Political News: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಜ್ಯೋತಿಷಿ ಕಮಲಾಕರ ಭಟ್ ಸುಚಿತ್ರಾ ಎಂಬುವರ ಜತೆ ಅನೈತಿಕ ಸಂಬಂಧವಿರಿಸಿದ್ದು, ಆ ಕೇಸ್ನಲ್ಲಿ ಓರ್ವ ವ್ಯಕ್ತಿಯ ಹತ್ಯೆಯೂ ನಡೆದಿದೆ.
ಕಮಲಾಕರ್ ಜೈಲಿಗೆ ಹೋಗುತ್ತಿದ್ದ ಹಾಗೆ, ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಕಮಲಾಕರ್ ಅವರ ಜತೆಗಿರುವ ಫೋಟೋವನ್ನು ಶೇರ್ ಮಾಡಿದ್ದ, ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್, ಈ ಕೇಸ್ನಲ್ಲಿ ಸುರೇಶ್ ಕುಮಾರ್ ಕೈವಾಡವಿರಬಹುದು. ಸರಿಯಾದ ತನಿಖೆ ನಡೆಸಿ ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುರೇಶ್, ತೀಕ್ಷ್ಮವಾಗಿಯೇ ಬಿ.ಕೆ.ಹರಿಪ್ರಸಾದ್ರನ್ನು ತಿವಿದಿದ್ದಾರೆ. ಆ ಬರವಣಿಗೆ ಇಂತಿದೆ.
ಶ್ರೀ ಬಿ.ಕೆ. ಹರಿಪ್ರಸಾದ್ ಅವರೇ,
ನಿಮ್ಮ ಫೇಸ್ಬುಕ್ ಬರಹವನ್ನು ಗಮನಿಸಿದೆ.
ಕಾರವಾರದ ಸಿದ್ದಾಪುರದಲ್ಲಿ ನಡೆದ ಹೇಯ ಕೃತ್ಯವೊಂದನ್ನು ಮುಂದಿಟ್ಟುಕೊಂಡು, ಅದಕ್ಕೆ ರಾಜಕೀಯ ಬಣ್ಣ ಬಳಿದು, ನನ್ನ ಹೆಸರನ್ನು ತಳುಕು ಹಾಕಲು ನೀವು ನಡೆಸಿರುವ ಪ್ರಯತ್ನ ನಿಮ್ಮ “ಬೌದ್ಧಿಕ ದಿವಾಳಿತನ”ವನ್ನು ಎತ್ತಿ ತೋರಿಸುವಂತಿದೆ.
ಒಬ್ಬ ವ್ಯಕ್ತಿ ಮಾಡಿದ ಅಪರಾಧಕ್ಕೆ, ಆತನ ಪರಿಚಯವಿದ್ದ ಜನಪ್ರತಿನಿಧಿಯೇ “ನೈತಿಕ ಹೊಣೆ” ಹೊರಬೇಕು ಎಂಬ ನಿಮ್ಮ ವಾದ ಬಾಲಿಶವಾದದ್ದು. ಸಾರ್ವಜನಿಕ ಜೀವನದಲ್ಲಿರುವ ನಾವು ಸಾವಿರಾರು ಜನರನ್ನು ಭೇಟಿಯಾಗುತ್ತೇವೆ. ಯಾರೋ ಒಬ್ಬರು ನನ್ನ ಜೊತೆ ಫೋಟೋ ತೆಗೆಸಿಕೊಂಡರು ಅಥವಾ ಪರಿಚಯಸ್ಥರಾಗಿದ್ದರು ಎಂಬ ಒಂದೇ ಕಾರಣಕ್ಕೆ, ಅವರ ಖಾಸಗಿ ಬದುಕಿನ ವಿಕೃತಿಗಳಿಗೆ ಅಥವಾ ಅವರು ಎಸಗುವ ಕ್ರಿಮಿನಲ್ ಕೃತ್ಯಗಳಿಗೆ ನಾನು ಉತ್ತರದಾಯಿಯಾಗುತ್ತೇನೆಯೇ? ಹಾಗಾದರೆ, ನಿಮ್ಮ ಪಕ್ಷದ ನಾಯಕರ ಜೊತೆ ಫೋಟೋ ತೆಗೆಿಸಿಕೊಂಡವರು, ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡವರು ಜೈಲು ಪಾಲಾದ ಉದಾಹರಣೆಗಳಿಲ್ಲವೇ? ಆಗ ನಿಮ್ಮ ನಾಯಕರುಗಳೆಲ್ಲ ಆ ಅಪರಾಧಗಳ “ನೈತಿಕ ಹೊಣೆ” ಹೊತ್ತಿದ್ದಾರೆಯೇ?
ಬಹಳ ಹಿಂದೆ ಯಶವಂತಪುರದ ಪೆಟ್ರೋಲ್ ಬಂಕ್ ಬಳಿ ನನ್ನ ಗಾಡಿಗೆ ಇಂಧನ ತುಂಬಿಸುತ್ತಿರುವಾಗ ಈ ವ್ಯಕ್ತಿಯ ಪರಿಚಯವಾಗಿತ್ತು. ನಾನು ಒಮ್ಮೆ ಮಾತ್ರ ಅವರನ್ನು ಭೇಟಿ ಮಾಡಿರುವುದು. ಈಗೇನಾದರೂ ನನಗೆ ಎದುರಿಗೆ ಸಿಕ್ಕರೆ ಅವರನ್ನು ಗುರುತು ಹಿಡಿಯುವುದೂ ಅಸಾಧ್ಯ.
