ಮಾಜಿ ಸಂಸದ ಪ್ರತಾಪ್ ಸಿಂಹರ ‘ಕಟ್’ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸೂರ್ಜೇವಾಲಾ

Political News: ನಿನ್ನೆ ಬಾಗಲಕೋಟೆಯಲ್ಲಿ ಬಿಜೆಪಿ ಪ್ರಚಾರದ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವಾಗ್ದಾಳಿ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸೂರ್ಜೇವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಪ್ರತಾಪ್ ಸಿಂಹ ನೀಡಿರುವ ಹೀನಾಯ “ಕಟ್” ಹೇಳಿಕೆ ಬಿಜೆಪಿಯ ನೀಚ ರಾಜಕಾರಣವನ್ನು ಮತ್ತೊಮ್ಮೆ ಬಟ್ಟಬಯಲು ಮಾಡಿದೆ. ಪ್ರತಾಪ್ ಸಿಂಹರ ಈ ಆಕ್ರೋಶ ಹತಾಶೆಯಿಂದ ಹುಟ್ಟಿದ್ದು ಎನ್ನುವುದು ಈಗ ಸ್ಪಷ್ಟ. ಹಿಂದುಳಿದ ಸಮುದಾಯದ ಅತ್ಯಂತ ಹಿರಿಯ ನಾಯಕರಾದ ಶ್ರೀ ಸಿದ್ದರಾಮಯ್ಯನವರನ್ನು ಅವಮಾನಿಸಲು ಬಿಜೆಪಿ ಉದ್ದೇಶಪೂರ್ವಕವಾಗಿ ಪ್ರತಾಪ್ ಸಿಂಹರನ್ನು ಬಳಸಿಕೊಳ್ಳುತ್ತಿದೆ — ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಅಲ್ಪಸಂಖ್ಯಾತರನ್ನು ತಮ್ಮ ಮನುವಾದಿ ದೃಷ್ಟಿಕೋನದ ಅನುಸಾರ ಕೀಳಾಗಿ ಮತ್ತು ಅಧೀನರಾಗಿ ಕಾಣುತ್ತೇವೆ ಎಂಬ ಸಂದೇಶವನ್ನು ರವಾನಿಸುವ ಏಕೈಕ ಉದ್ದೇಶದಿಂದ. ಇಂತಹ ನಡವಳಿಕೆ ಬಿಜೆಪಿಯಲ್ಲಿನ ವಿಚಾರ, ನೈತಿಕತೆ ಮತ್ತು ನಾಯಕತ್ವದ ಸಂಪೂರ್ಣ ದಿವಾಳಿತನವನ್ನು ಬಯಲು ಮಾಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ “ಕೊಂದು ದೇಹವನ್ನು ಫ್ರಿಡ್ಜ್‌ನಲ್ಲಿ ತುಂಬುತ್ತೇವೆ” ಎಂಬ ಹೇಯ ಬೆದರಿಕೆ ಸೇರಿದಂತೆ ಈ ಹಿಂದೆ ಇದೇ ವಿಭಜನಕಾರಿ ಶಕ್ತಿಗಳಿಂದ ಜೀವಬೆದರಿಕೆಗಳು ಕೊಡ ಬಂದಿವೆ ಎಂದು ರಣದೀಪ್ ಸಿಂಗ್ ಸೂರ್ಜೇವಾಲಾ ಹೇಳಿದ್ದಾರೆ.

