Political News: ಡಿ.ಕೆ.ಶಿವಕುಮಾರ್ ಅವರನ್ನು ರಬ್ಬರ್ ಸ್ಟ್ಯಾಂಪ್ ಸಿಎಂ ಎಂದ ಆರ್.ಅಶೋಕ್

Political News: ಎಂದಿನಂತೆ ತಮ್ಮ ವಿಪಕ್ಷ ನಾಯಕರಾದ ಆರ್.ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ಮತ್ತು ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬರ ನಿರ್ವಹಣೆ ವಿಚಾರವಾಗಿ ವಾಗ್ದಾಳಿ ನಡೆಸಿರುವ ಆರ್.ಅಶೋಕ್, ರಬ್ಬರ್ ಸ್ಟ್ಯಾಂಪ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ಕರ್ನಾಟಕ ಕಂಡ ಅತ್ಯಂತ ದುರ್ಬಲ ಹಾಗೂ ಅಸಹಾಯಕರ ಮುಖ್ಯಮಂತ್ರಿ ಎಂದರೆ ಅದು ನೀವೇ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಂದು ಕಡೆ ರಾಜ್ಯದಲ್ಲಿ ಕೃಷಿ, ಶಿಕ್ಷಣ, ಉನ್ನತ ಶಿಕ್ಷಣ, ಸಮಾಜ ಕಲ್ಯಾಣದಂತಹ ಪ್ರಮುಖ ಇಲಾಖೆಗಳು ಸಚಿವರಿಲ್ಲದೆ ಅನಾಥವಾಗಿ ಆಡಳಿತ ಯಂತ್ರ ಸಂಪೂರ್ಣ ಕಸಿದುಬಿದ್ದಿದೆ. ಬರ, ಕಾವೇರಿ ಬಿಕ್ಕಟ್ಟಿನಿಂದ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ.

ಆದರೆ, ನಿಮ್ಮ ದುರಹಂಕಾರಿ ಹೈಕಮಾಂಡ್ ಮತ್ತು ನಾಲಾಯಕ್ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತ್ರ ಕರ್ನಾಟಕದ ಹಿತಾಸಕ್ತಿಗಿಂತ ತಮ್ಮ ರಾಜಕೀಯ ಮೇಲಾಟವೇ ಹೆಚ್ಚಾಯಿತು. ಮುಖ್ಯಮಂತ್ರಿ ಆದಿಯಾಗಿ 40-45 ಸಚಿವಾಕಾಂಕ್ಷಿ ಶಾಸಕರನ್ನು ಕಳೆದ ಒಂದು ವಾರದಿಂದ ದೆಹಲಿಯ ಬೀದಿಗಳಲ್ಲಿ, ಹೈಕಮಾಂಡ್ ಅರಮನೆಯ ಪಡಸಾಲೆಗಳಲ್ಲಿ ಚಾತಕ ಪಕ್ಷಿಗಳಂತೆ ಕಾಯಿಸಿ, ಅಪಮಾನಿಸುತ್ತಿದ್ದರೂ ಹೈಕಮಾಂಡ್ ನಾಯಕರ ಮುಂದೆ ಧ್ವನಿ ಎತ್ತಲಾಗದ ನಿಮ್ಮ ಈ ಅಸಹಾಯಕತೆಯನ್ನ ಗುಲಾಮಗಿರಿ ಅನ್ನದೇ ಇನ್ನೇನ್ನಲು ಸಾಧ್ಯ? ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಪ್ರಮಾಣ ವಚನ ಸ್ವೀಕರಿಸಿ ಎರಡು ತಿಂಗಳಾಗುತ್ತಾ ಬಂದರೂ ಒಂದು ಸಂಪುಟ ವಿಸ್ತರಣೆ ಮಾಡಲು ದೆಹಲಿ ಹೈಕಮಾಂಡ್‌ ಬಾಗಿಲಲ್ಲಿ ಕಾವಲು ಕಾಯುತ್ತಾ ನಿಂತಿರುವುದು 7 ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಘೋರ ಅವಮಾನ. ಅಧಿಕಾರಕ್ಕಾಗಿ ಸ್ವಾಭಿಮಾನವನ್ನೇ ದೆಹಲಿ ಸುಲ್ತಾನರ ಅಡಿಗೆ ಇಟ್ಟಿರುವ ನಿಮಗೇಕೆ ಬೇಕು ಈ ಮುಖ್ಯಮಂತ್ರಿ ಕುರ್ಚಿ? ನಿಮ್ಮ ಹೈಕಮಾಂಡ್ ಆಟಾಟೋಪಕ್ಕೆ ರಾಜ್ಯದ ಆಡಳಿತ, ಅಭಿವೃದ್ಧಿ ಬಲಿಯಾಗುವುದನ್ನು ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಆರ್.ಅಶೋಕ್ ಹೇಳಿದ್ದಾರೆ.

About The Author