Hubli: ಹುಬ್ಬಳ್ಳಿ: ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಟ್ರಸ್ಟ್ ನಡುವಿನ ಗುದ್ದಾಟ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಹುಬ್ಬಳ್ಳಿ ನಗರದಲ್ಲಿ ಪಂಚಮಸಾಲಿ ಮುಖಂಡ ನೀಲಕಂಠ ಅಸೂಟಿ ಹೇಳಿಕೆ ನೀಡಿದ್ದಾರೆ.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸ್ವಾಮೀಜಿ ಧರ್ಮ ಕಾರ್ಯ ಹೆಚ್ಚು ಮಾಡಬೇಕು ಅನ್ನೋದು ನಮ್ಮ ನಿರೀಕ್ಷೆ ಇತ್ತು. ಆದ್ರೆ ಅವರ ತಿರುಗಾಟ ಬಹಳ ಆಯ್ತು. ರಾಜಕಾರಣಿಗಳ ಒಡನಾಟ ಹೆಚ್ಚಾಯ್ತು. ಟ್ರಾನ್ಸಪರ್ ಮಾಡಿಸೋದು ಸೇರಿದಂತೆ ಅನೇಕ ಕೆಲಸ ಮಾಡಿದ್ರು. ಇದು ಸ್ವಾಮೀಜಿಯವರು ಮಾಡೋ ಕೆಲಸವಲ್ಲಾ ಎಂದು ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಅಸೂಟಿ ಆಕ್ರೋಶ ವ್ಯಕ್ತಪಡಿಸಿದರು.
ರಾಜಕಾರಣಿ ಕಂಡಂತೆ ಸ್ವಾಮೀಜಿ ಕಾಣಲು ಆರಂಭಿಸಿದ್ದಾರೆ. ಇದು ಸಮಾಜದ ಮುಖಂಡರ ನೋವಿಗೆ ಕಾರಣವಾಗಿತ್ತು. ಅವರು ಪೀಠದಲ್ಲಿಯೇ ಇರ್ತಿರಲಿಲ್ಲಾ. ಎರಡು ವರ್ಷದಿಂದ ಮಠಕ್ಕೆ ಸ್ವಾಮೀಜಿ ಬಂದೇ ಇಲ್ಲಾ. ಮಠಕ್ಕೆ ಬಂದು ವಾಸ್ತವ್ಯ ಮಾಡಿ ಅಂತ ಅನೇಕ ಬಾರಿ ಹೇಳಿದ್ದೆವು. ಯಾರು ಇಲ್ಲದೇ ಇದ್ದಾಗ ಬೇರೆ ಬೇರೆ ಚಟುವಟಿಕೆ ನಡೆಯುತ್ತಿದ್ದವು. ಹೀಗಾಗಿ ಅದಕ್ಕೆ ಬೀಗ ಹಾಕಲು ಟ್ರಸ್ಟ್ ನಿರ್ಧಾರ ಕೈಗೊಂಡಿತ್ತು. ಆದ್ರೆ ಏಕಾಏಕಿ ಹೋಗಿ ಅದನ್ನು ಮುರಿದಿದ್ದಾರೆ ಎಂದರು.
ನಿತ್ಯ ಅಲ್ಲಿ ಇದ್ದಿದ್ದರೆ ಅದಕ್ಕೆ ಬೀಗ ಹಾಕೋ ಪ್ರಶ್ನೆಯೇ ಇರ್ತಿರಲಿಲ್ಲಾ. ಸ್ವಾಮೀಜಿ ಸ್ಟೈಲ್ ಸರಿಯಿಲ್ಲಾ. ಸ್ವಾಮೀಜಿ ಕೆಲಸ ಮಾಡಬಾರದು ಅಂತ ಹೇಳಿದ್ದೆವು. 2019 ರಲ್ಲಿಯೇ ಸ್ವಾಮೀಜಿ ಗೆ ನೋಟಿಸ್ ನೀಡಿದ್ದೆವು. ಆಗ ನಾನು ಸರಿ ಮಾಡಿಕೊಂಡು ಹೋಗ್ತೇನೆ ಅಂತ ಸ್ವಾಮೀಜಿ ಪತ್ರ ಕೂಡಾ ನೀಡಿದ್ದರು. ಆದರೂ ಕೂಡಾ ಅವರು ತಮ್ಮ ವರ್ತನೆಯನ್ನು ಸರಿ ಮಾಡಿಕೊಂಡಿಲ್ಲಾ. ಸ್ವಾಮೀಜಿ ಪಟ್ಟಾಭಿಷೇಕ ದಲ್ಲಿ ಪ್ರಮುಖ ಕೆಲಸ ಮಾಡಿದ್ದು ವಿಜಯಾನಂದ ಕಾಶಪ್ಪನವರ ಎಂದು ಅವರು ಹೇಳಿದರು.