ಇದು ಒಬ್ಬ ವ್ಯಕ್ತಿಯ ಹುಚ್ಚಾಟವಲ್ಲ — ಇದು ಬಿಜೆಪಿಯ ರಾಜಕೀಯ ಸಂಸ್ಕೃತಿಯೇ ಆಗಿದೆ. ಇದೇ ಪ್ರತಾಪ್ ಸಿಂಹ ಬಿಜೆಪಿ ಕೇಂದ್ರ ನಾಯಕತ್ವದ ಸೂಚನೆಯ ಮೇರೆಗೆ ಜನರಿಂದ ಆಯ್ಕೆಯಾದ ಕಾಂಗ್ರೆಸ್ ಕರ್ನಾಟಕ ಸರ್ಕಾರವನ್ನು ಒಮ್ಮೆಯಲ್ಲ, ಪದೇ ಪದೇ “ತಾಲಿಬಾನ್ ಸರ್ಕಾರ” ಎಂದು ಕರೆದವರು. ವಿಷಕಾರಿ ಭಾಷಣ ಹರಡುವುದರಲ್ಲಿ ಬಿಜೆಪಿ ನಾಯಕರು ಮರು ಅಪರಾಧಿಗಳು. ಮಾಜಿ ಸಂಸದ ಅನಂತಕುಮಾರ್ ಹೆಗಡೆ ಕೇಂದ್ರ ಸಚಿವರಾಗಿದ್ದಾಗಲೇ ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿಯನ್ನು ಬಹಿರಂಗವಾಗಿ ಅವಮಾನಿಸಿದರು. ಬಿಜೆಪಿ ಶಾಸಕ ಸಿ.ಟಿ. ರವಿ ಕರ್ನಾಟಕ ವಿಧಾನಪರಿಷತ್ತಿನ ಒಳಗೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅವಮಾನಿಸಿ ಅತ್ಯಂತ ಕೆಳಮಟ್ಟಕ್ಕೆ ಇಳಿದರು. ಇತರ ಬಿಜೆಪಿ ನಾಯಕರು ವ್ಯಕ್ತಿಗಳನ್ನು, ಸಮುದಾಯಗಳನ್ನು ಮತ್ತು ಧರ್ಮಗಳನ್ನು ಅವಮಾನಿಸುವ, ಅಗೌರವಿಸುವ ಮತ್ತು ಹೀಯಾಳಿಸುವ ಹೇಳಿಕೆಗಳನ್ನು ನೀಡುವುದರಲ್ಲಿ ಮರು ಅಪರಾದಿಗಳಾಗಿದ್ದಾರೆ ಎಂದು ಸೂರ್ಜೇವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಂದನೆಯೇ ಬಿಜೆಪಿ ನಾಯಕರ ಮ್ಯಾಗ್ನಾ ಕಾರ್ಟಾ ಆಗಿರುವಾಗ, ಅವರಿಂದ ಅಭಿವೃದ್ಧಿ, ಪ್ರಗತಿ ಅಥವಾ ಸೌಹಾರ್ದದ ಭಾಷೆಯನ್ನು ನಿರೀಕ್ಷಿಸುವುದು ವ್ಯರ್ಥ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭೆ ಉಪಚುನಾವಣೆಗಳಲ್ಲಿ ಬಿಜೆಪಿಯ ಹತಾಶೆ ಜನರ ತಿರಸ್ಕಾರ ಮತ್ತು ಏಪ್ರಿಲ್ 9, 2026ರಂದು ಸನ್ನಿಹಿತ ಸೋಲಿನ ಮುನ್ಸೂಚನೆಯಿಂದ ಹುಟ್ಟಿದೆ. ಇದರಿಂದ ವಿಚಲಿತರಾದ ಮತ್ತು ಕನ್ನಡಿಗರ ಮೇಲೆ ಸಿಟ್ಟಿಗೆದ್ದ ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕತ್ವ ಈಗ ಬಡವರ ಮತ್ತು ಶೋಷಿತರ ನಾಯಕತ್ವದ ಮೇಲೆ — ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ನಿಂದನೆ ಮತ್ತು ಅವಮಾನ ಹೊರಿಸುವ ಕಾರ್ಯವನ್ನು ಪ್ರತಾಪ್ ಸಿಂಹರಂತಹ ವ್ಯಕ್ತಿಗಳಿಗೆ ವಹಿಸಿಕೊಟ್ಟಿದೆ ಎಂದು ಸೂರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ.

ಪರಮ ವಿಪರ್ಯಾಸ ಎಂದರೆ — ಬಿಜೆಪಿ ನಾಯಕತ್ವ ಮೊದಲು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿ ನಿರಾಕರಿಸಿತು. ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರನ್ನು ಬಹಿರಂಗವಾಗಿ “ಭ್ರಷ್ಟ ಕುಟುಂಬ” ಎಂದು ಕರೆಯುತ್ತಾರೆ. ಬಾಗಲಕೋಟೆ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಅದರ ಅಭ್ಯರ್ಥಿ ಶ್ರೀ ವೀರಣ್ಣ ಚರಂತಿಮಠ ಈಗ ಯತ್ನಾಳ್ ಅವರನ್ನೇ ತಮ್ಮ “ಸ್ಟಾರ್ ಪ್ರಚಾರಕ”ರನ್ನಾಗಿ ನೇಮಿಸಿಕೊಂಡಿದ್ದಾರೆ. ಸಾವಿರ ಹೋಳಾಗಿ ಒಡೆದಿರುವ, ಸ್ವಂತ ಮನೆಯನ್ನೇ ಸರಿ ಮಾಡಿಕೊಳ್ಳಲಾಗದ ಪಕ್ಷ ಈಗ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಅಲ್ಪಸಂಖ್ಯಾತರನ್ನು ಹಾಗೂ ಅವರ ನಾಯಕರಾದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಅವಮಾನಿಸುತ್ತಿದೆ.

