ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ನವೆಂಬರ್ನಲ್ಲಿ ಸಂಪುಟ ಪುನಾರಚನೆ ಫಿಕ್ಸ್ ಅಂತ್ಲೇ ಹೇಳಲಾಗ್ತಿದೆ. ಈ ಮಧ್ಯೆ ನಿಗಮ ಮಂಡಳಿ ಆಕಾಂಕ್ಷಿಗಳಿಗೆ, ದಸರಾ ಗಿಫ್ಟ್ ನೀಡಲು ಹೈಕಮಾಂಡ್ ನಿರ್ಧರಿಸಿದೆ. 35ರಿಂದ 37 ಕಾಂಗ್ರೆಸ್ ನಾಯಕರಿಗೆ, ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಸಿದ್ಧತೆ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಸಿದ್ಧಪಡಿಸಿದ ಪಟ್ಟಿ, ಅಂತಿಮ ಅನುಮೋದನೆಗೆ ಕಾಯುತ್ತಿದೆ. ಸಿಎಂ, ಡಿಸಿಎಂ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಸುದೀರ್ಘ ಚರ್ಚೆ ನಡೆಸಿದ್ದರು. ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ಗೆ ಪಟ್ಟಿ ಸಲ್ಲಿಸಿದ್ರು. ಸದ್ಯ, 2 ದಿನದ ಹಿಂದೆ ಅಂತಿಮ ಪಟ್ಟಿ ಮಲ್ಲಿಕಾರ್ಜುನ ಖರ್ಗೆ ಕೈಸೇರಿದೆ.
ಮಾಜಿ ಶಾಸಕ ಎನ್. ಸಂಪಂಗಿ, ಆಸ್ಕರ್ ಫರ್ನಾಂಡಿಸ್ ಆಪ್ತ ಗಫೂರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆಘಾ ಸುಲ್ತಾನ್ ಸೇರಿ, ಹಲವರಿಗೆ ಅಧ್ಯಕ್ಷಗಿರಿ ಭಾಗ್ಯ ಒಲಿಯುವ ಸಾಧ್ಯತೆ ಇದೆ. ಕಾಂಗ್ರೆಸ್ ನಾಯಕ ಎಂ.ಎಲ್. ಮೂರ್ತಿಗೆ, ಮೈಸೂರಿನ ಮುಡಾ ಅಧ್ಯಕ್ಷ ಸ್ಥಾನ ದೊರೆಯುವ ನಿರೀಕ್ಷೆ ಇದೆ.
ಇನ್ನು, ಮಲ್ಲಿಕಾರ್ಜುನ ಖರ್ಗೆ ಕೆಲ ಬದಲಾವಣೆಗಳೊಂದಿಗೆ ಪಟ್ಟಿ ಅಂತಿಮಗೊಳಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶೀಘ್ರವೇ ರವಾನಿಸಲಿದ್ದಾರೆ. ಮುಖ್ಯಮಂತ್ರಿಗಳ ಆದೇಶದ ಬಳಿಕ ಸಂಬಂಧಪಟ್ಟ ಇಲಾಖೆಗಳಿಂದ, ನೇಮಕಾತಿ ಆದೇಶ ಹೊರ ಬೀಳಲಿದೆ.