ಬಿಹಾರದಲ್ಲಿ ‘ಮಹಾಘಟಬಂಧನ’ ಸರ್ಕಾರ ರಚನೆ ಖಚಿತ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದ್ದಾರೆ. 20 ವರ್ಷಗಳಿಂದ ಮುಂದುವರೆದ ದುರ್ಬಲ ಆಡಳಿತಕ್ಕೆ ಕೊನೆ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಮತದಾನದ ಎರಡನೇ ಹಂತಕ್ಕೂ ಒಂದು ದಿನ ಮುನ್ನ ನೀಡಿದ ಈ ಹೇಳಿಕೆ ರಾಜಕೀಯ ವಲಯದಲ್ಲಿ ವಿಶೇಷ ಪ್ರಾಮುಖ್ಯತೆ ಪಡೆದಿದೆ. ಬಿಹಾರದ ವೈಭವವನ್ನು ನಾವು ಪುನಃಸ್ಥಾಪಿಸುತ್ತೇವೆ. ಮಹಾಘಟಬಂಧನ ಸರ್ಕಾರ ರಚನೆಯಾದ ಕೂಡಲೇ ಜನತೆಗೆ ನೀಡಿರುವ ಎಲ್ಲ ಭರವಸೆಗಳನ್ನು ಜಾರಿಗೆ ತರಲಾಗುವುದು ಎಂದು ಖರ್ಗೆ ಭರವಸೆ ನೀಡಿದರು.
ಇನ್ನು ಮುಂದೆ ಬಿಹಾರದ ಯುವಕರು ಉದ್ಯೋಗಕ್ಕಾಗಿ ವಲಸೆ ಹೋಗಬೇಕಾಗಿಲ್ಲ. ಬಿಹಾರದ ಪ್ರತಿಯೊಂದು ಮನೆ ಉಜ್ವಲ ಭವಿಷ್ಯವನ್ನು ಕಾಣಲಿದೆ. ಅನ್ಯಾಯ ಅಂತ್ಯವಾಗುತ್ತದೆ. ಸಾಮಾಜಿಕ ನ್ಯಾಯ ನೆಲೆಸುತ್ತದೆ. ದಲಿತರು, ಬುಡಕಟ್ಟು ಜನಾಂಗ, ಹಿಂದುಳಿದ ವರ್ಗಗಳು, ಆರ್ಥಿಕವಾಗಿ ದುರ್ಬಲ ವರ್ಗಗಳು ಹಾಗೂ ಅಲ್ಪಸಂಖ್ಯಾತರು ತಮ್ಮ ಹಕ್ಕುಗಳನ್ನು ಪಡೆಯುತ್ತಾರೆ ಎಂದರು.
ಖರ್ಗೆ ಅವರು ಮಹಿಳೆಯರು, ರೈತರು ಹಾಗೂ ಯುವಜನರ ಆರ್ಥಿಕ ಪ್ರಗತಿಯನ್ನು ಸರ್ಕಾರದ ಪ್ರಮುಖ ಆದ್ಯತೆಯನ್ನಾಗಿಸಲು ಮಹಾಘಟಬಂಧನ ಬದ್ಧವಾಗಿದೆ ಎಂದರು. ಬಿಹಾರದ ಚಿತ್ರಣವನ್ನು ಬದಲಾಯಿಸುವ ಸಮಯ ಬಂದಿದೆ. ಬಿಹಾರದ ಹೆಮ್ಮೆಯನ್ನು ಪುನಃಸ್ಥಾಪಿಸುವುದು ನಮ್ಮ ಸಂಕಲ್ಪ ಎಂದು ಖರ್ಗೆ ದೃಢ ನಿಲುವು ವ್ಯಕ್ತಪಡಿಸಿದರು.
ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಅಂತಿಮ ಹಂತದ ಮತದಾನ ನಾಳೆ (ನವೆಂಬರ್ 11) ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ರಾಜಕೀಯ ವಲಯದಲ್ಲಿ ಮಹಾಘಟಬಂಧನ ಸರ್ಕಾರದ ರಚನೆ ಬಿಹಾರದ ಭವಿಷ್ಯವನ್ನು ಬದಲಾಯಿಸುವ ಪ್ರಮುಖ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ.
ವರದಿ : ಲಾವಣ್ಯ ಅನಿಗೋಳ