ಕರ್ನಾಟಕಕ್ಕೆ ಪ್ರಗತಿಪರ ಚಿಂತನೆ, ವೈಜ್ಞಾನಿಕ ಮನೋಭಾವ, ಸರ್ವಧರ್ಮ ಸಮಭಾವ ಮತ್ತು ಸಾಮಾಜಿಕ ಸೌಹಾರ್ದದ ಹೆಮ್ಮೆಯ ಪರಂಪರೆ ಇದೆ. ರಾಜಕಾರಣವನ್ನು ಚರಂಡಿಗೆ ಎಳೆಯಲು ಹೊರಟ ಬಿಜೆಪಿ ನಾಯಕರ ಹಿಂದೆ ಸ್ವಾಭಿಮಾನಿ ಕನ್ನಡಿಗರು ಹೋಗುವುದಿಲ್ಲ ಎಂದು ರಣದೀಪ್ ಸಿಂಗ್ ಸೂರ್ಜೇವಾಲಾ ಹೇಳಿದ್ದಾರೆ.

ಅಲ್ಲದೇ, ಕೆಲ ವಿಷಯಗಳ ಬಗ್ಗೆ ರಣದೀಪ್ ಸಿಂಗ್ ಸೂರ್ಜೇವಾಲಾ ಆಗ್ರಹಿಸಿದ್ದು, ಕೆಲ ವಿಷಯಕ್ಕಾಗಿ ಕ್ಷಮೆ ಕೋರಬೇಕೆಂದು ಹೇಳಿದ್ದಾರೆ.

1. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶ್ರೀ ನಿತಿನ್ ನಬಿನ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಶ್ರೀ ಆರ್. ಅಶೋಕ ಅವರು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ನಾಯಕ ಶ್ರೀ ಪ್ರತಾಪ್ ಸಿಂಹ ನೀಡಿರುವ ಅವಹೇಳನಕಾರಿ ಮತ್ತು ಅಸಹನೀಯ ಹೇಳಿಕೆಗಳಿಗಾಗಿ 6.5 ಕೋಟಿ ಕನ್ನಡಿಗರಿಗೆ, ವಿಶೇಷವಾಗಿ ಒಬಿಸಿ, ಎಸ್‌ಸಿ ಮತ್ತು ಅಲ್ಪಸಂಖ್ಯಾತರಿಗೆ ಸಾರ್ವಜನಿಕ ಕ್ಷಮಾಪಣೆ ಕೋರಬೇಕು.

ಪ್ರತಾಪ್ ಸಿಂಹರ ಹೇಳಿಕೆಗಳನ್ನು ಒಪ್ಪದಿದ್ದರೆ ಮತ್ತು ಈ ಷಡ್ಯಂತ್ರದಲ್ಲಿ ಭಾಗಿಯಲ್ಲದಿದ್ದರೆ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಿ. ಹಾಗೆ ಮಾಡದಿದ್ದರೆ, ಈ ನೀಚ ಅವಮಾನ ಮತ್ತು ಅಗೌರವವನ್ನು ಹೇರಲು ಬಿಜೆಪಿಯ ರಾಜ್ಯ ಮತ್ತು ಕೇಂದ್ರ ನಾಯಕತ್ವ ಉದ್ದೇಶಪೂರ್ವಕವಾಗಿ ಪ್ರತಾಪ್ ಸಿಂಹರನ್ನು ನಿಯೋಜಿಸಿದೆ ಎಂಬುದು ಸಾಬೀತಾಗುತ್ತದೆ.

2. ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಬಿಜೆಪಿ ಮತ್ತು ಅದರ ನಾಯಕರು ಕ್ಷಮೆ ಕೇಳದಿದ್ದರೆ, ಬಡವರು ಮತ್ತು ತುಳಿತಕ್ಕೊಳಗಾದವರು ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ.

ಈ ರೀತಿಯಾಗಿ ಎಕ್ಸ್ ಖಾತೆಯಲ್ಲಿ ರಣದೀಪ್ ಸಿಂಗ್ ಸೂರ್ಜೇವಾಲಾ ಬರೆದಿದ್ದು, ಬಿಜೆಪಿ ಮತ್ತು ಪ್ರತಾಪ್ ಸಿಂಹ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

About The Author