Political News: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉಡುಪಿಯಲ್ಲಿ ಮಾಧ್ಯಮದ ಜತೆ ಮಾತನಾಡಿದ್ದು, ಯೋಗ ನಮ್ಮ ಜೀವನದ 1 ಭಾಗವಾಗಿದೆ. ಪ್ರತಿನಿತ್ಯ ನಾನು ಯೋಗ ಮಾಡುತ್ತೇನೆ. ನನ್ನ ತಾಯಿ, ನಾವು 5 ಜನ ಅಕ್ಕ ತಂಗಿಯರು ಸೇರಿ ಯೋಗ ಮಾಡುತ್ತಿದ್ದೆವು. ಈಗಲೂ ನಾನು ಯೋಗ ಮಾಡುತ್ತೇನೆ. ರಾಮ್ದೇವ್ ಬಾಬಾ ಅವರ ಯೋಗ ಶಿಬಿರವನ್ನು ಕೂಡ ನಾನು 5 ಬಾರಿ ಅಟೆಂಡ್ ಮಾಡಿದ್ದೇನೆ ಅಂತಾ ಸಚಿವೆ ಹೆಬ್ಬಾಳ್ಕರ್ ಹೇಳಿದ್ದಾರೆ.
ಇನ್ನು ನಿನ್ನೆ ಉಡುಪಿಗೆ ಚಕ್ರವರ್ತಿ ಸೂಲಿಬೆಲೆ ಅವರು ಭೇಟಿ ನೀಡಲಿದ್ದಾರೆಂದು ಹೇಳಿದಾಗ, ಅವರು ಸುಳ್ಳಿನ ಚಕ್ರವರ್ತಿ. ಅವರು ಉಡುಪಿ ಪ್ರವಾಸಕ್ಕೆ ಬರಲಿ, ಆದರೆ ಇಲ್ಲಿನ ಜನರಲ್ಲಿ ದ್ವೇಷದ ಭಾವನೆ, ಸುಳ್ಳು ಬಿತ್ತೋ ಕೆಲಸ ಮಾಡೋದು ಬೇಡ ಅಂತಾ ಹೇಳಿದ್ದರು.
ಈ ಹೇಳಿಕೆಯನ್ನು ವಿರೋಧಿಸಿ, ಶಾಸಕ ಸುನೀಲ್ ಕುಮಾರ್ ಅವರು, ಚಕ್ರವರ್ತಿ ಸುಲಿಬೆಲೆಯವರ ಬಗ್ಗೆ ವ್ಯಂಗ್ಯದ ಮಾತನಾಡುವ ಯಾವುದೇ ನೈತಿಕ ಅಧಿಕಾರ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಇಲ್ಲ. ನಿಮಗೆ ಭಾರತೀಯತೆ, ಇತಿಹಾಸದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ. ನಿಮ್ಮ ಇಲಾಖೆ ವ್ಯಾಪ್ತಿಯಲ್ಲಿ ಎಷ್ಟು ಅಂಗನವಾಡಿಗಳಿವೆ, ಅಪೌಷ್ಠಿಕತೆಯ ಪ್ರಮಾಣ ಎಷ್ಟಿದೆ ? ಎಂಬ ಬಗ್ಗೆಯೇ ಜ್ಞಾನವಿಲ್ಲದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಉಡುಪಿ ಜಿಲ್ಲೆಯ ಬಗ್ಗೆಯಾಗಲಿ, ಚಕ್ರವರ್ತಿ ಸುಲಿಬೆಲೆಯವರ ಬಗ್ಗೆಯಾಗಲಿ, ಭಾರತೀಯತೆಯ ಬಗ್ಗೆಯಾಗಲಿ ಮಾತನಾಡುವ ಅರ್ಹತೆ ಹೊಂದಿಲ್ಲ.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದವರ ಪರವಾಗಿ ವಕಾಲತ್ತು ವಹಿಸಿದ ನೀವು ಕುಂದಾಪುರದಲ್ಲಿ ಚಕ್ರವರ್ತಿ ಸೂಲಿಬೆಲೆಯವರ ಭಾಷಣಕ್ಕೆ ಪೊಲೀಸ್ ಬಲದ ಮೂಲಕ ವಿರೋಧ ವ್ಯಕ್ತಪಡಿಸುತ್ತಿರುವುದು ಸಹಿಸಲು ಸಾಧ್ಯವಿಲ್ಲ. ಇದು ತುರ್ತುಪರಿಸ್ಥಿತಿಯ ಇನ್ನೊಂದು ಮುಖ ಎಂದು ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದರು.
ಈ ವ್ಯಂಗ್ಯಕ್ಕೆ ಇಂದು ಪ್ರತಿಕ್ರಿಯಿಸಿರುವ ಸಚಿವೆ, ನನ್ನ ಬಗ್ಗೆ ಮಾತನಾಡುವ ನೈತಿಕತೆ ಸುನೀಲ್ ಕುಮಾರ್ ಅವರಿಗೆ ಇಲ್ಲ. 69 ಸಾವಿರ ಅಂಗನವಾಡಿಗಳು, 12 ಸಾವಿರ ಬಾಡಿಗೆ ಕಟ್ಟಡಗಳಿದೆ. ಇನ್ನೂ ಏನೇನು ವಿಷಯ ಬೇಕೋ ಕೇಳಲಿ. ಆದರೆ ಅವರು ಮಿನಿಸ್ಟರ್ ಆಗಿದ್ದರಲ್ಲ. ಅದರ ಮಾಹಿತಿ ಅವರಿಗೆ ತಿಳಿದಿದೆಯಾ..? ನಾನು ಹೇಳಲಾ..? ಅವರ ನಾಲ್ಕು ನಿಗಮದ ಬಗ್ಗೆ ನಾನು ಮಾತನಾಡಲಾ..? ಅಂತಾ ಪ್ರಶ್ನಿಸಿದ್ದಾರೆ. ಉಡುಪಿಗೆ ಬರಲಿ. ಬಂದು ಎದುರು ನಿಂತು ಮಾತನಾಡಲಿ, ನಾನು ಮಾತನಾಡಲು ಸಿದ್ಧಳಿದ್ದೇನೆ. ಅವರು ತಮ್ಮನ್ನು ತಾವು ಸರ್ವಜ್ಞರು ಅಂತಾ ತಿಳಿದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.