Hubli News: ಹುಬ್ಬಳ್ಳಿ: ‘ಸಶಕ್ತ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಹಿಂದೂಗಳು ಮೂರು ಮಕ್ಕಳಿಗೆ ಜನ್ಮ ನೀಡಬೇಕು. ಮೂರನೇ ಮಗುವಿನ ಜವಾಬ್ದಾರಿಯನ್ನು ಪರಿಷತ್ ವಹಿಸಿಕೊಳ್ಳುತ್ತದೆ’ ಎಂದು ಅಂತರರಾಷ್ಟೀಯ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರವೀಣಭಾಯಿ ತೊಗಾಡಿಯಾ ಭರವಸೆ ನೀಡಿದರು.
‘ಹಿಂದೂಗಳ ಸುರಕ್ಷತೆ ನಮ್ಮ ಮುಖ್ಯ ಧ್ಯೇಯವಾಗಿದ್ದು, ಅದರಂತೆ ಹಿಂದೂಗಳ ಜನಸಂಖ್ಯೆಯನ್ನೂ ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ಹಿಂದೂ ದಂಪತಿ ಮೂರು ಮಕ್ಕಳಿಗೆ ಜನ್ಮ ನೀಡಬೇಕು. ಮೂರನೇ ಮಗುವಿನ ಶೈಕ್ಷಣಿಕ ಜವಾಬ್ದಾರಿ ನಮ್ಮದಾಗಿದ್ದು, ಅಂತಹ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು. ತೀನ್ ಬಚ್ಚೆ, ಹಿಂದೂ ಸಚ್ಚೆ; ಬಾಕಿ ಸಬ್ ಕಚ್ಚೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಕರ್ನಾಟಕ ರಾಜ್ಯದಲ್ಲಷ್ಟೇ ಅಲ್ಲ, ದೇಶದ ಎಲ್ಲ ರಾಜ್ಯಗಳಲ್ಲಿಯೂ ಹಿಂದೂಗಳ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡುವಂತಾಗಿದೆ. ಪೆಹಲ್ಗಾಮ್, ಅಸ್ಸಾಂ, ಪಶ್ಚಿಮ ಬಂಗಾಲ ಸೇರಿದಂತೆ ವಿವಧೆಡೆ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಸಂವಿಧಾನದ ಭರವಸೆ, ಆಶಯದ ಮೇಲೆ ರಚಿತವಾದ ಯಾವುದೇ ಪಕ್ಷದ ಸರ್ಕಾರವಾಗಿರಲಿ, ಹಿಂದೂಗಳ ರಕ್ಷಣೆ ವಿಷಯದಲ್ಲಿ ತಾರತಮ್ಯ ಮಾಡಬಾರದು. ರಾಜಕೀಯ, ರಾಜನೀತಿಯನ್ನು ಬದಿಗಿಟ್ಟು ಹಿಂದೂಗಳ ರಕ್ಷಣೆಗೆ ಮುಂದಾಗಬೇಕು’ ಎಂದು ಆಗ್ರಹಿಸಿದರು.