ನವದೆಹಲಿ : ರಾಜ್ಯದಲ್ಲಿ ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಈ ಮೂಲಕ ಪಟ್ಟದ ಫೈಟ್ ಗೆ ಪೂರ್ಣ ವಿರಾಮ ನೀಡಿದ್ದಾರೆ.
ನವದೆಹಲಿಯಲ್ಲಿ ಹೈಕಮಾಂಡ್ ಭೇಟಿಗೂ ಮುನ್ನ ಸಂದರ್ಶನವೊಂದರಲ್ಲಿ ಮಾತಾನಾಡಿರುವ ಅವರು, ನಾನು ಡಿಕೆಶಿ ಇಬ್ಬರು ಹೈಕಮಾಂಡ್ ಆದೇಶ ಪಾಲಿಸಬೇಕು. ಡಿಕೆ ಶಿವಕುಮಾರ್ ಸಿಎಂ ಬದಲಾವಣೆಯ ಬಗ್ಗೆ ಕೇಳಿಲ್ಲ ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆಯನ್ನು ಅಲ್ಲಗಳೆದಿದ್ದಾರೆ.
ನಾನು ಸಿಎಂ ಆಗಿ ಕರ್ನಾಟಕದಲ್ಲಿಯೇ ಮುಂದುವರೆಯುವೆ. ನನ್ನ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ. ನಮ್ಮ ನಡುವೆ ಯಾವುದೇ ತಿಕ್ಕಾಟ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಡಿಕೆ ಶಿವಕುಮಾರ್ ಅವರು ಸಿಎಂ ಸ್ಥಾನದ ಆಕಾಂಕ್ಷಿ, ಅವರೂ ಕೆಲಸ ಮಾಡಿದ್ದಾರೆ. ಅವರೇ ಸಿಎಂ ಹುದ್ದೆ ಖಾಲಿ ಇಲ್ಲ ಎಂದಿದ್ದಾರೆ. ನಾನು ಕೇಂದ್ರದಲ್ಲಿ ಒಬಿಸಿ ಸದಸ್ಯನಾಗಿರುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿ ಇಷ್ಟು ದಿನಗಳ ಕಾಲ ನಡೆಯುತ್ತಿದ್ದ ಕುರ್ಚಿ ಕಲಹ ಇದೀಗ ದೆಹಲಿಗೆ ಶಿಫ್ಟ್ ಆಗಿದ್ದು, ಅಲ್ಲಿಯೂ ಸಿದ್ದು ತಮ್ಮ ಮಾತಿನಲ್ಲಿಯೇ ಡಿಕೆ ಕನಸಿಗೆ ಗುದ್ದು ನೀಡಿರುವುದು ಕೈ ವಲಯದಲ್ಲಿ ಮತ್ತೆ ಕಂಪನಕ್ಕೆ ಕಾರಣವಾಗಿದೆ. ಈ ಮೂಲಕ ಮುಖ್ಯವಾಗಿ ಇಷ್ಟುದಿನಗಳ ಕಾಲ ಸಿಎಂ ಹುದ್ದೆಗಾಗಿ ಕಸರತ್ತು ನಡೆಸುತ್ತಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಶಾಕ್ ನೀಡಿದ್ದಂತಾಗಿದೆ. ಸಿದ್ದರಾಮಯ್ಯ ಅವರ ಈ ಹೇಳಿಕೆಯನ್ನು ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿಯಾಗಿ ಪರಿಗಣಿಸುತ್ತದೆ ಎನ್ನುವುದು ಸದ್ಯದ ಕುತೂಹಲವಾಗಿದೆ.