ನಾಯಕರಿಗೆ ಸಂಪೂರ್ಣವಾದ ವಿವರವನ್ನು ನೀಡಿದ್ದಾರೆ. ಅಲ್ಲದೆ ಘಟನೆಯ ಬಳಿಕ ಸರ್ಕಾರ ಯಾವೆಲ್ಲ ಕ್ರಮಗಳನ್ನು ತೆಗೆದುಕೊಂಡಿದೆ ಎಂಬ ಬಗ್ಗೆಯೂ ಮಾಹಿತಿಯನ್ನು ಸಂಸದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ, ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ ನೀಡಿದ್ದಾರೆ. ಈ ವೇಳೆ ದುರಂತದ ಬಗ್ಗೆ ಹೈಕಮಾಂಡ್ ನಾಯಕರು ಸಿಎಂ ಹಾಗೂ ಡಿಸಿಎಂ ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ.
ಕಳಪೆ ಪ್ರದರ್ಶನ ತೋರಿದ ಸಚಿವರಿಗೆ ಗೇಟ್ ಪಾಸ್ ನೀಡೋ ಚಿಂತನೆ..
ಈಗಾಗಲೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ಪೊರೈಸಿರುವ ರಾಜ್ಯ ಸರ್ಕಾರಕ್ಕೆ ಮೇಜರ್ ಸರ್ಜರಿಯ ಅವಶ್ಯಕತೆ ಎನ್ನುವ ಮಾತುಗಳು, ಚರ್ಷೆಗಳು ಆಗಾಗ್ಗೆ ಕೇಳಿ ಬರುತ್ತಿದ್ದವು. ಸಚಿವಸ್ಥಾನದ ಅವಕಾಶ ವಂಚಿತ ಹಿರಿಯ ಶಾಸಕರು ಪಕ್ದದ ನಾಯಕರ ವಿರುದ್ಧ ಬಹಿರಂಗ ಅಸಮಾಧಾನದ ಜೊತೆಗೆ ತಮ್ಮ ಆಕಾಂಕ್ಷೆಯನ್ನೂ ಹೊರಹಾಕಿದ್ದರು. ಆದರೆ ಇದನೆಲ್ಲವನ್ನು ಗಮನಿಸಿರುವ ಹೈಕಮಾಂಡ್ ನಾಯಕರು ಕಳಪೆ ಪ್ರದರ್ಶನ ನೀಡಿರುವ 6 ರಿಂದ 10 ಜನ ಸಚಿವರಿಗೆ ಗೇಟ್ ಪಾಸ್ ನೀಡುವುದರ ಜೊತೆಗೆ ಪ್ರಮುಖರ ಖಾತೆ ಬದಲಾವಣೆಯ ಬಗ್ಗೆಯೂ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಜಾರಕಿಹೊಳಿಗೆ ಒಲಿಯುತ್ತಾ ಕೆಪಿಸಿಸಿ ಪಟ್ಟ..?
ಇಷ್ಟೇ ಅಲ್ಲದೆ ತೀವ್ರ ಚರ್ಚೆಗೆ ಕಾರಣವಾಗಿದ್ದ ಜಾತಿ ಜನಗಣತಿ ವರದಿ, ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಬಗ್ಗೆಯೂ ತೀರ್ಮಾನಗಳು ಹೊರ ಬೀಳುವ ಲಕ್ಷಣಗಳು ದಟ್ಟವಾಗಿವೆ.
ಇನ್ನೂ ಅತ್ಯಂತ ಪ್ರಮುಖವಾಗಿ ಕಳೆದ ಬಾರಿಯಷ್ಟೇ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿ ಬಂದಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮತ್ತೆ ಹೈಕಮಾಂಡ್ ಬುಲಾವ್ ನೀಡಿ ಕರೆಯಿಸಿಕೊಂಡಿದ್ದು, ಕೆಪಿಸಿಸಿ ಪಟ್ಟವನ್ನು ಅವರ ಹೆಗಲಿಗೆ ಹೊರೆಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಯಾಕೆಂದರೆ ಈ ಮೊದಲಿನಿಂದಲೂ ಪಕ್ಷದ ಅಧ್ಯಕ್ಷಗಿರಿಯ ಮೇಲೆ ಕಣ್ನಿಟ್ಟಿರುವ ಜಾರಕಿಹೊಳಿ ಅವರಿಗೆ ಸಿಹಿ ಸುದ್ದಿ ಶೀಘ್ರದಲ್ಲೇ ದೊರೆಯಲಿದೆ ಎನ್ನಲಾಗುತ್ತಿದೆ.
ದುರಂತ ದೊಡ್ಡ ಪ್ರಮಾಣದಲ್ಲಿ ಆಗಿರೋದ್ರಿಂದ ವರದಿ ಕೇಳಿದ್ದಾರೆ..
ತಮ್ಮ ಭೇಟಿಯ ಬಗ್ಗೆ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಸತೀಶ್ ಜಾರಕಿಹೊಳಿ, ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಘಟನೆ ಬಗ್ಗೆ ವರದಿ ನೀಡಲು ಹೈಕಮಾಂಡ್ ಭೇಟಿಗೆ ಸಿಎಂ ಡಿಸಿಎಂ ಬಂದಿದ್ದಾರೆ. ಸಹಜವಾಗಿ ವರದಿ ಕೇಳಿದೆ, ದೊಡ್ಡ ಪ್ರಮಾಣದಲ್ಲಿ ಆಗಿರೋದ್ರಿಂದ ಹೈಕಮಾಂಡ್ ವರದಿ ಕೇಳಿದೆ. ನಾನು ಹೈಕಮಾಂಡ್ ಭೇಟಿಗೆ ಹೋಗಿಲ್ಲ ಸಿಎಂ ಡಿಸಿಎಂ ಹೋಗಿದ್ದಾರೆ. ಕಾಲ್ತುಳಿತದಲ್ಲಿ ಸರ್ಕಾರದ ಲೋಪ ಇದೆಯಾ ಇಲ್ವಾ? ಅಥವಾ ಇದಕ್ಕೆ ಯಾರು ಹೊಣೆ? ಅನ್ನೋದರ ಬಗ್ಗೆ ತನಿಖೆ ನಡೆಯುತ್ತಿದೆ. ನ್ಯಾ. ಕುನ್ಹಾ ಅವರು ತನಿಖೆ ಮಾಡ್ತಿದ್ದಾರೆ ವರದಿ ಬಂದ ಬಳಿಕ ಏನು ಅಂತಾ ತಿಳಿಯಲಿದೆ ಎಂದು ತಿಳಿಸಿದ್ದಾರೆ. ಪ್ರಮುಖವಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ದಿಲ್ಲಿ ಯಾತ್ರೆಯ ಬಳಿಕ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಭಾರಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.