ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕಡಪನಕೆರೆ ಗ್ರಾಮದ ಹೃದಯವಿದ್ರಾವಕ ಘಟನೆ ಮನಸ್ಸು ಕಲ್ಲಾಗಿಸುವಂತಾಗಿದೆ. 23 ವರ್ಷದ ಗೃಹಿಣಿ ಸರಿತಾ ತನ್ನ ಇಬ್ಬರು ಮುದ್ದಾದ ಮಕ್ಕಳನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುಂಚೆ, 4 ವರ್ಷದ ಮಗ ಕೌಶಿಕ್ ಮತ್ತು 1 ವರ್ಷದ ಮಗಳು ಯುಕ್ತಿಯನ್ನು ಹತ್ಯೆ ಮಾಡಿದ್ದಾರೆ.
ಸರಿತಾ, ಆರು ವರ್ಷಗಳ ಹಿಂದೆ ಗ್ರಾಮದ ಆಟೋ ಚಾಲಕ ಸಂತೋಷ್ ಜೊತೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ದರು. ಇನ್ನು ವರದಿಗಳ ಪ್ರಕಾರ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸರಿತಾ ಮಕ್ಕಳು ಹತ್ಯೆಗೈದ ಬಳಿಕ ತಾನು ನೇಣಿಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಮದುವೆಯ ನಂತರ ಪತಿ ಮತ್ತು ಅವರ ಕುಟುಂಬದಿಂದ ವರದಕ್ಷಿಣೆ ಕಿರುಕುಳ ಕೇಳಿಬಂದಿದೆ. ಇದೇ ಕಾರಣದಿಂದ ಮಾನಸಿಕ ಒತ್ತಡದ ಹಿನ್ನೆಲೆಯಲ್ಲಿ ಸರಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ. ಈ ಪ್ರಕರಣ ಸಂಬಂಧ ಪಾವಗಡ ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ, ಮೃತಳ ಕುಟುಂಬದ ಅಧಿಕೃತ ದೂರಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