ನೀವು ನನಗೆ ಸಂವಿಧಾನದ ಆರ್ಟಿಕಲ್ 51A(h) ಪಾಠ ಮಾಡಲು ಬಂದಿದ್ದೀರಿ. ಒಬ್ಬ ಮಾಜಿ ಕಾನೂನು ಸಚಿವನಾಗಿ ಸಂವಿಧಾನದ ಪ್ರತಿಯೊಂದು ಸಾಲಿನ ಮಹತ್ವ ನನಗೆ ಚೆನ್ನಾಗಿ ತಿಳಿದಿದೆ. “ವೈಜ್ಞಾನಿಕ ಮನೋಭಾವ” ಮತ್ತು “ತಾರ್ಕಿಕತೆ” ಎಂದರೆ, ಘಟನೆಗಳ ಸತ್ಯಾಸತ್ಯತೆಯನ್ನು ಅರಿಯದೇ, ಕೇವಲ ರಾಜಕೀಯ ದ್ವೇಷಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುವುದಲ್ಲ. ತನಿಖೆ ನಡೆಯುತ್ತಿರುವ ಗಂಭೀರ ಪ್ರಕರಣವೊಂದರಲ್ಲಿ, ನೇರ ಸಾಕ್ಷ್ಯಗಳಿಲ್ಲದೇ ಒಬ್ಬ ಶಾಸಕನ ಪಾತ್ರವಿದೆ ಎಂದು ತೀರ್ಪು ನೀಡುವುದು ಯಾವ ರೀತಿಯ “ವೈಜ್ಞಾನಿಕ ಮನೋಭಾವ”? ಇದು ಪಕ್ಕಾ “ಪೂರ್ವಾಗ್ರಹ ಪೀಡಿತ ಮನಸ್ಥಿತಿ”. ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ ಇದು ಕೊಳೆತ ಮನಸ್ಥಿತಿ.
ನಾನು ಜ್ಯೋತಿಷ್ಯವನ್ನಾಗಲಿ ತುಂಬಾ ನಂಬುವನೂ ಅಲ್ಲ ಅಥವಾ ಯಾವುದೇ ಮೂಢನಂಬಿಕೆಯನ್ನಾಗಲಿ ಬೆಂಬಲಿಸುವನೂ ಅಲ್ಲ. ಆದರೆ, ಧಾರ್ಮಿಕ ನಂಬಿಕೆಗಳಿಗೂ, ಕ್ರಿಮಿನಲ್ ಚಟುವಟಿಕೆಗಳಿಗೂ ಇರುವ ವ್ಯತ್ಯಾಸ ತಿಳಿಯದಷ್ಟು ದಡ್ಡನೂ ನಾನಲ್ಲ. ಕೊಲೆಗಾರ ಕೊಲೆಗಾರನೇ, ಅವನು ಜ್ಯೋತಿಷಿಯಾಗಿರಲಿ ಅಥವಾ ರಾಜಕಾರಣಿಯಾಗಿರಲಿ. ಆತನಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯಾಗಬೇಕು ಎಂಬುದೇ ನನ್ನ ನಿಲುವು. ಅದನ್ನು ಬಿಟ್ಟು, “ಬಿಜೆಪಿಯವರಿಗೆ ಕ್ರಿಮಿನಲ್ ಗಳ ಜೊತೆ ಅವಿನಾಭಾವ ಸಂಬಂಧ” ಎಂದು ಸಾರಾಸಗಟಾಗಿ ಇಡೀ ಪಕ್ಷವನ್ನು ನಿಂದಿಸುವುದು ನಿಮ್ಮ ಹತಾಶೆಯನ್ನು ತೋರಿಸುತ್ತದೆ.
ಅಪರಾಧವನ್ನು ಅಪರಾಧವನ್ನಾಗಿ ನೋಡುವ ಸಂಸ್ಕಾರ ಬೆಳೆಸಿಕೊಳ್ಳಿ. ಶವದ ಮುಂದೆ ನಿಂತು ರಾಜಕೀಯ ಲಾಭ ಹುಡುಕುವ ನಿಮ್ಮ ಚಾಳಿ, ಸ್ವಸ್ಥ ಸಮಾಜಕ್ಕೆ ಮತ್ತು ನೀವು ಉಲ್ಲೇಖಿಸಿದ ಸಂವಿಧಾನಕ್ಕೆ ಮಾಡುವ ದ್ರೋಹ.
ಇನ್ನಾದರೂ ಆಧಾರರಹಿತ ಆರೋಪಗಳನ್ನು ನಿಲ್ಲಿಸಿ, ಘನತೆಯುತ ರಾಜಕಾರಣ ಮಾಡಿ.
ಎಂಇಎಸ್ ಕಾಲೇಜಿನಲ್ಲಿ ಮತ್ತು ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ನಾವಿಬ್ಬರು ಒಟ್ಟಿಗೆ ಶಿಕ್ಷಣ ಪಡೆದಿದ್ದೆವು ಎಂಬುದನ್ನು ನೆನಪಿಸಿಕೊಳ್ಳಲೂ ಇಂದು ಬೇಸರವೆನಿಸುತ್ತದೆ.
ಆ ಭಗವಂತ ನಿಮಗೆ ಸದ್ಬುದ್ದಿ ನೀಡಲಿ.




